ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಈಗ 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
82 ವರ್ಷದ ಚೌಟಾಲ ತಮ್ಮ ಮೊದಲ ಪ್ರಯತ್ನದಲ್ಲಿಯೇ ಪ್ರಥಮ ದರ್ಜೆಯಲ್ಲಿ ಚೌಟಾಲಾ ತೇರ್ಗಡೆ ಹೊಂದಿದ್ದು ಮುಂದೆ ಪದವಿ ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಖೈದಿಗಳಿಗಾಗಿ ಪರೀಕ್ಷೆ
ತಿಹಾರ್ ಜೈಲಿನಲ್ಲಿ ಖೈದಿಗಳಿಗೆಂದೇ ವಿಶೇಷ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ ತಿಹಾರ್ ಜೈಲಿನಲ್ಲಿ ತನ್ನ ಕೇಂದ್ರವನ್ನು ಆರಂಭಿಸಿದ್ದು, ಆ ಕೇಂದ್ರದ ಮೂಲಕವೇ ಚೌಟಾಲ ಪರೀಕ್ಷೆಗೆ ಕುಳಿತಿದ್ದರು.
ಎಲ್ಲಾ ವಿಷಯಗಳ ಪರೀಕ್ಷೆಗೂ ಚೌಟಾಲ ಹಾಜರಾಗಿದ್ದು, ಎಪ್ರಿಲ್ 23ಕ್ಕೆ ಎಕ್ಸಾಮ್ ಮುಗಿದಿತ್ತು.
ಕೌಟುಂಬಿಕ ಕಾರಣಗಳಿಂದಾಗಿ ತಂದೆಯವರು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಜೈಲಿನಲ್ಲಿ ಸಿಗುವ ಕಾಲಾವಕಾಶವನ್ನು ಬಳಸಿಕೊಂಡು ವಿದ್ಯಾಭ್ಯಾಸ ಮಾಡಲು ಬಯಸಿದ್ದಾರೆ' ಎಂದು ಚೌಟಾಲ ಅವರ ಮಗ ಅಭಯ್ ಸಿಂಗ್ ಚೌಟಾಲ ತಿಳಿಸಿದ್ದಾರೆ.
ಹೆಚ್ಚು ಸಮಯ ಗ್ರಂಥಾಲಯದಲ್ಲಿ ಕಳೆಯುವ ಚೌಟಾಲ
ಚೌಟಾಲ ಅವರು ಹೆಚ್ಚು ಸಮಯವನ್ನು ಜೈಲಿನಲ್ಲಿರುವ ಗ್ರಂಥಾಲಯದಲ್ಲಿ ಕಳೆಯುತ್ತಾರೆ. ಪುಸ್ತಕಗಳು, ಪತ್ರಿಕೆಗಳನ್ನು ಓದುತ್ತಾರೆ. ಅಲ್ಲದೇ ತಮಗೆ ಇಷ್ಟವಾದ ಪುಸ್ತಕವನ್ನು ಸಿಬ್ಬಂದಿಯಿಂದ ತರಿಸಿಕೊಳ್ಳುತ್ತಾರೆ ಎಂದು ಅವರ ಪುತ್ರ ಹೇಳಿದ್ದಾರೆ.
ಪರೀಕ್ಷೆ ಸಂದರ್ಭದಲ್ಲಿ ಓಂ ಪ್ರಕಾಶ್ ಚೌಟಾಲ ಪೆರೋಲ್ ಮೇಲೆ ಜೈಲಿನಿಂದ ಹೊರಗಿದ್ರು. ಮೊಮ್ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಮೇ 5ರವರೆಗೆ ಪೆರೋಲ್ ಪಡೆದಿದ್ದರು. ಜೈಲಿನ ಗ್ರಂಥಾಲಯದಲ್ಲೇ ಕುಳಿತು ಪ್ರತಿನಿತ್ಯ ಅವರು ಅಭ್ಯಾಸ ಮಾಡುತ್ತಿದ್ದರಂತೆ. ತಮಗಿಷ್ಟವಾದ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಕೂಡ ಮಾಡಿಕೊಂಡಿದ್ದರು.
ಜೈಲು ಶಿಕ್ಷೆ
2000 ಇಸವಿಯಲ್ಲಿ ಓಂ ಪ್ರಕಾಶ ಚೌಟಾಲಾ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ 3,206 ಕಿರಿಯ ತರಬೇತಿ ಹೊಂದಿದ ಶಿಕ್ಷಕರ ನೇಮಕಾತಿ ನಡೆದಿತ್ತು. ಈ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿತ್ತು. ಚೌಟಾಲಾ ಅವರ ಪುತ್ರ ಅಜಯ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಓಂ ಪ್ರಕಾಶ ಚೌಟಾಲಾ, ಪುತ್ರ ಅಜಯ್ ಸಹಿತ 53 ಮಂದಿಗೆ ಜೈಲು ಶಿಕ್ಷೆ ವಿಧಿಸಿತ್ತು.