ಭ್ರಷ್ಟಾಚಾರ ಮತ್ತು ಅವ್ಯವಹಾರದಿಂದ ದೂರ ಸರಿದಿದ್ದ ಕೆಎಎಸ್ ನೇಮಕಾತಿಗೆ ಈಗ ಮತ್ತೆ ಜೀವ ಬಂದಿದೆ. ಎರಡು ವರ್ಷಗಳ ನಂತರ ಕೆಎಎಸ್ ನೇಮಕಾತಿಗೆ ಕೆಪಿಎಸ್ಸಿ ಮುಂದಾಗಿದೆ.
ಒಟ್ಟು 403 ಹುದ್ದೆಗಳ ಭರ್ತಿಗೆ ಮುಂದಿನ ವಾರವೇ ಅಧಿಸೂಚನೆ ಹೊರಡಿಸುವ ಮಾಹಿತಿ ಲಭ್ಯವಾಗಿದ್ದು, ಜೂನ್ ತಿಂಗಳಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಆಯೋಗದ ಮೂಲಗಳು ತಿಳಿಸಿವೆ.
403 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಮೀಸಲಾತಿ ಅನ್ವಯ ಹುದ್ದೆಗಳ ವಿಂಗಡಣೆ ಕಾರ್ಯ ನಡೆಯುತ್ತಿದೆ. ಮಹಿಳಾ ಮೀಸಲಾತಿಯನ್ನು ಶೇ.30ರಿಂದ 33ರಷ್ಟು ಹೆಚ್ಚಿಸಲಾಗಿದ್ದು, ಈ ವರ್ಷದಿಂದಲೇ ಇದು ಅನ್ವಯವಾಗಲಿದೆ. 403 ಹುದ್ದೆಗಳ ಪೈಕಿ 85 ಹುದ್ದೆಗಳು ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಮೀಸಲಿರಿಸಲಿದೆ.
ಕಳೆದ ಬಾರಿ ನಡೆದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಬಾರಿ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡಿದೆ. ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಸಂದರ್ಶಕರಿಗೆ ತಿಳಿಯದಂತೆ ಗೌಪ್ಯವಾಗಿರಿಸಲು ತಿರ್ಮಾನಿಸಿದೆ. ಸಂದರ್ಶನದಲ್ಲಿ ಒಟ್ಟು ಅಂಕಗಳ 12.5 ಅಂಕಗಳು ಮಾತ್ರ ಇರಲಿವೆ. ಆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕತೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಲದ ಪರೀಕ್ಷೆಯಲ್ಲಿ 0.25 ಋಣಾತ್ಮಕ ಅಂಕಗಳು ಇರಲಿವೆ. ಅರ್ಹ ಅಭ್ಯರ್ಥಿಗಳ ಅನುಪಾತ 1:3ರಿಂದ 1:5ಕ್ಕೆ ಏರಿಸಲಾಗಿದ್ದು, ಈ ವರ್ಷದಿಂದ ಅನ್ವಯವಾಗಲಿದೆ.
ಕನ್ನಡ ಕಡ್ಡಾಯಕ್ಕೆ ಆದೇಶ
ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, 150 ಅಂಕಗಳಿಗೆ ನಡೆಯುವ ಪರೀಕ್ಷೆಯಲ್ಲಿ ಕಡ್ಡಾಯವಾಗಿ 50 ಅಂಕಗಳನ್ನು ಪಡೆದರೆ ಮಾತ್ರ ಅರ್ಹತೆ ಪಡೆಯುತ್ತಾರೆ. ಕನ್ನಡದ ಬಗ್ಗೆ ಕನಿಷ್ಠ ತಿಳುವಳಿಕೆ ಬಗ್ಗೆ ಪರೀಕ್ಷಿಸಲು ಇಂತಹ ನಿರ್ಧಾರಕ್ಕೆ ಬರಲಾಗಿದೆ. ಆದರೆ ಇದು ಕನ್ನಡ ಪ್ರಥಮ ಅಥವಾ ದ್ವಿತೀಯ ಅಥವಾ ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿ ತೇರ್ಗಡೆ ಹೊಂದಿದವರಿಗೆ ಅನ್ವಯಿಸುವುದಿಲ್ಲ.