ಭಾರತೀಯ ಅರಣ್ಯ ಸೇವೆಗೆ (ಐಎಫ್ಎಸ್) ಸಂಬಂಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ್ದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ದೇಶಾದ್ಯಂತ ಒಟ್ಟು 110 ಮಂದಿ ಆಯ್ಕೆಯಾಗಿದ್ದು ಇದರಲ್ಲಿ ಕರ್ನಾಟಕದ ಆರು ಮಂದಿ ಸೇರಿದ್ದಾರೆ.
ಈ ಬಾರಿ 110 ಮಂದಿಯಲ್ಲಿ ಸಾಮಾನ್ಯ ಪ್ರವರ್ಗದ 48, ಇತರ ಹಿಂದುಳಿದ ವರ್ಗಗಳ 37, ಎಸ್ಸಿ 17, ಎಸ್ಟಿ 8 ಅಭ್ಯರ್ಥಿಗಳು ಐಎಫ್ಎಸ್ಗೆ ಆಯ್ಕೆಆಗಿದ್ದಾರೆ.
ರಾಜ್ಯದ ಆರು ಮಂದಿ ಆಯ್ಕೆ
ಆಯ್ಕೆಯಾದ 110 ಮಂದಿಯಲ್ಲಿ ರಾಜ್ಯದ ಆರು ಮಂದಿ ಅವಕಾಶ ಪಡೆದಿದ್ದಾರೆ. ಈ ಪೈಕಿ ಬಳ್ಳಾರಿಯ ಬಸವರಾಜು (34ನೇ ರ್ಯಾಂಕ್) ಬೆಂಗಳೂರಿನ ಕೆ.ಆರ್. ಅರ್ಜುನ್ (45), ಬೀದರ್ನ ರಾಹುಲ್ ಶಿಂದೆ (57), ಮಂಡ್ಯದ ಮಳವಳ್ಳಿಯ ಎಚ್. ದಿಲಿಪ್ ಕುಮಾರ್ (65), ಬೆಂಗಳೂರಿನ ಇ. ರಂಗಸ್ವಾಮಿ (82), ಮಂಡ್ಯದ ಎಚ್.ಎಸ್.ಪದ್ಮನಾಭ (109) ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಬಸವರಾಜು ಟಾಪ್
ಕರ್ನಾಟಕದ ಡಾ. ಕೆ.ಎನ್. ಬಸವರಾಜ ಅವರಿಗೆ 34ನೇ ರ್ಯಾಂಕ್ ದೊರೆತಿದೆ. ಮೂಲತಃ ಬಳ್ಳಾರಿಯ ಮೋರಿಗೇರಿಯವರಾದ ಬಸವರಾಜ ಅವರು ಪ್ರಸ್ತುತ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ವೈಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಬಸವರಾಜು ಮೂಲತಃ ಬಳ್ಳಾರಿ ಜಿಲ್ಲೆಯ ಮೋರಿಗೇರಿ ಗ್ರಾಮದ ರೈತಾಪಿ ಕುಟುಂಬದ ನಾಗನಗೌಡ ಹಾಗೂ ಶಾರದಾ ದಂಪತಿಯ ಪುತ್ರ. 1984ರ ಸೆಪ್ಟಂಬರ್ 13ರಲ್ಲಿ ಜನಿಸಿದ ಇವರು ಹಗರಿಬೊಮ್ಮನಹಳ್ಳಿಯ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ ದ್ವಿತೀಯ ಪಿಯು ಮುಗಿಸಿ, ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದುಕೊಂಡರು. ಕಳೆದ 2007 ಸೆಪ್ಟಂಬರ್ನಿಂದ ವಿರಾಜಪೇಟೆಯ ಸಂಚಾರ ಪಶು ಚಿಕಿತ್ಸಾಲಯದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಣ್ಣ ಭರತ್ ಗೌಡ ಪ್ರೌಢಶಾಲೆ ಶಿಕ್ಷಕ, ತಂಗಿ ವೀಣಾ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುಪಿಎಸ್ಸಿ
ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್ (IAS) ) ಎಂಬುದು ಭಾರತ ಗಣರಾಜ್ಯ ಸರ್ಕಾರದ ಕಾರ್ಯಕಾರಿ ವಿಭಾಗದ ಆಡಳಿತಾತ್ಮಕ ನಾಗರಿಕ ಸೇವೆಯಾಗಿದೆ. ದೇಶಾದ್ಯಂತ ಐಎಎಸ್ ಅಧಿಕಾರಿಗಳು ನಿರ್ಣಾಯಕ ಹುದ್ದೆಗಳಲ್ಲಿರುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಅಧಿಕಾರಶಾಹಿಗಳನ್ನು ನಿರ್ವಹಿಸುವಲ್ಲಿ ಈ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಮೂರು ಅಖಿಲ ಭಾರತ ಸೇವೆಗಳಲ್ಲಿ ಇದೂ ಒಂದು. ಕೇಂದ್ರೀಯ ಲೋಕ ಸೇವಾ ಆಯೋಗವು (ಯುಪಿಎಸ್ಸಿ)ಈ ನಾಗರಿಕ ಸೇವಾ ಪರೀಕ್ಷೆ ನಡೆಸುತ್ತದೆ. ಇದರಲ್ಲಿ ಮೂರು ಹಂತಗಳಿವೆ: ಪ್ರಾಥಮಿಕ ಪರೀಕ್ಷೆ, ಪ್ರಧಾನ ಪರೀಕ್ಷೆ ಹಾಗೂ ಸಂದರ್ಶನವಿದೆ. ಇವು ಬಹಳಷ್ಟು ಸ್ಪರ್ಧಾತ್ಮಕತೆಯುಳ್ಳವು ಎಂದು ಹೆಸರಾಗಿವೆ. ಇತ್ತೀಚೆಗೆ, ಪ್ರಾಥಮಿಕ ಪರೀಕ್ಷೆಯ ರೂಪರೇಖೆಯನ್ನು ಬದಲಾಯಿಸಲಾಗಿದೆ. ಸುಮಾರು 23 ಐಚ್ಛಿಕ ವಿಷಯಗಳಿದ್ದವು, ಜೊತೆಗೆ, ಸಾಮಾನ್ಯ ಅಧ್ಯಯನ ಪತ್ರಿಕೆಯೂ ಇತ್ತು. ಈಗ ಪ್ರಾಥಮಿಕ ಪರೀಕ್ಷೆಯಲ್ಲಿ ಯಾವುದೇ ಐಚ್ಛಿಕ ವಿಷಯಗಳಿರುವುದಿಲ್ಲ. ಬದಲಿಗೆ, ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಬರೆಯಲೇಬೇಕಾದ ಎರಡನೆಯ ಪರೀಕ್ಷೆಯುಂಟು. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಡಳಿತಾತ್ಮಕ ಕುಶಲತೆಯನ್ನು ಪರೀಕ್ಷಿಸುತ್ತದೆ. ಆದ್ದರಿಂದ ಈ ಪರೀಕ್ಷೆಗೆ ನಾಗರಿಕ ಸೇವಾ ಕುಶಲತಾ ಪರೀಕ್ಷೆ ಎನ್ನಲಾಗಿದೆ. ಸಿವಿಲ್ ಸರ್ವಿಸ್ ಆಪ್ಟಿಟ್ಯುಡ್ ಟೆಸ್ಟ್ [CSAT]ಎನ್ನುತ್ತಾರೆ. ಕುಶಲತೆ, ಸಾಮಾನ್ಯ ಗಣಿತ, ಸಮಗ್ರ ಇಂಗ್ಲಿಷ್ ಭಾಷೆ ಇತ್ಯಾದಿ ಸೇರಿದಂತೆ, ಇದರಲ್ಲಿ ಹಲವು ವಿಭಾಗಗಳಿವೆ.
ಇದನ್ನು ಗಮನಿಸಿ: ಯುಪಿಎಸ್ಸಿ ಐಎಫ್ಎಸ್ ಪರೀಕ್ಷೆ ಫಲಿತಾಂಶ ಪ್ರಕಟ