ಶಿಕ್ಷಕರ ವರ್ಗಾವಣೆ ವಿಚಾರವಾಗಿ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಪ್ರಸ್ತುತ ಇರುವ ವರ್ಗಾವಣೆಯ ಮಿತಿಯನ್ನು ಶೇ.15 ಕ್ಕೆ ಹೆಚ್ಚಿಸಲಾಗಿದೆ.
ಶಿಕ್ಷಕರ ವರ್ಗಾವಣೆ ಮಿತಿಯನ್ನು ಶೇ15ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ತಿದ್ದುಪಡಿ ವಿವರ
- ಇದುವರೆಗೆ ಶೈಕ್ಷಣಿಕ ಜಿಲ್ಲೆಯೊಳಗೆ ಶೇ 5ರಷ್ಟು ಮತ್ತು ಅಂತರ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯೊಳಗೆ ಶೇ 3ರಷ್ಟು ಸೇರಿ ಒಟ್ಟು ಹುದ್ದೆಗಳ ಶೇ8ರಷ್ಟು ಶಿಕ್ಷಕರ ವರ್ಗಾವಣೆಗೆ ಮಾತ್ರ ಅವಕಾಶ ಇತ್ತು. ಈಗ ಅದನ್ನು ಶೇ15ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ.
- ನಗರ ಪ್ರದೇಶಗಳಲ್ಲಿ ('ಎ' ವಲಯ) ಗರಿಷ್ಠ 10 ವರ್ಷ ಕರ್ತವ್ಯ ನಿರ್ವಹಿಸಿದವರನ್ನು ಮತ್ತು ನಿವೃತ್ತಿಗೆ ಎರಡು ವರ್ಷಕ್ಕಿಂತ ಹೆಚ್ಚು ಸೇವಾವಧಿ ಹೊಂದಿದವರನ್ನು ಗ್ರಾಮಾಂತರ ಪ್ರದೇಶಕ್ಕೆ ('ಸಿ' ವಲಯ) ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುವುದು.
ವರ್ಗಾವಣೆಯಲ್ಲಿ ವಿನಾಯಿತಿ
ಮಾನ್ಯತೆ ಪಡೆದ ಶಿಕ್ಷಕರ ಸಂಘದ ಪದಾಧಿಕಾರಿಗಳು, ಅವಿವಾಹಿತೆಯರು, ವಿಧವೆಯರು ಮತ್ತು ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹೊಂದಿರುವ ಶಿಕ್ಷಕರಿಗೆ ಇದರಿಂದ ವಿನಾಯಿತಿ ದೊರೆಯಲಿದೆ.
ಕಡ್ಡಾಯವಾಗಿ ವರ್ಗಾವಣೆ ಮಾಡಬೇಕಾದ ಶಿಕ್ಷಕರಿಗೆ 'ಸಿ' ವಲಯದಲ್ಲಿ ಹುದ್ದೆಗಳು ಖಾಲಿ ಇಲ್ಲದಿದ್ದಾಗ, ಅಲ್ಲಿನ ಶಿಕ್ಷಕರನ್ನು ಬೇರೆಡೆ ವರ್ಗಾಯಿಸಿ ಅಲ್ಲಿಗೆ ನೇಮಿಸಬೇಕು ಎನ್ನುವ ವಿಚಾರವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.
ವಿವಾಹಿತ ಶಿಕ್ಷಕರಿಗೆ
ಶಿಕ್ಷಕ/ಶಿಕ್ಷಕಿ ತನ್ನ ಶೈಕ್ಷಣಿಕ ಜಿಲ್ಲೆಯ ಹೊರಗಿನ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ದಿಮೆಯಲ್ಲಿ ಇರುವವರನ್ನು ಮದುವೆಯಾದಲ್ಲಿ ಸೇವಾವಧಿ ಹೊರತಾಗಿಯೂ ವರ್ಗಾವಣೆ ಮಾಡಬಹುದಾಗಿದೆ. ಕನಿಷ್ಠ ಸೇವಾವಧಿ ಪೂರ್ಣಗೊಳಿಸದಿದ್ದರೂ ಮತ್ತೊಂದು ಶೈಕ್ಷಣಿಕ ಜಿಲ್ಲೆಯಲ್ಲಿ ಖಾಲಿ ಹುದ್ದೆ ಇದ್ದು, ಅಲ್ಲಿಗೆ ವರ್ಗಾವಣೆ ಕೋರಿದಾಗ ಪರಿಗಣಿಸಬಹುದು ಎಂದು ಕಾಯ್ದೆಯಲ್ಲಿ ಬದಲಾವಣೆ ತರಲಾಗಿದೆ.
ಈ ಹಿಂದೆ 2015ರಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮವನ್ನು ತಿದ್ದುಪಡಿಯಲ್ಲಿ ಗಂಡ, ಹೆಂಡತಿ ಇಬ್ಬರು ಸರ್ಕಾರಿ ನೌಕರರಾಗಿದ್ದಲ್ಲಿ ಮತ್ತು ಶಿಕ್ಷಕರು ಪ್ರಸ್ತುತ ಇರುವ ಜೇಷ್ಠತಾ ಘಟಕದಲ್ಲಿ ಕನಿಷ್ಠ ಮೂರು ವರ್ಷಗಳ ಸೇವೆಯನ್ನು ಸಲ್ಲಿಸಿದ್ದಲ್ಲಿ, ಕೌನ್ಸಿಲಿಂಗ್ ಮೂಲಕ ಆತನ/ಆಕೆಯ ಹೆಂಡತಿ/ಗಂಡ ಸೇವೆ ಸಲ್ಲಿಸುತ್ತಿರುವ ಸ್ಥಳಕ್ಕೆ ಅಥವಾ ಹತ್ತಿರದ ಸ್ಥಳಕ್ಕೆ ಸ್ಪಷ್ಟ ಖಾಲಿ ಸ್ಥಳದ ಲಭ್ಯತೆಯ ಆಧಾರದ ಮೇರೆಗೆ ಸೇವಾ ಅವಧಿಯಲ್ಲಿ ಎರಡು ಬಾರಿಗಿಂತ ಹೆಚ್ಚಲ್ಲದೆ ವರ್ಗಾವಣೆ ಮಾಡಬಹುದಾಗಿತ್ತು.