ಕಲಾ ಸೇವೆಗೆ ಮುಡಿಪಾಗಿದ್ದ ವರನಟ ಡಾ.ರಾಜ್ ಕುಮಾರ್ ಕುಟುಂಬ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಸಿದ್ಧವಾಗಿದೆ. ಸಮಾಜಕ್ಕೆ ಉತ್ತಮವಾದದನ್ನು ಮಾಡಬೇಕೆಂಬ ಡಾ.ರಾಜ್ ಆಶಯ ಈಗ "ಡಾ.ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ" ಮೂಲಕ ಈಡೇರುತ್ತಿದೆ.
ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆ ಅಲಂಕರಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಬಯಸುವ ಸಾವಿರಾರು ವಿದ್ಯಾರ್ಥಿಗಳ ಕನಸಿಗೆ ಜೀವ ತುಂಬುವ ಕೆಲಸಕ್ಕೆ ರಾಜ್ ಕುಟುಂಬ ಕೈ ಜೋಡಿಸಿದೆ.
ಐಎಎಸ್/ಐಪಿಎಸ್ ಸೇರಿದಂತೆ ವಿವಿಧ ನಾಗರಿಕ ಸೇವೆಗಳಿಗೆ ಸೇರಬಯಸುವ ಅಭ್ಯರ್ಥಿಗಳಿಗಾಗಿ ಪರೀಕ್ಷೆ ಎದುರಿಸಲು ಅಗತ್ಯವಿರುವ ತರಬೇತಿಯನ್ನು ತಜ್ಞರಿಂದ ನೀಡಲು ಡಾ.ರಾಜ್ಕುಮಾರ್ ಕುಟುಂಬ ಕೋಚಿಂಗ್ ಸೆಂಟರ್ ನಡೆಸುತ್ತಿದೆ.
'ಡಾ.ರಾಜಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ' ಹೆಸರಿನಲ್ಲಿ ಪ್ರಾರಂಭವಾಗುತ್ತಿರುವ ಈ ಕೇಂದ್ರವು ಕೇಂದ್ರ ಲೋಕಸೇವಾ ಆಯೋಗ ನಡೆಸುವ 'ನಾಗರಿಕ ಸೇವಾ ಪರೀಕ್ಷೆ'ಗಳಿಗೆ ತರಬೇತಿ ನೀಡುತ್ತಿದೆ. ರಾಜ್ಯದ ಐ ಎ ಎಸ್ ಆಕಾಂಕ್ಷಿಗಳು ತರಬೇತಿಗಾಗಿ ದೆಹಲಿ, ಹೈದ್ರಾಬಾದ್ ಎಂದು ಬೇರೆ ರಾಜ್ಯಗಳ ಕಡೆಗೆ ಹೋಗಬೇಕಿತ್ತು. ಇನ್ನು ಮುಂದೆ ಕರ್ನಾಟಕದಲ್ಲಿಯೇ ಉತ್ತಮ ತರಬೇತಿ ಪಡೆಯಬಹುದಾಗಿದೆ.
ನುರಿತ ತರಬೇತುದಾರರು
ಡಾ.ರಾಜ್ ಕುಮಾರ್ ಕುಟುಂಬದವರು ತೆರೆದಿರುವ "ಡಾ.ರಾಜ್ ಕುಮಾರ್ ಅಕಾಡೆಮಿ ಫಾರ್ ಸಿವಿಲ್ ಸರ್ವೀಸ್" ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು 150 ಕ್ಕೂ ಹೆಚ್ಚು ಯುಪಿಎಸ್ಸಿ ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಆಗಿ ಬಂದು ಮಾರ್ಗದರ್ಶನ ನೀಡಲಿದ್ದಾರೆ.
ಅಕಾಡೆಮಿಯ ಆಲೋಚನೆ
ರಾಘವೇಂದ್ರ ರಾಜ್ಕುಮಾರ್ ಪುತ್ರ ಗುರು ರಾಜ್ಕುಮಾರ್ರ ಗೆಳತಿ ಶ್ರೀದೇವಿ ಅನ್ನೋರು ಬೆಂಗಳೂರಿನಲ್ಲಿ ಸೌಲಭ್ಯ ಇಲ್ಲದ ಕಾರಣ ದೆಹಲಿಗೆ ಐಎಎಸ್ ಕೋಚಿಂಗ್ಗಾಗಿ ತೆರಳಿದ್ದರು. ಈ ವಿಷಯವನ್ನ ಗುರು ರಾಜ್ಕುಮಾರ್ ರಾಘವೇಂದ್ರ ರಾಜ್ಕುಮಾರ್ಗೆ ತಿಳಿಸಿದ್ರು. ಈ ಹಿನ್ನೆಲೆಯಲ್ಲಿ ಶ್ರೀದೇವಿ ಕಷ್ಟ ಎದುರಿಸುತ್ತಿದ್ದುದನ್ನು ನೋಡಿದ ಗುರು ರಾಜ್ಕುಮಾರ್ ಅವರ ತಂದೆಯೊಂದಿಗೆ ಸೇರಿ ಈ ಸಂಸ್ಥೆಯನ್ನು ತೆರೆದಿದ್ದಾರೆ.
ಕಡಿಮೆ ಖರ್ಚಿನಲ್ಲಿ ತರಬೇತಿ
ಪ್ರತಿಭಾವಂತ ಬಡ ಮಕ್ಕಳಿಗೆ ಸಹಕಾರಿಯಾಗಲೆಂದು ಸ್ಥಾಪಿಸಿರುವ ಈ ಶಿಕ್ಷಣ ಕೇಂದ್ರದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯಾರ್ಥಿಯು ತರಬೇತಿ ಪಡೆಯಬಹುದಾಗಿದೆ. ದೇಶದ ಇತರೆ ಅಕಾಡೆಮಿಗಿಂತ ಶೇ.50 ರಷ್ಟು ಶುಲ್ಕ ಕಡಿಮೆ ಇರಲಿದೆ.
ಗುಣಮಟ್ಟ
ಕನ್ನಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ದಿನದ 24 ಗಂಟೆಯೂ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಸೌಲಭ್ಯ ನೀಡಿರುವುದು ವಿಶೇಷ. ಈ ಅಕಾಡೆಮಿಯು ಒಂದು ಬಾರಿಗೆ 100 ರಿಂದ 250 ಅಭ್ಯರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ಹೊಂದಿದೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ಬಡಾವಣೆಗಳಲ್ಲೂ ಶಾಖೆಯನ್ನು ವಿಸ್ತರಿಸುವ ಯೋಜನೆಯನ್ನು ಅಕಾಡೆಮಿ ಹೊಂದಿದೆ.
ಕಾರ್ಯಾರಂಭ
ಈಗಾಗಲೇ ಹಲವಾರು ಕಾರ್ಯಗಾರಗಳನ್ನು ಅಕಾಡೆಮಿ ಮೂಲಕ ನಡೆಸಲಾಗಿದ್ದು ಮಾರ್ಚ್ 14 ರಂದು ಅಕಾಡೆಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕಾಡೆಮಿಯನ್ನು ಉದ್ಘಾಟಿಸಲಿದ್ದಾರೆ. ಇನ್ನು ರಾಜ್ ಕುಮಾರ್ ಜನ್ಮ ದಿನವಾದ ಏಪ್ರಿಲ್ 24 ರಿಂದ ಅಕಾಡೆಮಿಯಲ್ಲಿ ತರಗತಿಗಳು ಆರಂಭವಾಗಲಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ದೂರವಾಣಿ ಸಂಖ್ಯೆ: 9108448444, 9108449444
ಇ ಮೇಲ್ ವಿಳಾಸ: [email protected]
ವೆಬ್ ಸೈಟ್ https://drrajkumaracademy.com/
ಇದನ್ನು ಗಮನಿಸಿ:1090 ಸ್ಥಾನಗಳಿಗೆ ಸಿವಿಲ್ ಸರ್ವೀಸಸ್ ಪರೀಕ್ಷೆ ಅಧಿಸೂಚನೆ ಪ್ರಕಟ