ಖಾಸಗಿ ಶಾಲೆಗಳಲ್ಲಿ ಶಿಕ್ಷಕರಾಗಿ ಕಾರ್ಯನಿರ್ಹವಹಿಸುತ್ತಿರುವವರು ಕನಿಷ್ಠ ಅರ್ಹತೆಯನ್ನು ಹೊಂದಬೇಕಾಗುತ್ತದೆ, ಇಲ್ಲವಾದಲ್ಲಿ ಅಂತವರನ್ನು ನೇಮಕ ಮಾಡಿಕೊಂಡ ಶಿಕ್ಷಣ ಸಂಸ್ಥೆಗಳು ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಅಪೇಕ್ಷಿತ ವಿದ್ಯಾರ್ಹತೆ ಹೊಂದಿರದಿದ್ದರೂ ಹಣ ಉಳಿಸುವ ಉದ್ದೇಶದಿಂದ ಕಡಿಮೆ ವೇತನ ಕೊಟ್ಟು ಶಿಕ್ಷಕರನ್ನಾಗಿ ನೇಮಕ ಮಾಡಿಕೊಂಡು ಸಂಸ್ಥೆಯನ್ನು ನಡೆಸುತ್ತಿವೆ. ಇದರಿಂದಾಗಿ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ಇಂತಹ ತೀರ್ಮಾನಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.
5 ಲಕ್ಷ ದಂಡ
ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿರುವ ಕುರಿತು ಖಾಸಗಿ ಶಾಲೆಗಳ ವಿರುದ್ಧ ವ್ಯಾಪಕ ದೂರುಗಳು ಕೇಳಿ ಬಂದಿರುವ ಹಿನ್ನೆಲೆ,ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಿಸಿಕೊಳ್ಳುವ ಶಿಕ್ಷಣ ಸಂಸ್ಥೆಗಳಿಗೆ ಗರಿಷ್ಠ 5 ಲಕ್ಷ ರೂ.ವರೆಗೆ ದಂಡ ವಿಧಿಸುವ ಸಂಬಂಧ ಹೊಸ ನಿಯಮ ರೂಪಿಸಲು ತೀರ್ಮಾನಿಸಿದೆ.
ನೂತನ ನಿಯಮ
ಹೊಸ ನಿಯಮದ ಪ್ರಕಾರ ಶಿಕ್ಷಕರ ವಿದ್ಯಾರ್ಹತೆ ಹಾಗೂ ಹೆಸರನ್ನು ಶಾಲಾ ಆಡಳಿತ ಮಂಡಳಿಯೇ ಇನ್ಮುಂದೆ ಪ್ರಕಟಿಸಬೇಕಾಗುತ್ತದೆ. ಕರ್ನಾಟಕ ಶಿಕ್ಷಣ ಕಾಯ್ದೆ 2017ಕ್ಕೆ 2ನೇ ಬಾರಿ ತಿದ್ದುಪಡಿ ತರುವ ಮೂಲಕ ರಾಜ್ಯಪತ್ರ ಹೊರಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ದಂಡ ವಿಧಿಸುವ ಮೊದಲು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡೇರಾ) ಶಾಲಾ ಆಡಳಿತ ಮಂಡಳಿಯ ವಾದ ಆಲಿಸಬೇಕು. ಬಳಿಕ ದಂಡ ಹಾಕಬಹುದು. ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂಬ ಮಾತಿರುವುದರಿಂದ ಶಿಕ್ಷಕರ ಕಲಿಕಾ ಗುಣಮಟ್ಟವನ್ನು ಪಾಲಕರ ಗಮನಕ್ಕೆ ತರುವುದು ನಿಯಮದ ಉದ್ದೇಶವಾಗಿದೆ.
ಶಿಕ್ಷಕರಿಗೆ ಇರಬೇಕಾದ ಅರ್ಹತೆ
ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್ಸಿಟಿಇ) ನಿಯಮದ ಪ್ರಕಾರ ಕಿರಿಯ ಪ್ರಾಥಮಿಕ ಶಾಲಾ ಹುದ್ದೆಗಳಿಗೆ ಡಿ.ಇಡಿ ಮತ್ತು ಪಿಯು ಅಥವಾ ತತ್ಸಮಾನ ಕೋರ್ಸ್ನ ವಿದ್ಯಾರ್ಹತೆ ಹೊಂದಿರಬೇಕು. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಡಿ.ಇಡಿ ಅಥವಾ ಬಿ.ಇಡಿ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಿ.ಇಡಿ ಹಾಗೂ ಪದವಿ ಶಿಕ್ಷಣ ಹೊಂದಿರಬೇಕು. ಆದರೆ, ಬಹುತೇಕ ಶಾಲಾ ಆಡಳಿತ ಮಂಡಳಿಗಳು ಕಡಿಮೆ ಸಂಬಳ ನೀಡುವ ಉದ್ದೇಶದಿಂದ ಕನಿಷ್ಠ ಅರ್ಹತೆಯೂ ಇಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಾಲೆಗಳನ್ನು ನಡೆಸುತ್ತಿವೆ ಎಂಬ ಆರೋಪ ಇದೆ.
ಶಿಕ್ಷಕರೂ ದೂರನ್ನು ಸಲ್ಲಿಸಬಹುದು
ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆಯು ದೂರುಗಳನ್ನು ಸಲ್ಲಿಸಲು ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಕನಿಷ್ಠ ವೇತನ ಹಾಗೂ ಕಾಲ ಕಾಲಕ್ಕೆ ವೇತನ ನೀಡಿಲ್ಲವಾದಲ್ಲಿ ಶಿಕ್ಷಕರು ಡೇರಾ ಸಮಿತಿಗೆ ದೂರು ನೀಡಬಹುದಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 2017ಕ್ಕೆ ತಿದ್ದುಪಡಿ ತರುವಾಗ ಶಿಕ್ಷಕರ ದೂರು ಸ್ವೀಕಾರಕ್ಕೂ ಅವಕಾಶ ಕಲ್ಪಿಸಲಿದೆ. ಬಹುತೇಕ ಶಿಕ್ಷಕರು ಶಾಲಾ ಆಡಳಿತ ಮಂಡಳಿ 'ಸೇವಾ ಪುಸ್ತಕ'ವನ್ನು ನಿರ್ವಹಣೆ ಮಾಡುತ್ತಿಲ್ಲ. ತಿಂಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲವೆಂದು ದೂರು ನೀಡಿರುವ ಇಲಾಖೆ ಈ ನಿಯಮ ಜಾರಿಗೆ ಮುಂದಾಗಿದೆ. ಶಿಕ್ಷಕರ ದೂರು ಸ್ವೀಕಾರಕ್ಕೆ ವ್ಯವಸೆ ಮಾಡುವುದು ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಸಂತಸ ಮೂಡಿದೆ.