ಕೆಲ ತಿಂಗಳ ಹಿಂದಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ಶತಕದ ಸಂಭ್ರಮವನ್ನು ಆಚರಿಸಿತ್ತು. ಈಗ ಧಾರವಾಡದ ಕರ್ನಾಟಕದ ಕಾಲೇಜು ನೂರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.
ಕರ್ನಾಟಕ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿರುವ ಅತ್ಯಂತ ಹಳೆಯ ಕಾಲೇಜು. ಸುಮಾರು 55 ಎಕರೆ ವಿಸ್ತೀರ್ಣದಲ್ಲಿ ಹಸಿರು ಕ್ಯಾಂಪಸ್ ಹೊಂದಿರುವ ಈ ಕಾಲೇಜು ಧಾರವಾಡದ ಹೃದಯ ಭಾಗದಲ್ಲಿದ್ದು, ಕಲೆ ಮತ್ತು ವಿಜ್ಞಾನ ಕಾಲೇಜು ಬಿ.ಎ, ಬಿ.ಕಾಮ್ ಮತ್ತು ಬಿ.ಎಸ್ಸಿ ಪದವಿಗಳನ್ನು ನೀಡುತ್ತಿರುವ ಕರ್ನಾಟಕದ ಅತ್ಯಂತ ಹಳೆಯ ವಿದ್ಯಾಸಂಸ್ಥೆಗಳ ಪೈಕಿ ಒಂದು. ಆರಂಭದಲ್ಲಿ ಇದು ಮುಂಬಯಿ ವಿಶ್ವವಿದ್ಯಾಲಯದ ಭಾಗವಾಗಿತ್ತು.
1917ರ ಜೂನ್ 20ರಂದು ಗಂಡು ಮಕ್ಕಳ ಟ್ರೈನಿಂಗ್ ಶಾಲೆಯಲ್ಲಿ ಆರಂಭವಾದ ಕರ್ನಾಟಕ ಕಾಲೇಜು ಇಂದು ಬೃಹಾದಾಕಾರವಾಗಿ ಬೆಳೆದಿದೆ. ಕೇವಲ ಐದು ವಿಷಯ ಬೋಧನೆ ಹಾಗೂ 160 ವಿದ್ಯಾರ್ಥಿಗಳಿಂದ ಆರಂಭವಾಗಿ ಇಂದು ಐವತ್ತು ವಿಷಯಗಳಲ್ಲಿ ಆರು ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನ ನೀಡುವಷ್ಟು ಬೆಳೆದು ನಿಂತಿರುವುದಲ್ಲದೇ ಇದುವರೆಗೂ ಲಕ್ಷಾಂತರ ಮಂದಿಗೆ ವಿದ್ಯಾಭ್ಯಾಸವನ್ನು ನೀಡಿರುವ ಈ ಕಾಲೇಜು ಹಲವು ಮಹಾನೀಯರನ್ನು ಸಮಾಜಕ್ಕೆ ಕಾಣಿಕೆಯಾಗಿ ನೀಡಿದೆ.
ಕಾಲೇಜಿನ ಇತಿಹಾಸ
1917 ರಲ್ಲಿ ರೊದ್ದ ಶ್ರೀನಿವಾಸರಾಯರು, ಅರಟಾಳ ರುದ್ರಗೌಡರು ಹಾಗೂ ಸರ್ ಸಿದ್ಧಪ್ಪ ಕಂಬಳಿ ಅವರ ಅಪಾರ ಪರಿಶ್ರಮದಿಂದ ಕರ್ನಾಟಕ ಕಾಲೇಜು ಸ್ಥಾಪನೆಯಾಯಿತು.
''ಕಾಲೇಜು ಸ್ಥಾಪನೆಗೆ ಬ್ರಿಟಿಷ್ ಸರ್ಕಾರಕ್ಕೆ ನೀಡಬೇಕಾಗಿದ್ದ 2 ಲಕ್ಷ ಹಣ ಸಂಗ್ರಹಿಸಲು ಶ್ರೀನಿವಾಸರಾಯರು ಹಾಗೂ ರುದ್ರಗೌಡರು ಜೋಳಿಗೆ ಹಾಕಿದ್ದರಂತೆ. ಆ ಸಂದರ್ಭದಲ್ಲಿ ಅವರಿಗೆ ನಿರೀಕ್ಷೆಗಿಂತಲೂ ಹೆಚ್ಚು ಹಣ ಸಂಗ್ರಹವಾಗಿತ್ತು. ಇದು ಇಲ್ಲಿನ ಶಿಕ್ಷಣ ಪ್ರೀತಿಗೆ ಹಿಡಿದ ಕನ್ನಡಿ'' ಎನ್ನುತ್ತಾರೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ.
''1919 ರಲ್ಲಿ ಮುಂಬೈ ಪ್ರಾಂತ್ಯದ ಗವರ್ನರ್ ಜಾರ್ಜ್ ಲೈಡ್ ಅವರು ಇಲ್ಲಿನ ಚೋಟಾ ಮಹಾಬಲೇಶ್ವರ ಅಂದರೆ ಈಗಿನ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಕಾಲೇಜಿಗಾಗಿ ಅಡಿಗಲ್ಲು ಹಾಕಿದರೂ ಕಟ್ಟಡ ನಿರ್ಮಾಣವಾಗಲಿಲ್ಲ. ನಂತರ 'ಸದರನ್ ಮರಾಠಾ ರೈಲ್ವೆ' ಕಟ್ಟಡವನ್ನೇ ಕಾಲೇಜಿಗೆ ಪಡೆಯುವ ಚಿಂತನೆ ನಡೆಸಿದರು. ಮದ್ರಾಸ್ ಆಡಳಿತದ ವಶದಲ್ಲಿದ್ದ ಈ ಕಟ್ಟಡವನ್ನು 6 ಲಕ್ಷ ರೂಪಾಯಿಗೆ ಖರೀದಿಸಿ ಕರ್ನಾಟಕ ಕಾಲೇಜಿಗೆ ನೀಡಿದರು. ಈಗಲೂ ಇದೇ ಕಟ್ಟಡದಲ್ಲಿಯೇ ಕಾಲೇಜು ಕಾರ್ಯನಿರ್ವಹಿಸುತ್ತಿದೆ.
ನೂರರ ಸಂಭ್ರಮಕ್ಕೆ ಸಿದ್ಧತೆ
ಕಾಲೇಜು ನೂರು ವರ್ಷ ಪೂರೈಸಿದ ನೆನೆಪನ್ನು ಇನ್ನಷ್ಟು ಹಸಿರಾಗಿಸಲು ಸರ್ಕಾರವು ₹ 25ಕೋಟಿ ನೀಡುವ ಭರವಸೆ ನೀಡಿದ್ದು, ಈಗಾಗಲೇ ₹5 ಕೋಟಿ ಬಿಡುಗಡೆ ಮಾಡಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಈಗಾಗಲೇ ನೂರರ ಸಂಭ್ರಮಕ್ಕೆ ಸಿದ್ಧತೆ ನಡೆಸಿದೆ.
''ಕಾಲೇಜು ಬೆಳವಣಿಗೆಗೆ ಕೊಡುಗೆ ನೀಡಿದವರನ್ನು, ಉನ್ನತ ಸಾಧನೆ ಮಾಡಿದ ಹಳೇ ವಿದ್ಯಾರ್ಥಿಗಳನ್ನು ಶತಮಾನೋತ್ಸವ ಸಂದರ್ಭದಲ್ಲಿ ಗೌರವಿಸಲಾಗುವುದು' ಎಂದರು.
100 ಪುಸ್ತಕ ಹೊರ ತರುವ ಯೋಜನೆ
'ಶತಮಾನೋತ್ಸವದ ಸಂದರ್ಭದಲ್ಲಿ ಈ ಸವಿ ನೆನಪಿಗೊಸ್ಕರ ನೂರು ಪುಸ್ತಕ ಹೊರತರುವ ಯೋಚನೆ ಹೊಂದಲಾಗಿದೆ' ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ತಿಳಿಸಿದ್ದಾರೆ.
''ಮೆನಜೆನ್, ಫ್ಯಾರನ್, ಗೋಕಾಕರು ಸೇರಿದಂತೆ ಹಲವರು ಈ ಕಾಲೇಜಿನ ಪ್ರಾಚಾರ್ಯರಾಗಿ ಕಾಲೇಜಿನ ಘನತೆ ಹೆಚ್ಚಿಸಿದ್ದಾರೆ. ಅವರ ಕುರಿತಾಗಿ 'ತೇರನ್ನು ಎಳೆದವರು', ಕಾಲೇಜಿನ ಘನತೆಯ ಕಿರೀಟಕ್ಕೆ ಗರಿಯನ್ನಿಟ್ಟವರ ಕುರಿತಾಗಿ 'ಮಲ್ಲಿಗೆ ತಂದವರು', ಡಾ. ಡಿ.ಸಿ.ಪಾವಟೆ, ಪ್ರೊ. ನಂಜುಂಡಪ್ಪ, ಡಾ. ಪಾಟೀಲ ಪುಟ್ಟಪ್ಪ, ಡಾ. ಚೆನ್ನವೀರ ಕಣವಿ ಸೇರಿದಂತೆ ಹಲವರ ಕೊಡುಗೆ ಸ್ಮರಿಸುವ 'ನೆಲದ ನಕ್ಷತ್ರಗಳು' ಎಂಬ ಕೃತಿಗಳನ್ನು ಹೊರತರಲು ಚಿಂತನೆ ನಡೆದಿದೆ'' ಎಂದು ಅವರು ಮಾಹಿತಿ ನೀಡಿದ್ದಾರೆ.
ಹಳೆ ವಿದ್ಯಾರ್ಥಿಗಳ ಕಥೆ ಕವನ ಸಂಗ್ರಹ
ಕಾಲೇಜಿನ ಲಕ್ಷಾಂತರ ಹಳೆಯ ವಿದ್ಯಾರ್ಥಿಗಳು ಶತಮಾನೋತ್ಸವ ಸಂಭ್ರಮದಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿದ್ದು, ಆಸಕ್ತ ಹಳೇ ವಿದ್ಯಾರ್ಥಿಗಳಿಂದಲೂ ಕಥೆ ಹಾಗೂ ಕವನಗಳನ್ನು ಆಹ್ವಾನಿಸಿ ಪ್ರಕಟಿಸಲು ನಿರ್ಧರಿಸಲಾಗಿದೆ.
ಕರ್ನಾಟಕ ಕಾಲೇಜಿನ ಶತಮನೋತ್ಸವದ ಸವಿ ನೆನಪಿಗಾಗಿ ವರ್ಷವಿಡೀ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಪ್ರತಿ ವಿಭಾಗದಿಂದ ಹತ್ತು ರಾಷ್ಟ್ರೀಯ ವಿಚಾರ ಸಂಕಿರಣ, ಎರಡು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸುವ ಚಿಂತನೆ ಇದ್ದು, ವಿದ್ಯಾರ್ಥಿಗಳ ಈ ವರ್ಷದ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ನಂತರ ಶತಮಾನೋತ್ಸವದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಲಾಗಿದೆ.