ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಪ್ರೇರಣೆಯಿಂದ ಉನ್ನತ ಶಿಕ್ಷಣ ಪೂರೈಸಲು ಶೈಕ್ಷಣಿಕ ಸಾಲ ಕೋರಿ ಬರೆದ ಪತ್ರಕ್ಕೆ ಹತ್ತೇ ದಿನಗಳಲ್ಲಿ ಫಲ ದೊರೆತಿದೆ.
ಪಿಇಎಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿರುವ ಬಿಬಿ ಸಾರ ಉನ್ನತ ಶಿಕ್ಷಣ ಪೂರೈಸಲು ಶೈಕ್ಷಣಿಕ ಸಾಲ ಸಿಗದ ಹಿನ್ನಲೆಯಲ್ಲಿ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಪತ್ರ ಬರೆದಿದ್ದರು. ತಕ್ಷಣ ಇದಕ್ಕೆ ಪ್ರಧಾನಿ ಕಾರ್ಯಾಲಯದಿಂದ ಉತ್ತರವೂ ಬಂದಿತ್ತು. ಇದೀಗ ಪತ್ರ ಬಂದ ಕೇವಲ 10 ದಿನಗಳಲ್ಲಿ ಆಕೆಗೆ ಶೈಕ್ಷಣಿಕ ಸಾಲ ಸಿಕ್ಕಿದೆ.
ಸಾರ ಪರಿಚಯ
ಮಡ್ಯದ ಶುಗರ್ ಟೌನ್ ನಿವಾಸಿ ಅಬ್ದುಲ್ ಇಲಿಯಾಸ್ ಪುತ್ರಿ ಬಿಬಿ ಸಾರ ಇವರು ಮಂಡ್ಯಾದ ಪಿಇಎಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದಾರೆ.
ಶೈಕ್ಷಣಿಕ ಸಾಲಕ್ಕಾಗಿ ಪತ್ರ
ಬಿಬಿ ಸಾರ ಎಂಬಿಎ ಮಾಡುತ್ತಿದ್ದು ಉನ್ನತ ವ್ಯಾಸಂಗಕ್ಕಾಗಿ 1.5 ಲಕ್ಷ ಶೈಕ್ಷಣಿಕ ಸಾಲ ಬೇಕಾಗಿತ್ತು. ಕಾಲೇಜು ಶುಲ್ಕ 1 ಲಕ್ಷ ರೂ., ಲ್ಯಾಪ್ಟಾಪ್ ಕಂಪ್ಯೂಟರ್ ಖರೀದಿಗೆ 30 ಸಾವಿರ ರೂ. ಸೇರಿದಂತೆ 1.50 ಲಕ್ಷ ರೂ. ಹಣದ ಅವಶ್ಯಕತೆ ಇತ್ತು. ಇದಕ್ಕಾಗಿ ಸಾರಾ ಪೋಷಕರು "ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ' ಮಂಡ್ಯ ಶಾಖೆಗೆ ವಿದ್ಯಾಭ್ಯಾಸ ಸಾಲಕ್ಕೆ ಅರ್ಜಿ ಹಾಕಿದರು. ಇವರ ಹಣಕಾಸಿನ ಪರಿಸ್ಥಿತಿ ಹಾಗೂ ಮೈಷುಗರ್ ಕಾರ್ಖಾನೆಯ ಸ್ಥಿತಿ-ಗತಿಯನ್ನು ಅರಿತ ಬ್ಯಾಂಕ್ ಮ್ಯಾನೇಜರ್ ವಿದ್ಯಾಭ್ಯಾಸ ಸಾಲ ನೀಡಲು ಸಾಧ್ಯವೇ ಇಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದರು.
ನೆರವಿಗೆ ಬಂದ ಮನ್ ಕೀ ಬಾತ್
ಮನ್ ಕೀ ಬಾತ್ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದ ಸಾರಾಗೆ ಮೋದಿ ಬಗ್ಗೆ ವಿಶ್ವಾಸವಿತ್ತು. ಜೊತೆಗೆ ಪ್ರಧಾನಿ ಅವರು ರಾಜ್ಯದ ಇತರೆ ಜಿಲ್ಲೆಗಳಿಂದ ಮಕ್ಕಳು, ವಿದ್ಯಾರ್ಥಿಗಳು ಬರೆದ ಪತ್ರಕ್ಕೆ ಸ್ಪಂದಿಸಿದ್ದನ್ನೂ ತಿಳಿದುಕೊಂಡಿದ್ದರು. ಅದರಂತೆ ತನಗೂ ಪ್ರಧಾನಿ ಸಹಾಯಾಸ್ತ ಸಿಗಬಹುದೆಂಬ ದೃಢ ವಿಶ್ವಾಸದೊಂದಿಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಳು.
ಪ್ರಧಾನಿಗೆ ಬರೆದ ಪತ್ರ
"ನಮ್ಮ ಕುಟುಂಬದ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ. ವಿದ್ಯಾಭ್ಯಾಸ ಸಾಲಕ್ಕೆ ಬ್ಯಾಂಕ್ಗೆ ಅರ್ಜಿ ಹಾಕಿದರೂ ತಿರಸ್ಕರಿಸಿದ್ದಾರೆ. ಹಣಕಾಸಿನ ಮುಗ್ಗಟ್ಟಿನಿಂದ ವಿದ್ಯಾಭ್ಯಾಸ ಮೊಟಕುಗೊಳ್ಳುವ ಆತಂಕ ತನ್ನನ್ನು ಕಾಡುತ್ತಿದೆ. ತನಗೆ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಬಗ್ಗೆ ಅಪಾರ ಆಸೆ ಇದೆ. ತನಗೆ ನಿಮ್ಮ ಸಹಾಯಾಸ್ತಬೇಕು.
"ಬೇಟಿ ಬಚಾವೋ, ಬೇಟಿ ಪಡಾವೋ'' ಯೋಜನೆ ಯಶಸ್ವಿಗೆ ಕೋಟ್ಯಂತರ ರೂ. ಹಣ ಮೀಸಲಿರಿಸಿದ್ದೀರಿ. ಅದರಂತೆ ತನ್ನ ಓದಿಗೆ ನೀವು ವಿದ್ಯಾಭ್ಯಾಸ ಸಾಲ ದೊರಕಿಸಿಕೊಟ್ಟರೆ ತನ್ನ ಓದನ್ನು ಪೂರ್ಣಗೊಳಿಸಿಕೊಳ್ಳುತ್ತೇನೆ. ತಾನು ಬಿಕಾಂ ಪದವಿಯಲ್ಲಿ ಶೇ.83ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿದ್ದೇನೆ. ಉನ್ನತ ವಿದ್ಯಾಭ್ಯಾಸ ನನ್ನ ಜೀವನದ ಕನಸು. ಅದಕ್ಕಾಗಿ ಸಹಕರಿಸುವಿರೆಂದು ನಂಬಿರುತ್ತೇನೆ' ಎಂದು ಪತ್ರದಲ್ಲಿ ವಿವರಿಸಿದ್ದಳು.
ವಿದ್ಯಾರ್ಥಿನಿಯ ಪತ್ರವನ್ನು ಓದಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ವಿದ್ಯಾಭ್ಯಾಸ ಸಾಲ ಮಂಜೂರು ಮಾಡಿಸುವಂತೆ ಸೂಚಿಸಿದರು. ಈ ಪತ್ರ ನೋಡಿ ವಿಜಯಾಬ್ಯಾಂಕ್ ಸಾರಾಳ ಉನ್ನತ ವ್ಯಾಸಂಗಕ್ಕೆ 1.50 ಲಕ್ಷ ರೂ. ಸಾಲ ನೀಡಿದೆ.