ಶ್ರಮಕ್ಕೆ ತಕ್ಕ ಪ್ರತಿಫಲವಿರುತ್ತದೆ ಎನ್ನುವುದಕ್ಕೆ ಹೈದರಾಬಾದ್ ಮೂಲದ ವಿದ್ಯಾರ್ಥಿಯೇ ಸಾಕ್ಷಿ. ಬಡತನದಲ್ಲಿ ಹುಟ್ಟಿದರು ಈತನ ಪ್ರತಿಭೆಗೆ ವಿದ್ಯಾ ದೇವಿ ಒಲಿದಿದ್ದಾಳೆ. ಜೆಇಇ ಮುಖ್ಯ ಪ್ರವೇಶ ಪರೀಕ್ಷೆಯಲ್ಲಿ ಆರನೇ ರ್ಯಾಂಕ್ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.
ಬಡತನವನ್ನು ಮೀರಿ ಸಾಧನೆ ಮಾಡಿರುವ ಈ ಪ್ರತಿಭೆಯ ಹೆಸರು ವಿ ಮೋಹನ್ ಅಭ್ಯಾಸ್. ಪ್ರತಿಭೆಗೆ ಬಡತನ ಯಾವುದೇ ರೀತಿಯಲ್ಲೂ ಅಡ್ಡಿಯಾಗಲಿಲ್ಲ ಎಂದು ನಿರೂಪಿಸಿದ್ದಾನೆ ಹೈದರಾಬಾದ್ ಮೂಲದ ಈ ವಿದ್ಯಾರ್ಥಿ.
ಜೆಇಇ ಪರೀಕ್ಷೆ ಎಂದರೆ ಸಾಮಾನ್ಯವಲ್ಲ, ಸಾಕಷ್ಟು ಪರಿಶ್ರಮವಿದ್ದರೆ ಮಾತ್ರ ಆ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಲು ಸಾಧ್ಯ. ಅದಕ್ಕಾಗಿ ಹಲವು ವಿದ್ಯಾರ್ಥಿಗಳು ಊಟ ನಿದ್ದೆ ಬಿಟ್ಟು ಓದುತ್ತಾರೆ. ಇನ್ನು ಓದಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಪ್ರತ್ಯೇಕ ಜಾಗಗಳಲ್ಲಿ ಓದುತ್ತಾರೆ. ಆದರೆ ಕಷ್ಟಗಳ ನಡುವೆಯೆ ಆರನೇ ರ್ಯಾಂಕ್ ಗಳಿಸಿರುವ ಮೋಹನ್ ಎಲ್ಲರನ್ನು ತನ್ನತ್ತ ತಿರುಗುವಂತೆ ಮಾಡಿದ್ದಾನೆ.
11.8 ಲಕ್ಷ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಅವರಲ್ಲಿ ಮೋಹನ್ 360 ಅಂಕಗಳಿಗೆ ಮೋಹನ್ 345 ಗಳಿಸಿ ಆರನೇ ರ್ಯಾಂಕ್ ಪಡೆದಿದ್ದಾನೆ.
ತಂದೆತಾಯಿ ಸಮೋಸಾ ವ್ಯಾಪಾರಿಗಳು. ಮೋಹನ್ ತಾಯಿ ಮನೆಯಲ್ಲೇ ಸಮೋಸಾ ತಯಾರಿಸಿದರೆ, ಅವರ ತಂದೆ ಬೀದಿಬೀದಿ ತಿರುಗಿ ಅವನ್ನು ಮಾರುತ್ತಾರೆ. ಹೈದರಾಬಾದ್ ನ ಕೂಕಟ್ ಪಲ್ಲಿಯ ಕೆಲವು ಅಂಗಡಿಗಳಿಗೂ ಇವರು ಸಮೋಸಾಗಳನ್ನು ಸರಬರಾಜು ಮಾಡುತ್ತಾರೆ. ಓದಿಕೊಳ್ಳುವುದರ ಜತೆಗೆ ತನ್ನ ತಂದೆತಾಯಿಗೆ ಸಮೋಸಾ ವ್ಯಾಪಾರದಲ್ಲೂ ತೊಡಗಿಸಿಕೊಳ್ಳುತ್ತಿದ್ದ ಮೋಹನ್.
ಮೋಹನ್ ತಂದೆ ಸುಬ್ಬಾರಾವ್ ಅವರು ಪಶ್ಚಿಮ ಗೋದಾವರಿ ಜಿಲ್ಲೆಯಿಂದ ಜೀವನ ನಿರ್ವಹಣೆಗಾಗಿ ಹೈದರಾಬಾದಿಗೆ ಬಂದವರು. ಆಗಿನಿಂದಲೂ ಸಮೋಸಾ ವ್ಯಾಪಾರವೇ ಅವರಿಗೆ ಆಧಾರ. ಇದೀಗ ಮಗನ ಸಾಧನೆಯಿಂದ ತಂದೆತಾಯಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಮೋಹನ್ ಕೇವಲ ಜೆಇಇ ಪರೀಕ್ಷೆಯಲ್ಲಿ ಮಾತ್ರವಲ್ಲ, ಆಂಧ್ರಪ್ರದೇಶದ ಎಂಜಿನಿಯರಿಂಗ್ ಮೆಡಿಕಲ್ ಪ್ರವೇಶ ಪರೀಕ್ಷೆ (ಎಂಸೆಟ್)ಯಲ್ಲಿ ಪ್ರಥಮ ರ್ಯಾಂಕ್ ಸಾಧಿಸಿದ್ದಾನೆ ಹಾಗೂ ತೆಲಂಗಾಣದ ಇಎಎಂಸಿಇಟಿಯಲ್ಲಿ ಐದನೇ ರ್ಯಾಂಕ್ ಪಡೆದಿದ್ದಾನೆ.
ಇಷ್ಟೆಲ್ಲ ಸಾಧನೆ ಮಾಡಿರುವ ಮೋಹನ್ ಗೆ ಮುಂದೆ ಚೆನ್ನೈ ಐಐಟಿಯಲ್ಲಿ ಬಿ.ಇ (ಭೌತಶಾಸ್ತ್ರ) ಅಧ್ಯಯನ ಮಾಡಿ ವಿಜ್ಞಾನಿಯಾಗಬೇಕೆಂಬ ಆಸೆ.