ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಶುರುವಾಗಲಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅನೇಕ ಕ್ರಮಗಳನ್ನು ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಮ್ಮಿಕೊಂಡಿದೆ.
ಕಾಲೇಜು ಸಿಬ್ಬಂದಿಗಳ ಸಹಾಯ
ಪರೀಕ್ಷಾ ಕೆಂದ್ರಕ್ಕೆ ಸೂಕ್ತ ಸಮಯಕ್ಕೆ ತಲುಪಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುವಂತೆ ಯೋಜನೆ ರೂಪಿಸಲಾಗಿದೆ. ಪರೀಕ್ಷಾ ಕೇಂದ್ರದ ದೂರ, ಬಸ್ ನಂಬರ್ ಮತ್ತು ಬಸ್ ನಿಲ್ದಾಣಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ವಾರಂತ್ಯದಲ್ಲಿ ಪರೀಕ್ಷೆಗಳು ಶುರುವಾಗುತ್ತಿರುವುದರಿಂದ ಸಂಚಾರ ದಟ್ಟಣೆ ತುಸು ಹೆಚ್ಚಾಗಿಯೆ ಇರುತ್ತದೆ ಎಂಬ ಮುಂದಾಲೋಚನೆಯಿಂದ ಈಗಾಗಲೇ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷಾ ಕೇಂದ್ರಕ್ಕೆ ತಲುಪುವ ವ್ಯವಸ್ಥೆ ಬಗ್ಗೆ ಪರೀಶಿಲಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸಹಾಯವಾಗಲೆಂದೇ ಕಾಲೇಜು ಸಿಬ್ಬಂದಿಗಳು ಸೂಕ್ತ ಮಾಹಿತಿ ನೀಡುತ್ತಿದ್ದಾರೆ.
ಪರೀಕ್ಷೆ ಹಿಂದಿನ ದಿನವೇ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪರೀಕ್ಷಾ ಕೆಂದ್ರಕ್ಕೆ ಭೇಟಿ ನೀಡಿ, ಅಲ್ಲಿಗೆ ತಲುಪುವ ಬಗ್ಗೆ ಯಾವುದೇ ಗೊಂದಲಗಳು ಇದ್ದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಲಾಗಿದೆ.
ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್
ಸಾಮೂಹಿಕ ನಕಲು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸೆಕ್ಯೂರ್ ಎಕ್ಸಾಮಿನೇಶನ್ ಸಿಸ್ಟ್ಂ ಅಳವಡಿಸಿಕೊಂಡಿದೆ. ಆ ಪ್ರಕಾರ ಅದೇ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅದೇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತಿಲ್ಲ , ಬದಲಾಗಿ ಅನ್ಯಕಾಲೇಜಿನಲ್ಲಿ ಪರೀಕ್ಷೆಗಳನ್ನು ಬರೆಯಬೇಕು ಎಂಬ ನಿಯಮ ರೂಪಿಸಲಾಗಿದೆ.
ಈ ಬಾರಿ ಸೆಕ್ಯೂರ್ ಎಕ್ಶಾಮಿನೇಷನ್ ಸಿಸ್ಟಮ್ ಜಾರಿ ಮಾಡಿರುವುದರಿಂದ ವಿದ್ಯಾರ್ಥಿಗಳು ಅನ್ಯಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಯಾವುದೇ ಗೊಂದಲಗಳು ನಿರ್ಮಾಣವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಘವು ನಿರ್ಧರಿಸಿದೆ.
ಎಲ್ಲ ಕಾಲೇಜುಗಳ 15 ಕಿ.ಮೀ. ವ್ಯಾಪ್ತಿಯೊಳಗಿನ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷಾ ಕೇಂದ್ರದ ವಿಳಾಸ, ತಲುಪುವ ಬಗೆ ಮಾಹಿತಿಯನ್ನು ಈಗಾಗಲೇ ಕಾಲೇಜಿನ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರ ನೀಡಲಾಗಿದ್ದು, ಅದರಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರ ಸೂಚಿಸಲಾಗಿದೆ.
ಪರೀಕ್ಷಾ ಸಮಯ ಬದಲಾವಣೆ
ಈ ಬಾರಿ ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಪ್ರಾರಂಭಗೊಳ್ಳುವುದರಿಂದ ವಿದ್ಯಾರ್ಥಿಗಳು ಪರೀಕ್ಷಾ ಕೆಂದ್ರಗಳನ್ನು ತಲುಪಲು ಸಹಕಾರಿಯಾಗಿದೆ, ಅಲ್ಲದೇ ಯಾವುದೇ ಗೊಂದಲ ಗಡಿಬಿಡಿಗಳಿಲ್ಲದೇ ಪರೀಕ್ಷೆ ಬರೆಯಬಹುದಾಗಿದೆ.
ಬಸ್ ವ್ಯವಸ್ಥೆ
ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ಹಾಗೂ ಹೆಚ್ಚುವರಿ ಬಸ್ಗಳನ್ನು ಕಲ್ಪಿಸುವಂತೆಯು ಕೋರಲಾಗಿದೆ. ಅಲ್ಲದೆ ಬಸ್ ಮಾರ್ಗ ಮತ್ತು ಬಸ್ ನಂಬರ್ಗಳನ್ನು ಸುಲಭವಾಗಿ ವಿದ್ಯಾರ್ಥಿಗಳಿಗೆ ದೊರಕುವ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಶ್ನೆ ಪತ್ರಿಕೆಗಳ ರವಾನೆ
ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಆಯಾ ಜಿಲ್ಲಾ ಖಜಾನೆಗೆ ಸುರಕ್ಷಿತವಾಗಿ ತಲುಪುವಂತೆ ಮಾಡಲಾಗಿದೆ. ಅತ್ಯಂತ ಬಿಗಿ ಭದ್ರತೆಯೊಂದಿಗೆ ವಿಶೇಷ ವಾಹನದ ಮೂಲಕ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಬಂಡಲ್ ಗಳು ಪರೀಕ್ಷೆ ನಡೆಯುವ ಎಲ್ಲಾ ಜಿಲ್ಲಾ ಕೆಂದ್ರಗಳಿಗೂ ತಲುಪಿವೆ.
ಬಿಗಿ ಭದ್ರತೆ
ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ, ಪರೀಕ್ಷಾ ಅವಧಿ ವರೆಗೆ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಉತ್ತರ ಪತ್ರಿಕೆ ಹಾಗೂ ಇತರ ಲೇಖನ ಸಾಮಗ್ರಿಗಳನ್ನು ಈಗಾಗಲೇ ಒದಗಿಸಲಾಗಿದ್ದು, ಪರೀಕ್ಷೆಗಳು ಸೂಸುತ್ರವಾಗಿ ನಡೆಯಲು ಸಹಕಾರಿಯಾಗಿದೆ.
ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ
ವಿದ್ಯಾರ್ಥಿ ಮಾಹಿತಿ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ: 080-23083900ನ್ನು ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ಸಂಪರ್ಕಿಸ ಬಹುದು.
ಇದನ್ನು ಗಮನಸಿ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮಗಳು