ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ 19ನೇ ಘಟಿಕೋತ್ಸವದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ಸ್ವಾತಿ 5 ಸ್ವರ್ಣ ಪದಕ ಪಡೆದಿದ್ದಾರೆ. ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ವಿ.ಆರ್. ವಾಲಾ ಚಿನ್ನದ ಪದಕ ಹಾಗೂ ಪದವಿ ಪ್ರದಾನ ಮಾಡಿದರು.
ರಾಜೀವ್ ಗಾಂಧಿ ವಿವಿ ಹಾಗೂ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೆದ ವೈದ್ಯಕೀಯ ಕಾಲೇಜಿನ ಇತಿಹಾಸದಲ್ಲೇ ಓರ್ವ ಯುವತಿ 5 ಸ್ವರ್ಣ ಪಡೆದಿದ್ದು ಇದೇ ಮೊದಲಾಗಿದ್ದು ಸ್ವಾತಿ ಹೊಸ ದಾಖಲೆ ಬರೆದಿದ್ದಾರೆ
ಹಾಸನದ ಶ್ರೀ ಧರ್ಮಸ್ಥಳ ಆಯುರ್ವೆದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಬಿ.ಎನ್. ಸ್ವಾತಿ ಗ್ರಾಮೀಣ ಪ್ರದೇಶದ ಕೃಷಿಕ ಕುಟುಂಬದಿಂದ ಬಂದು ಎಸ್ ಎಸ್ ಎಲ್ ಸಿ ವರೆಗೂ ಕನ್ನಡ ಮಾಧ್ಯಮದಲ್ಲೇ ಓದಿ ಆಯುರ್ವೇದ ವೈದ್ಯಕೀಯದಲ್ಲಿ ಐದು ಚಿನ್ನದ ಪದಕಗಳಿಸಿದ್ದಾರೆ.
ಚಿತ್ರದುರ್ಗ ಹಿರಿಯೂರು ತಾಲೂಕಿನ ಸೊಂಡೆಕೆರೆಯವರಾದ ಸ್ವಾತಿ, ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾರೆ. ತಂದೆ ಡಿ.ಸಿ. ನಂಜುಂಡಪ್ಪ 4 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ತಾಯಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದಾರೆ.
ಆರಂಭದಲ್ಲಿ ಕಷ್ಟ ಎದುರಿಸಿದ ಸ್ವಾತಿ
ಎಸ್ ಎಸ್ ಎಲ್ ಸಿ ಮುಗಿಸಿದ ನಂತರ ಪಿಯುಸಿಗೆ ಸೇರಿದಾಗ ಸ್ವಾತಿಯವರಿಗೆ ಓದು ಕಠಿಣವಾಗಿತ್ತು. ಇದಕ್ಕೆ ಕಾರಣ ಇಂಗ್ಲಿಷ್ ಹಾಗೂ ವಿಜ್ಞಾನ ವಿಭಾಗದ ಆಯ್ಕೆ. ಯಾವುದು ಕಠಿಣವೆನಿಸಿತೋ ಅದನ್ನೇ ಸವಾಲಾಗಿ ಸ್ವೀಕರಿಸಿದ ಸ್ವಾತಿ ಇಂದು ಐದು ಚಿನ್ನದ ಪದಕಗಳನ್ನು ಗೆದ್ದಿರುವುದು ಎಲ್ಲರಿಗು ಮಾದರಿಯಾಗಿದ್ದಾರೆ. ಆರಂಭದಲ್ಲಿ ಕಷ್ಟವಾದರೂ ಕಠಿಣ ಪರಿಶ್ರಮ ಫಲ ನೀಡಿತು ಎಂದು ಸ್ವಾತಿ ಹೇಳಿದ್ದಾರೆ.
ಗ್ರಾಮೀಣ ಮಹಿಳೆಯರ ಸಮಸ್ಯೆ ಪರಿಹರಿಸಬೇಕು ಎನ್ನುವುದು ಸ್ವಾತಿಯ ಗುರಿಯಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತು ಹಳ್ಳಿಯಲ್ಲೇ ಬೆಳೆದಿರುವ ಸ್ವಾತಿಗೆ ಕಷ್ಟಗಳ ಅರಿವಿದೆ. 'ಗ್ರಾಮೀಣ ಭಾಗದ ಮಹಿಳೆಯರು ಇಂದಿಗೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ವೈದ್ಯೆ ನಾನಾಗಬೇಕು' ಎಂದು ಹೇಳುತ್ತಾರೆ.
ಐದು ಚಿನ್ನ ಪಡೆದ ದೀಪ್ತಿ
ಮತ್ತೊಂದು ವಿಶೇಷವೆಂದರೆ ವಿದ್ಯಾರ್ಥಿನಿ ದೀಪ್ತಿ ಕೂಡ ಐದು ಸ್ವರ್ಣ ಪದಕ ಪಡೆದಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನ ಡಾ. ದೀಪ್ತಿ ಅಗರ್ವಾಲ್ 5 ಚಿನ್ನದ ಪದಕ ಗಳಿಸಿದ್ದಾರೆ.
69 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ
ನಿನ್ನೆ ನಡೆದ ಘಟಿಕೋತ್ಸವದಲ್ಲಿ ಒಟ್ಟು 69 ವಿದ್ಯಾರ್ಥಿಗಳಿಗೆ 103 ಚಿನ್ನದ ಪದಕ ಹಾಗೂ 9 ನಗದು ಬಹುಮಾನ ನೀಡಲಾಗಿದೆ. ಆರ್.ವಿ. ಡೆಂಟಲ್ ಕಾಲೇಜ್ ವಿದ್ಯಾರ್ಥಿ, ಬಿಹಾರ ಮೂಲದ ಅಭಿಷೇಕ್ ಪಾಠಕ್ ಹಾಗೂ ಯಾದಗಿರಿಯ ಭಾಗ್ಯಶ್ರೀ ತಲಾ ನಾಲ್ಕು ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಘಟಿಕೋತ್ಸವದ ಮುಖ್ಯಾಂಶಗಳು
ಒಟ್ಟು 26,698 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, ಇದರಲ್ಲಿ 51 ಪಿಎಚ್ಡಿ, 130 ಸೂಪರ್ ಸ್ಪೆಷಾಲಿಟಿ, 5,140 ಸ್ನಾತಕೋತ್ತರ ಪದವಿ, 188 ಫೆಲೋಶಿಪ್ ಕೋರ್ಸ್, 17 ಸರ್ಟಿಫಿಕೆಟ್ ಕೋರ್ಸ್ ಹಾಗೂ 21,172 ಪದವಿ ಅಭ್ಯರ್ಥಿಗಳು ಸೇರಿದ್ದಾರೆ.
ಇಬ್ಬರಿಗೆ ಗೌರವ ಡಾಕ್ಟರೇಟ್
ಹೃದ್ರೋಗ ತಜ್ಞ ಡಾ. ಗೋವಿಂದರಾಜ್ ಸುಬ್ರಮಣಿ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಕುತುಪಾಡಿ ಗೋವಿಂದ ದಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.