ಎಂಜಿನಿಯರಿಂಗ್ ಪದವಿಯನ್ನು ಅರ್ಧಕ್ಕೆ ಬಿಡುವ ವಿದ್ಯಾರ್ಥಿಗಳು ಇನ್ನು ಮುಂದೆ ಕಟ್ಟಿರುವ ಶುಲ್ಕದ ಬಗ್ಗೆ ಚಿಂತೆ ಮಾಡುವಂತಿಲ್ಲ. ಏಕೆಂದರೆ ವಿದ್ಯಾರ್ಥಿಗಳ ಶುಲ್ಕವು ದಾಖಲೆ ಸಮೇತ ಮರುಪಾವತಿಯಾಗಲಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಎಲ್ಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳಿಂದ ಪ್ರವೇಶದ ವೇಳೆ ಪಡೆದ ಶುಲ್ಕವನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದೆ. ವಿದ್ಯಾರ್ಥಿಯು ಎಲ್ಲಿಯವರೆಗೂ ಕಾಲೇಜಿನಲ್ಲಿ ಓದಿರುತ್ತಾನೋ ಅಷ್ಟು ಹಣವನ್ನು ಬಿಟ್ಟು ಮಿಕ್ಕ ಶುಲ್ಕವನ್ನು ಮರುಪಾವತಿಸುವಂತೆ ಎಐಸಿಟಿಇ ದೇಶದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಶುಲ್ಕದ ಜೊತೆ ದಾಖಲೆಗಳನ್ನು ನೀಡಬೇಕು
ಎಐಸಿಟಿಇ ನಿರ್ದೇಶನದಂತೆ ಕೇವಲ ಶುಲ್ಕ ಮರುಪಾವತಿಸುವದಷ್ಟೇ ಅಲ್ಲದೇ ಕಾಲೇಜುಗಳು ವಿದ್ಯಾರ್ಥಿ ಪ್ರವೇಶಾತಿ ಸಂದರ್ಭದಲ್ಲಿ ನೀಡಿರುವ ಎಲ್ಲ ದಾಖಲೆಗಳನ್ನು 7 ದಿನದ ಒಳಗಡೆ ಹಿಂದಿರುಗಿಸಲು ಸೂಚಿಸಿದೆ.
ಆದೇಶದ ವಿವರ
2017- 18ರ ಎಐಸಿಟಿಇಯ ಕೈಪಿಡಿ ಪ್ರಕಟವಾಗಿದ್ದು ಅದರಲ್ಲಿ ಶುಲ್ಕದ ಮರುಪಾವತಿ ಬಗ್ಗೆ ಪ್ರಸ್ತಾಪಿಸಲಾಗಿದೆ . ಈ ಕೈಪಿಡಿಯಲ್ಲಿ ಕೋರ್ಸ್ ಆರಂಭವಾಗುವ ಮುನ್ನವೇ ಕಾಲೇಜನ್ನು ಬಿಟ್ಟರೆ ಪ್ರವೇಶಾತಿ ಪ್ರಕ್ರಿಯೆಗಳಿಗೆ 1 ಸಾವಿರ ರೂ. ಶುಲ್ಕಗಳನ್ನು ತೆಗೆದುಕೊಂಡು ಉಳಿದ ಎಲ್ಲ ಶುಲ್ಕಗಳನ್ನು ಮರು ಪಾವತಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಒಂದು ವೇಳೆ ತರಗತಿ ಆರಂಭಗೊಂಡು ಅರ್ಧದಿಂದ ವಿದ್ಯಾರ್ಥಿ ಕೈಬಿಟ್ಟರೆ ಅದುವರೆಗಿನ ಅವಧಿಯ ಶುಲ್ಕವನ್ನು ಮತ್ತು ಹಾಸ್ಟೆಲ್ ಶುಲ್ಕವನ್ನು ತೆಗೆದುಕೊಂಡು ಉಳಿದ ಶುಲ್ಕವನ್ನು ವಾಪಸ್ ಮಾಡಬೇಕೆಂದು ಸೂಚಿಸಿದೆ.
ಅರ್ಧದಲ್ಲೇ ಕೈ ಬಿಟ್ಟ ವಿದ್ಯಾರ್ಥಿಗಳ ದಾಖಲೆಗಳನ್ನು ಕಾಲೇಜಿನಲ್ಲೇ ಇಟ್ಟುಕೊಳ್ಳುವುದನ್ನು ಎಐಸಿಟಿಇ ನಿಷೇಧಿಸಿದೆ. ಕೆಲ ದಿನಗಳ ಹಿಂದೆ ಯುಜಿಸಿ ಎಲ್ಲ ಕಾಲೇಜುಗಳಿಗೆ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಪಡೆದುಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿತ್ತು.
ಕಾಲೇಜುಗಳ ಮೇಲೆ ಕಠಿಣ ಕ್ರಮ
ಒಂದು ವೇಳೆ ಈ ನಿರ್ದೇಶನವನ್ನು ಕಾಲೇಜುಗಳು ಉಲ್ಲಂಘಿಸಿದಲ್ಲಿ ಕಾಲೇಜುಗಳ ಮೇಲೆ ಎಐಸಿಟಿಇ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದರೆ ಕೊಡಬೇಕಾಗಿರುವ ಶುಲ್ಕದ ದುಪ್ಪಟ್ಟು ಹಣವನ್ನು ವಿದ್ಯಾರ್ಥಿಗೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಕಾಲೇಜಿನ ಕೋರ್ಸ್ಗಳಿಗೆ ಮಂಜೂರು ಮಾಡಿದ ಅನುಮೋದನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಎಐಸಿಟಿಇ ತನ್ನ ಹ್ಯಾಂಡ್ ಬುಕ್ನಲ್ಲಿ ತಿಳಿಸಲಾಗಿದೆ.
ದೇಶದಲ್ಲಿ 3 ಸಾವಿರಕ್ಕೂ ಅಧಿಕ ನೋಂದಾಯಿತ ಎಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತಿವರ್ಷ 7 ಲಕ್ಷ ಎಂಜಿನಿಯರ್ ಪದವೀಧರರು ಹೊರ ಬರುತ್ತಿದ್ದಾರೆ. ಇದರ ಮಧ್ಯೆ ಅನೇಕ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಬೇರೆ ಕ್ಷೇತ್ರಗಳ ಮುಖಮಾಡುತ್ತಿದ್ದಾರೆ. ಹೀಗೆ ಪದವಿಯಿಂದ ಅರ್ಧಕ್ಕೆ ಹಿಂದೆ ಸರಿದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಾಕಷ್ಟು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮವನ್ನು ಕೈಗೊಂಡಿದೆ.