ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಸಂಸ್ಕೃತಿ ಶಿಬಿರದ ವತಿಯಿಂದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಕಳೆದ ನಾಲ್ಕು ವರ್ಷದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದ್ದು ಈ ಬಾರಿಯ ಶಿಬಿರಕ್ಕೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ನೀನಾಸಮ್ ರಂಗಶಿಕ್ಷಣ ಕೇಂದ್ರವು ಮೇ 11ರಿಂದ 31ರ ವರೆಗೆ ರಂಗ ತರಬೇತಿ ಶಿಬಿರ ಆಯೋಜಿಸಿದೆ. ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಪ್ರವೇಶವಿದ್ದು, ಅರ್ಜಿಯ ವಿವರಗಳನ್ನಾಧರಿಸಿ ಆಯ್ಕೆ ಮಾಡಲಾಗುತ್ತದೆ.
ಶಿಬಿರದ ವಿವರ
18ರಿಂದ 35 ವರ್ಷದ ನಡುವಿನ ಎಸ್ಸೆಸ್ಸೆಲ್ಸಿವರೆಗೆ ಓದಿದವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ಶಿಬಿರಾರ್ಥಿಯು ಊಟ-ವಸತಿ ವ್ಯವಸ್ಥೆಯ ಭಾಗಶಃ ವೆಚ್ಚವಾಗಿ ಒಟ್ಟು ₹ 6,000 ಕಟ್ಟಬೇಕು.
ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಅಭಿನಯ ವ್ಯಾಯಾಮಕ್ಕೆ ಅಗತ್ಯವಾದ ದೇಹದಾರ್ಢ್ಯ ಇರಬೇಕು.
ಆಸಕ್ತ ಅಭ್ಯರ್ಥಿಗಳು ನೀನಾಸಮ್ನಿಂದ ಪ್ರವೇಶ ಪತ್ರವನ್ನು ತರಿಸಿಕೊಂಡು, ಏ.10ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಕಳುಹಿಸಬೇಕು. www.ninasam.org ವೆಬ್ಸೈಟ್ ಬಳಸಿಯೂ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಏ.30ರೊಳಗೆ ತಿಳಿಸಲಾಗುತ್ತದೆ.
ಸಂಪರ್ಕ ವಿಳಾಸ
ಸಂಚಾಲಕರು, ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ 577 417
ಶ್ರೀ ವಿಶ್ವನಾಥ ಭಟ್ (77608 09700) ಅಥವಾ ಶ್ರೀ ಶ್ರೀಕಾಂತ್ (98806 37684)
ನೀನಾಸಂ
ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಕೆ.ವಿ.ಸುಬ್ಬಣ್ಣ ಅವರು ಸ್ಥಾಪಿಸಿದ ರಂಗಕಲಾ ಸಂಘ. ಇದು ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿಯ ಹೆಗ್ಗೋಡಿನಲ್ಲಿದೆ.
ನೀನಾಸಂ ರಂಗಶಾಲೆ ಪ್ರತಿ ವರ್ಷ ಆಯ್ದ ಅಭ್ಯರ್ಥಿಗಳಿಗೆ ಹತ್ತು ತಿಂಗಳುಗಳ ಕಾಲ ರಂಗಕಲಿಕೆಯನ್ನು ನೀಡಿ ಅವರನ್ನು ರಂಗಕೃಷಿಕರಾಗಿ ತಿದ್ದಿ ತೀಡುತ್ತಿದೆ. ತಮ್ಮ ರಂಗಕಲೆಯ ವಿದ್ಯಾಭ್ಯಾಸದ ಸಮಯದಲ್ಲಿ ಅವರುಗಳು ನಾಟಕಗಳನ್ನು ಕೈಗೆತ್ತಿಕೊಂಡು, ತಯಾರಿ ಮಾಡಿಕೊಂಡು ಕರ್ನಾಟಕದಾದ್ಯಂತ 'ತಿರುಗಾಟ' ವೆಂಬ ಹೆಸರಿನಲ್ಲಿ ಆ ನಾಟಕಗಳನ್ನು ಪ್ರದರ್ಶಿಸುತ್ತಾರೆ.
'ನೀನಾಸಂ' ಚಟುವಟಿಗೆಗಳು
- ಒಂದು ವಿಶಿಷ್ಟ ರಂಗತಂಡವನ್ನು ಸ್ಥಾಪಿಸಿ, ಹಲವಾರು ನಾಟಕಗಳನ್ನು ರಚಿಸಿ, ಅವುಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಪ್ರದರ್ಶಿಸುವ 'ತಿರುಗಾಟ'ವೆಂಬ ರಂಗ ಸಂಚಾರದ ವ್ಯವಸ್ಠೆ.
- 'ಶಿವರಾಮ ಕಾರಂತ ರಂಗಮಂದಿರ'ವೆಂಬ ಒಂದು ಸುಸಜ್ಜಿತ ರಂಗಮಂದಿರ ಸ್ಥಾಪನೆ.
- 'ನೀನಾಸಂ ರಂಗ ಶಿಕ್ಷಣ ಕೇಂದ್ರ'
- 'ನೀನಾಸಂ' ಚಿತ್ರಸಮಾಜ
- 'ನೀನಾಸಂ' ಜನಸ್ಪಂದನ
- 'ನೀನಾಸಂ' ಮಾತುಕತೆ
- 'ನೀನಾಸಂ ಪ್ರತಿಷ್ಠಾನ'ವೆಂಬ ಸಂಸ್ಥೆಯ ಸ್ಥಾಪನೆ. ಈಗ ಈ ಸಂಸ್ಥೆಯ ಚಟುವಟಿಕೆಗಳು ಹಲವು ಹತ್ತಾರು, ಅಲ್ಲದೆ ಅದು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಮಾಜ ಸೇವೆ ಸಲ್ಲಿಸುವ ಹಿರಿಯ ಉದ್ದೆಶವಿಟ್ಟುಕೊಂಡು ದುಡಿಯುತ್ತಿರುವ ಒಂದು ಹಿರಿಮೆಯ ಸಂಸ್ಥೆ ಎಂದು ಗುರುತಿಸಿಕೊಂಡಿದೆ.
- ಅಕ್ಷರ ಪ್ರಕಾಶನ
ನೀನಾಸಂ ಸಂಸ್ಕೃತಿ ಶಿಬಿರ ಸ್ಥಾಪಿತವಾದಂದಿನಿಂದ ಈ ವರೆಗೆ ನೂರಾರು ನಾಟಕಗಳನ್ನೂ, ಅಭ್ಯಾಸ ಪ್ರಯೋಗಗಳನ್ನೂ ನೀನಾಸಂ ರಂಗದ ಮೇಲೆ ತಂದಿದೆ. ಅಂಥ ಪಟ್ಟಿಯಲ್ಲಿ, ಹಲವು ಪಾಶ್ಚಾತ್ಯ, ಸಂಸ್ಕೃತ, ಹಿಂದಿ ಮತ್ತು ಕನ್ನಡ ನಾಟಕಗಳು ಸೇರಿಕೊಂಡಿವೆ. 'ತುಘಲಕ್' 'ಸ್ಮಶಾನ ಕುರುಕ್ಷೇತ್ರಂ' 'ಪೋಲಿ ಕಿಟ್ಟಿ, 'ಅಶ್ವತ್ಥಾಮನ್' 'ಅಹಲ್ಯೆ' 'ಯಾರೋ ಅಂದರು' ಮುಂತಾದ ಜನಪ್ರಿಯ ಕನ್ನಡ ನಾಟಕಗಳನ್ನು ರಂಗದ ಮೇಲೆ ತಂದ ಖ್ಯಾತಿ ನೀನಾಸಂ ಗೆ ಸಲ್ಲುತ್ತದೆ.
'ತಿರುಗಾಟ', ತಂಡದವರು ಹೆಸರಾಂತ ರಂಗಕರ್ಮಿಗಳು ನಿರ್ದೇಶಿಸಿದ ಹಲವಾರು ನಾಟಕಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಿದ್ದಾರೆ. 'ತದ್ರೂಪಿ' 'ಆಲಿಬಾಬ' 'ಈ ಕೆಳಗಿನವರು' 'ಚಿದಂಬರ ರಹಸ್ಯ'ಸೆಜುವನ್ ನಗರದ ಸಾಧ್ವಿ' 'ಪಂಜರ ಶಾಲೆ' 'ತುಕ್ರನ ಕನಸು' 'ಹೂ ಹುಡುಗಿ' 'ಗೋಕುಲ ನಿರ್ಗಮನ' 'ಅಗ್ನಿ ಮತ್ತು ಮಳೆ' - ಇವುಗಳಲ್ಲಿ ಕೆಲವು. ಸಂಸ್ಕೃತ ಮಹಾ ಕವಿ, ಕಾಳಿದಾಸನ 'ಅಭಿಜ್ಞಾನ ಶಾಕುಂತಲಂ' ನಾಟಕದ ಅದ್ಭುತ ಪ್ರಯೋಗವನ್ನು ನಡೆಸುತ್ತಿದ್ದಾರೆ. ಇವೆಲ್ಲವೂ ಹೆಗ್ಗೋಡಿನ ನೀನಾಸಂ ಚಟುವಟಿಕೆಗಳ ಅಂಗವಾಗಿ 'ರಂಗ ಶಿಕ್ಷಣ ಕೇದ್ರ' ಗಳಿಸಿದ ಸಾಧನೆಗಳಲ್ಲಿ ಕೆಲವು.
ಹೆಚ್ಚಿನ ಮಾಹಿತಿಗಾಗಿ ನೀನಾಸಂ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಟಿ: www.ninasam.org