ಈ ಬಾರಿಯ ನೀಟ್ ಪರೀಕ್ಷೆ ಯಶಸ್ವಿಯಾಗಿದ್ದರೂ, ನೀಟ್ ನಿಯಮವಳಿಗಳು ಈಗ ಚರ್ಚೆಗೊಳಪಟ್ಟಿವೆ. ಅದರಲ್ಲೂ ನೀಟ್ ಡ್ರೆಸ್ ಕೋಡ್ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಈ ಕುರಿತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಸ್ಪಷ್ಟನೆ ನೀಡಿದೆ.
ಪರೀಕ್ಷೆಯಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನ ಬಳಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಂಚನೆ ಎಸಗಬಾರದು ಎಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.
ನೀಟ್ ಡ್ರೆಸ್ ಕೋಡ್
ವಿದ್ಯಾರ್ಥಿಗಳು ಲೋಹದ ಹುಕ್ ಮತ್ತು ಗುಂಡಿಗಳಲ್ಲಿ ಬ್ಲೂ ಟೂಥ್, ಮೈಕ್ರೊಫೋನ್ಗಳಂತಹ ಸುಧಾರಿತ ಸಂಪರ್ಕ ಸಾಧನಗಳನ್ನು ಬಳಸುವ ಸಾಧ್ಯತೆ ಇರುತ್ತದೆ. ಹೀಗಾಗಿ 2016ರ ಸುಪ್ರೀಂ ಕೋರ್ಟ್ ಆದೇಶದ ಅನುಸಾರ, ನ್ಯಾಯಮೂರ್ತಿ ಲೋಧಾ ಸಮಿತಿ ಮೇಲ್ವಿಚಾರಣೆಯಲ್ಲಿ ಪರೀಕ್ಷೆ ನಡೆಸಲಾಗಿದೆ ಎಂದು ಸಿಬಿಎಸ್ಇ ಹೇಳಿದೆ.
2015ರಲ್ಲಿ ನಡೆದ ಅಖಿಲ ಭಾರತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಕಿವಿ ಮತ್ತು ಒಳ ಉಡುಪುಗಳಲ್ಲಿ ಬ್ಲೂ ಟೂಥ್ ಆಧಾರಿತ ಸಂಪರ್ಕ ಸಾಧನಗಳನ್ನು ಅಳವಡಿಸಿಕೊಂಡು ಬಂದಿದ್ದ ಕಾರಣ, ನೀಟ್ನಲ್ಲಿ ಸಿಬಿಎಸ್ಇ ಕಠಿಣ ಕ್ರಮಗಳನ್ನು ಅನುಸರಿಸಿದೆ. [ಒಳ ಉಡುಪು ತೆಗೆದು ನೀಟ್ ಪರೀಕ್ಷೆ ಬರೆದ ಯುವತಿ]
ಪುರುಷರ ಡ್ರೆಸ್ ಕೋಡ್
- ಪುರುಷರು ತಿಳಿ ಬಣ್ಣದ ಅರ್ಧ ತೋಳಿನ ಅಂಗಿಗಳನ್ನು ಧರಿಸಬೇಕು.
- ಅರ್ಧ ತೋಳಿನ ಟಿ-ಷರ್ಟ್, ಕಾಟನ್ ಪ್ಯಾಂಟ್ ಗಳಿಗೆ ಅವಕಾಶ.
- ವೈದ್ಯರಿಂದ ಸೂಚಿಸಲ್ಪಟ್ಟ ಕನ್ನಡಕಕ್ಕೆ ಅವಕಾಶ, ಸನ್-ಗ್ಲಾಸ್ ಗಳಿಗೆ ನಿಷೇಧ.
- ಸರಳವಾದ ಪ್ಯಾಂಟ್ ಧರಿಸಬೇಕು
- ಚಪ್ಪಲ್ ಗಳನ್ನು ಮಾತ್ರ ಧರಿಸಬೇಕು,ಶೂಗಳನ್ನು ಧರಿಸುವಂತಿಲ್ಲ.
- ದಪ್ಪ ಅಥವಾ ದೊಡ್ಡ ಗುಂಡಿ (ಬಟನ್) ಇರುವ ಬಟ್ಟೆ ತೊಡುವಂತಿಲ್ಲ.
- ಕುರ್ತಾ ಪೈಜಾಮಗಳನ್ನು ತೊಡುವಂತಿಲ್ಲ.
ಮಹಿಳೆಯರ ಡ್ರೆಸ್ ಕೋಡ್
- ಸರಳವಾದ ಮತ್ತು ಹಗುರವಾದ ಅರ್ಧ ತೋಳಿನ ಉಡುಪುಗಳನ್ನು ಧರಿಸಬೇಕು.
- ಚೂಡಿದಾರ್, ಸಲ್ವಾರ್, ಅರ್ಧ ತೋಳಿನ ಕುರ್ತಿ, ಮತ್ತು ಸರಳವಾದ ಟಾಪ್ ಧರಿಸಬೇಕು
- ಸರ, ಆಭರಣ ಹೂವಿಗೂ ನಿಷೇಧ (ಮಂಗಳಸೂತ್ರಕ್ಕೆ ಅವಕಾಶ ಇದೆ).
- ದೊಡ್ಡ ಗುಂಡಿಗಳು, ಬ್ರೋಚ್/ಬ್ಯಾಡ್ಜ್, ಹೂಗಳನ್ನು ಧರಿಸುವಂತಿಲ್ಲ.
- ಸೀರೆ ಉಡುವಹಾಗಿಲ್ಲ, ಬಳೆಗಳನ್ನು ತೊಡುವಂತಿಲ್ಲ (ವಿವಾಹಿತರು ತೊಡಬಹುದು)
- ವೈದ್ಯರಿಂದ ಸೂಚಿಸಲ್ಪಟ್ಟ ಕನ್ನಡಕಕ್ಕೆ ಅವಕಾಶ, ಸನ್-ಗ್ಲಾಸ್ ಗಳಿಗೆ ನಿಷೇಧ.
- ಕಡಿಮೆ ಎತ್ತರದ ಚಪ್ಪಲಿಗಳನ್ನು ಬಳಸಬೇಕು, ಶೂ ಮತ್ತು ಸಾಕ್ಸ್ ಗಳನ್ನು ಧರಿಸುವಂತಿಲ್ಲ.
ಬಟ್ಟೆಯ ರೀತಿಯೇ ಇನ್ನು ಕೆಲವು ವಸ್ತುಗಳನ್ನು ಪರೀಕ್ಷಾ ಕೇಂದ್ರದಿಂದ ನಿಷೇಧಿಸಲಾಗಿತ್ತು.
ನಿಷೇಧಿಸಿದ ವಸ್ತುಗಳು
ಜ್ಯಾಮಿಟ್ರಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಪ್ಲ್ಯಾಸ್ಟಿಕ್ ಪೌಚ್, ಕ್ಯಾಲ್ಯುಕ್ಲೇಟರ್, ಪೆನ್, ಸ್ಕೇಲ್, ಪೆನ್ ಡ್ರೈವ್, ಎರೇಸರ್, ಲಾಗ್ ಟೇಬಲ್ ಸ್ಕ್ಯಾನರ್, ಎಲೆಕ್ಟ್ರಾನಿಕ್ ಪೆನ್, ಮೊಬೈಲ್, ಬ್ಲೂಟೂತ್, ಇಯರ್ ಫೋನ್, ಮೈಕ್ರೊಫೋನ್, ಪೇಜರ್, ಹೆಲ್ತ್ ಬ್ಯಾಂಡ್, ವ್ಯಾಲೆಟ್, ಸನ್ ಗ್ಲಾಸ್, ಹ್ಯಾಂಡ್ ಬ್ಯಾಗ್, ಬೆಲ್ಟ್, ಕ್ಯಾಪ್, ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಟ್, ಪ್ಲ್ಯಾಸ್ಟಿಕ್ ಗುರುತಿನ ಚೀಟಿ, ರಿಮೋಟ್ ಕೀ, ಮ್ಯಾಗ್ನೆಟಿಕ್ ಟೇಪ್ ಇರುವಂಥ ಸಂವಹನ ವ್ಯವಸ್ಥೆ, ವಾಚ್, ಕೈಗಡಿಯಾರ, ಕ್ಯಾಮರಾ, ತಿಂಡಿ-ತಿನಿಸು, ವಾಟರ್ ಬಾಟಲ್
ಕೇರಳ ಘಟನೆಗೆ ಸೂಕ್ತ ಕ್ರಮ
ಶೋಷಣೆಗೆ ಒಳಗಾದ ವಿದ್ಯಾರ್ಥಿನಿ ಬಳಿ ಪ್ರಾಂಶುಪಾಲರು ಕ್ಷಮೆ ಕೇಳಬೇಕು ಎಂದು ಸಿಬಿಎಸ್ಇ ಹೇಳಿದೆ. ಸಿಬಿಎಸ್ಇ ಮುಖ್ಯಸ್ಥ ಆರ್.ಕೆ. ಚತುರ್ವೇದಿ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಆದ ನಂತರ ಈ ಬೆಳವಣಿಗೆ ನಡೆದಿದೆ.
ವಿದ್ಯಾರ್ಥಿನಿಯ ಬ್ರಾ ಬಿಚ್ಚಿಸಿದ ಪ್ರಕರಣದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.
ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಯ ಅಂಗಿಯ ತೋಳು ಕತ್ತರಿಸಿದ್ದಕ್ಕೆ ಕುರುಪ್ಪಂಪಾಡಿ ಶಾಲೆಯ ಪರೀಕ್ಷಾ ಮೇಲ್ವಿಚಾರಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಂಗಿಯ ತೋಳು ಕತ್ತರಿಸಲು ಮತ್ತು ಪ್ಯಾಂಟ್ನ ಜಿಪ್ ತೆಗೆಯಲು ಹೇಳಿ ಅವಮಾನಿಸಲಾಗಿದೆ ಎಂದು ಪರೀಕ್ಷಾ ಮೇಲ್ವಿಚಾರಕರ ಹೆಸರು ಉಲ್ಲೇಖಿಸದೇ ವಿದ್ಯಾರ್ಥಿ ದೂರು ದಾಖಲಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಪಿ.ಎಂ. ಶೆಮೀರ್ ಹೇಳಿದ್ದಾರೆ.