ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುವ ರೀತಿ ರಾಜ್ಯದ ವಿಶ್ವವಿದ್ಯಾಲಯಗಳು ಕೂಡ ಏಕರೂಪ ಮಾದರಿಯನ್ನು ಅನುಸರಿಸಬೇಕು ಎಂಬ ಮಸೂದೆಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.
ಪ್ರಸ್ತುತ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪ ತರುವ ಉದ್ದೇಶದಿಂದ 'ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ- 2017' ಅನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಂಡಿಸಿದರು.
ಪ್ರತಿ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆ ವಿಭಿನ್ನವಾಗಿದೆ. ಸದ್ಯಕ್ಕೆ ಈ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಏಳು ಕಾಯ್ದೆಗಳು ಜಾರಿಯಲ್ಲಿವೆ. ಹೀಗಾಗಿ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅನಿವಾರ್ಯ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ 46 ಕೇಂದ್ರೀಯ ವಿಶ್ವವಿದ್ಯಾಲಯಗಳು ಇವೆ. ಈ ಎಲ್ಲ ವಿ.ವಿ.ಗಳು ಕೇಂದ್ರೀಯ ವಿಶ್ವವಿದ್ಯಾಲಯ ಕಾಯ್ದೆ- 2009ರ ವ್ಯಾಪ್ತಿಗೆ ಬರುತ್ತವೆ. ನಮ್ಮಲ್ಲೂ ಅದೇ ರೀತಿಯ ಕಾಯ್ದೆ ಜಾರಿಗೆ ತರಲು ಈ ಮಸೂದೆ ಮಂಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ವಿವಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ
ರಾಜ್ಯದ ವಿವಿಗಳಲ್ಲಿ ಭ್ರಷ್ಟಾಚಾರಗಳು ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಲೇ ಬೇಕಾದ ಪರಿಸ್ಥಿತಿ ಬಂದಿದೆ. ನೇಮಕ ಹಾಗೂ ಕಾಮಗಾರಿಯಲ್ಲಿ ಭ್ರಷ್ಟಾಚಾರ ಎಸಗಿದ ಕಾರಣಕ್ಕೆ 10 ವರ್ಷಗಳಲ್ಲಿ ಎಂಟು ಕುಲಪತಿಗಳು ಅಮಾನತು ಆಗಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ತೊಡೆದು ಹಾಕಿ ಪಾರದರ್ಶಕತೆ ತರುವ ಉದ್ದೇಶವನ್ನು ಈ ಮಸೂದೆ ಹೊಂದಿದೆ ಎಂದು ಸಚಿವರು ತಿಳಿಸಿದರು.
ಪ್ರಭಾರರಾಗಿ ಪಕ್ಕದ ವಿವಿ ಕುಲಪತಿ
ವಿಶ್ವವಿದ್ಯಾಲಯದ ಕುಲಪತಿ ರಜೆ, ಅನಾರೋಗ್ಯ ಹಾಗೂ ಹುದ್ದೆ ಖಾಲಿಯಾದ ಸಂದರ್ಭದಲ್ಲಿ ಇನ್ನು ಮುಂದೆ ಅದೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಪ್ರಭಾರ ಕುಲಪತಿಯನ್ನಾಗಿ ಮಾಡುವಂತಿಲ್ಲ. ಪಕ್ಕದ ವಿಶ್ವವಿದ್ಯಾಲಯದ ಕುಲಪತಿಯನ್ನು ಪ್ರಭಾರ ಕುಲಪತಿಯನ್ನಾಗಿ ನಿಯೋಜಿಸಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಮೌಲ್ಯಮಾಪನ ಕುಲಸಚಿವರಿಗೆ ಹೊಸ ಹೆಸರು
ಕುಲಸಚಿವ (ಮೌಲ್ಯಮಾಪನ) ಹುದ್ದೆಯ ಹೆಸರನ್ನು 'ಪರೀಕ್ಷಾ ನಿಯಂತ್ರಕ' ಎಂಬುದಾಗಿ ಬದಲಿಸಲಾಗಿದೆ. ಈ ಹುದ್ದೆಗೆ ಮೂವರ ಹೆಸರನ್ನು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಪರಿಷತ್ಗೆ ಕುಲಪತಿ ಶಿಫಾರಸು ಮಾಡಬೇಕು. ಈ ಪೈಕಿ ಒಬ್ಬರನ್ನು ಎರಡು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಐದು ವರ್ಷಗಳ ಅನುಭವ ಹೊಂದಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಘಟಕ ಕಾಲೇಜುಗಳ ಪ್ರಾಂಶುಪಾಲರು ಅಥವಾ ಕೆಎಎಸ್ (ಹಿರಿಯ ಶ್ರೇಣಿ) ಅಧಿಕಾರಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ.
ಐದು ಸದಸ್ಯರ ಶೋಧನಾ ಸಮಿತಿ
ಹೊಸ ಕಾಯ್ದೆ ಜಾರಿಯಾದರೆ ಕುಲಪತಿಯ ಆಯ್ಕೆಯ ಶೋಧನಾ ಸಮಿತಿಯು ಐವರು ಸದಸ್ಯರನ್ನು ಹೊಂದಿರಲಿದೆ. ಕುಲಪತಿಗಳು, ವಿಶ್ವಾಂತ ಕುಲಪತಿಗಳು ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ನಿರ್ದೇಶಕರ ದರ್ಜೆಯ ಶಿಕ್ಷಣ ತಜ್ಞರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಬಹುದು. ಕುಲಪತಿ ಹುದ್ದೆ ಖಾಲಿ ಇರುವ ವಿಶ್ವವಿದ್ಯಾಲಯಕ್ಕೆ ಅಥವಾ ಸಂಯೋಜಿತ ಸಂಸ್ಥೆಗೆ ಸಂಬಂಧಪಟ್ಟ ತಜ್ಞರನ್ನು ಸಮಿತಿಗೆ ನಾಮನಿರ್ದೇಶನ ಮಾಡುವಂತಿಲ್ಲ ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಸಿಂಡಿಕೇಟ್ ಅಲ್ಲ ಕಾರ್ಯನಿರ್ವಾಹಕ ಪರಿಷತ್
ವಿ.ವಿ.ಗಳ ಸಿಂಡಿಕೇಟ್ ಹೆಸರನ್ನು 'ಕಾರ್ಯನಿರ್ವಾಹಕ ಪರಿಷತ್' ಎಂದು ಬದಲಿಸಲಾಗುತ್ತದೆ. ಇದಕ್ಕೆ ಆರು ಮಂದಿಯನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಬಹುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನಾಂತರ ಪದವಿ ಹೊಂದಿರಬೇಕು.
ಅಂತರ್ ವಿಶ್ವವಿದ್ಯಾಲಯ ವರ್ಗಾವಣೆ
ವಿಶ್ವವಿದ್ಯಾಲಯಗಳ ನೌಕರರ 'ಅಂತರ್ ವಿಶ್ವವಿದ್ಯಾಲಯ ವರ್ಗಾವಣೆ'ಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೋರಿಕೆ ಮೇರೆಗೆ ನೌಕರ ವರ್ಗ ಮಾಡಿಸಿಕೊಂಡರೆ ಜೇಷ್ಠತೆಯನ್ನು ಬಿಟ್ಟುಕೊಡಬೇಕು ಎಂದು ತಿಳಿಸಲಾಗಿದೆ.
ಕುಲಪತಿಗಳೂ ಪಾಠ ಮಾಡಬೇಕು
ನೂತನ ಮಸೂದೆಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ತರಗತಿಗಳಲ್ಲಿ ಪಾಠ ಮಾಡುವುದು ಕಡ್ಡಾಯ ಎಂದು ತಿಳಿಸಿಲಾಗಿದೆ. ಅಲ್ಲದೇ ಉಪನ್ಯಾಸಕರಿಗೆ ಹಾಗೂ ಪ್ರಾಧ್ಯಾಪಕರಿಗೆ ತರಬೇತಿ ನೀಡಲು 'ಕರ್ನಾಟಕ ವೃತ್ತಿ ಶಿಕ್ಷಣ ಅಕಾಡೆಮಿ ಸ್ಥಾಪನೆ ಮಾಡಲಾಗಿದೆ' ಎಂದ ತಿಳಿಸಿದ್ದಾರೆ.