ಎಲ್ಲರಲ್ಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಬಾರಿಯ ಕರ್ನಾಟಕ ಬಜೆಟ್ ಬುಧವಾರ ಯಶಸ್ವಿಯಾಗಿ ಮಂಡನೆಯಾಗಿದೆ. ಎಲ್ಲಾ ಕ್ಷೇತ್ರಗಳಿಗೂ ಸಮನಾಗಿ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದ್ದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಲಾಭ ಸಿಕ್ಕಿದೆ.
ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿಲಾಗಿದ್ದು, ಒಟ್ಟು 22667 ಕೋಟಿರೂಗಳನ್ನು ಶಿಕ್ಷಣಕ್ಕೆ ನೀಡಲಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದು, ಇದಕ್ಕಾಗಿ ಕರ್ನಾಟಕ ಶಾಲಾ ಶಿಕ್ಷಣ ನೀತಿ ಜಾರಿಗೆ ಯೋಜನೆ ರೂಪಿಸಿದ್ದಾರೆ.
ಶಿಕ್ಷಣಕ್ಕೆ 22,667 ಕೋಟಿ ರೂ.
2017-18ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಗೆ ಒಟ್ಟಾರೆ 22,667 ಕೋಟಿ ರೂ. ಒದಗಿಸಲಾಗಿದ್ದು, ಉನ್ನತ ಶಿಕ್ಷಣಕ್ಕೆ 4,401 ಕೋಟಿ ರೂ. ಮತ್ತು 18,266 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ.
ಕರ್ನಾಟಕ ಶಾಲಾ ಶಿಕ್ಷಣ ನೀತಿ
ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಗುರಿ ಈಡೇರಿಸಲು ಸುಧಾರಣಾ ಕ್ರಮವಾಗಿ ವಸ್ತುನಿಷ್ಠ, ಪಾರದರ್ಶಕ ಮೂಲಸೌಕರ್ಯ, ಶುಲ್ಕ, ಬೋಧನಾ ಸಂಪನ್ಮೂಲಗಳ ನಿರ್ವಹಣೆ ಮತ್ತು ನಿಯಂತ್ರಣಗಳ ಕ್ರಮಗಳನ್ನೊಳಗೊಂಡ 'ಕರ್ನಾಟಕ ಶಾಲಾ ಶಿಕ್ಷಣ ನೀತಿ' ರೂಪಿಸಲಾಗುವುದು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಉತ್ತಮಪಡಿಸಲು ಅಭ್ಯಾಸ ಮತ್ತು ಚಟುವಟಿಕೆ ಪುಸ್ತಕ ಬಳಕೆ. ಶಾಲಾ ನಿರ್ವಹಣೆ ಮತ್ತು ಆಡಳಿತ ಸುಧಾರಣೆಗೆ "ಶಿಕ್ಷಣ ಕಿರಣ' ಯೋಜನೆಯಡಿ ಶಿಕ್ಷಕರ ಬಯೋಮೆಟ್ರಿಕ್ ಹಾಜರಾತಿಗೆ ಕ್ರಮಕ್ಕೆ ಕೈಗೊಳ್ಳಲಾಗುವುದು.
ವಿದ್ಯಾರ್ಥಿಗಳಿಗೆ ಹಾಲು ಮೊಟ್ಟೆ
ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಹಾಲನ್ನು ಕ್ಷೀರಭಾಗ್ಯ ಯೋಜನೆಯಡಿ 3 ರಿಂದ 5 ದಿನಕ್ಕೆ ಹೆಚ್ಚಿಸಲಾಗಿದೆ. ಉಳಿದ 2 ದಿನ ಮೊಟ್ಟೆ ನೀಡಲಾಗುತ್ತದೆ.
ಉಚಿತ ಲ್ಯಾಪ್ ಟಾಪ್
ವೈದ್ಯಕೀಯ, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗುತ್ತದೆ. ಒಟ್ಟು 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲು ಸರ್ಕಾರ ಮುಂದಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಮತ್ತು ಅನುದಾನಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದರ ಲಾಭ ಸಿಗಲಿದೆ.
ಒಂದನೇ ತರಗತಿಯಿಂದ ಇಂಗ್ಲೀಷ್
ಆಧುನಿಕ ಯುಗದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಖಾಸಗಿ ಇಂಗ್ಲಿಷ್ ಶಾಲೆಗಳ ಮಕ್ಕಳೊಂದಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಬೇಕು. ಮುಚ್ಚಿ ಹೋಗುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಬೇಕು. ಖಾಸಗಿ ಇಂಗ್ಲಿಷ್ ಶಾಲೆಗಳತ್ತ ಮಕ್ಕಳು ಹಾಗೂ ಪೋಷಕರು ಆಕರ್ಷಿತರಾಗುವುದನ್ನು ತಡೆಗಟ್ಟುವುದರ ಜೊತೆಗೆ ಭಾಷಾ ಮಾಧ್ಯಮ ಮತ್ತು ಕಲಿಕಾ ಮಾಧ್ಯಮಗಳ ನಡುವಿನ ಗೊಂದಲಗಳಿಗೆ ತೆರೆ ಎಳೆಯಲು ಸರ್ಕಾರ 1ನೇ ತರಗತಿಯಿಂದ ಇಂಗ್ಲಿಷ್ ಬೋಧನೆ ಕಾರ್ಯಕ್ರಮ ಜಾರಿಗೊಳಿಸಿದೆ.
ಹೆಣ್ಣು ಮಕ್ಕಳಿಗೆ ಚೂಡಿದಾರ್ ಸಮವಸ್ತ್ರ
8 ರಿಂದ 10 ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ ಸಮವಸ್ತ್ರವನ್ನಾಗಿ ಮಾಡಲಾಗುವುದು. ಈಗಾಗಲೆ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಶೂ, ಸಾಕ್ಸ್ ಸೌಲಭ್ಯವನ್ನು ಮುಂದುವರೆಸಲಾಗುವುದು.
ಹೆಚ್ಚುವರಿ ಶಾಲೆ ಮತ್ತು ಶಿಕ್ಷಕರ ನೇಮಕ
ಗ್ರಾಪಂ ಕೇಂದ್ರ ಸ್ಥಾನದಲ್ಲಿ 12ನೇ ತರಗತಿವರೆಗೆ 176 ಸಂಯೋಜಿತ ಶಾಲೆಗಳು. ಹೆಚ್ಚುವರಿ 1 ಸಾವಿರ ಪ್ರೌಢ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ "ಐಟಿ ಸ್ಕೂಲ್". ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಸಮಗ್ರ ಸುಧಾರಣೆ. 50 ಸಾವಿರ ಶಿಕ್ಷಕರು ಉಪನ್ಯಾಸಕರಿಗೆ ಇಂಗ್ಲಿಷ್ ಸೇರಿದಂತೆ ಭಾಷಾ ವಿಷಯಗಳಲ್ಲಿ ತರಬೇತಿ. ಪ್ರಾಥಮಿಕ ಶಾಲೆಗಳಿಗೆ 10 ಸಾವಿರ ತರಬೇತಿ ಪಡೆದ ಪದವಿಧರ ಶಿಕ್ಷಕರು, 1,626 ಪ್ರೌಢಶಾಲಾ ಶಿಕ್ಷಕರು ಹಾಗೂ 1,191 ಪಿಯು ಉಪನ್ಯಾಸಕರ ನೇಮಕಾತಿಯನ್ನು ಬಜೆಟ್ ಒಳಗೊಂಡಿದೆ.
ಉನ್ನತ ಶಿಕ್ಷಣಕ್ಕೆ 4,401 ಕೋಟಿ ರೂ.
2017-18ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಗೆ ಒಟ್ಟಾರೆ 4,401 ಕೋಟಿ ರೂ. ಒದಗಿಸಲಾಗಿದ್ದು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಯಚೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಎಲ್ಲಾ ಕಾಲೇಜುಗಳನ್ನು ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಲು ಯೋಜನೆ ರೂಪಿಸಲಾಗಿದೆ.
ವಿವಿಗಳಿಗೆ ವಿಶೇಷ ಅನುದಾನ
ಶತಮಾನ ಪೂರೈಸಿರುವ ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ಗೆ 25 ಕೋಟಿ ರೂ. ಹಾಗೂ ಧಾರವಾಡದ ಕರ್ನಾಟಕ ಕಾಲೇಜಿಗೆ 5 ಕೋಟಿ ರೂ. ನೀಡಲಾಗಿದೆ. ಹಂಪಿ ವಿವಿ ಬೆಳ್ಳಿಹಬ್ಬದ ಅಂಗವಾಗಿ 25 ಕೋಟಿ ರೂ., ಕರ್ನಾಟಕ ವಿವಿ ಮಹಾಯೋಗಿ ವೇಮನ ಅಧ್ಯಯನ ಪೀಠಕ್ಕೆ 3 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಇದರ ಜತೆಗೆ ಧಾರವಾಡ ವಿವಿಯಲ್ಲಿ ಎಂ.ಎಂ.ಕಲಬುರ್ಗಿ ಸಂಶೋಧನಾ ಕೇಂದ್ರ ಹಾಗೂ ಮೈಸೂರು ವಿವಿಯಲ್ಲಿ ಯು.ಆರ್. ಅನಂತಮೂರ್ತಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ.