ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಶಿಕ್ಷಣ ನೀತಿಗೆ ಒಂಬತ್ತು ಜನರ ಸಮಿತಿ ರಚನೆಯಾಗಿದ್ದು, ಸಮಿತಿಗೆ ಬಾಹ್ಯಾಕಾಶ ವಿಜ್ಞಾನಿ ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ನೂತನ ಸಮಿತಿ
ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯತೆ ಹೊಂದಿರುವವರು ಹಾಗೂ ಶಿಕ್ಷಣ ತಜ್ಞರುಗಳು ಈ ಹೊಸ ಸಮಿತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಗೆ ಮುಖ್ಯಸ್ಥರಾಗಿದ್ದ ಕಸ್ತೂರಿ ರಂಗನ್ ಸೇರಿದಂತೆ, ಕೇರಳದ ಕೊಟ್ಟಾಯಂ ಹಾಗೂ ಎರ್ನಾಕುಲಂ ಜಿಲ್ಲೆಗಳಲ್ಲಿ ಶೇ.100ರಷ್ಟು ಸಾಕ್ಷರತೆ ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ಕೆಜೆ ಅಲ್ಫೋನ್ಸ್ ಕಣ್ಣನ್ತಾನಂ ಸಹ ಇದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಸಮಿತಿಯ ಸದಸ್ಯರು
ಮಧ್ಯಪ್ರದೇಶದ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜಶಾಸ್ತ್ರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ರಾಮ್ ಶಂಕರ್ ಕುರೀಲ್, ಕರ್ನಾಟಕ ರಾಜ್ಯ ಇನ್ನೋವೇಷನ್ ಕೌನ್ಸಿಲ್ನ ಸದಸ್ಯ ಕಾರ್ಯದರ್ಶಿ ಡಾ.ಎಂ.ಕೆ ಶ್ರೀಧರ್, ಭಾಷಾ ಸಂವಹನ ತಜ್ಞ ಡಾ.ಟಿ.ವಿ ಕಟ್ಟಿಮನಿ, ಗುವಾಹಟಿ ವಿವಿಯ ಪ್ರಧ್ಯಾಪಕ ಡಾ.ಮಜ್ಹರ್ ಆಸೀಫ್ ಹಾಗೂ ಉತ್ತರ ಪ್ರದೇಶ ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕ ಕ್ರಿಶನ್ ಮೋಹನ್ ತ್ರಿಪಾಠಿ ಅವರು ಸಮಿತಿಯಲ್ಲಿದ್ದಾರೆ. ಪ್ರಿನ್ಸ್ಟನ್ ವಿವಿಯ ಗಣಿತಜ್ಞ ಮಂಜುಳ್ ಭಾರ್ಗವ್ ಹಾಗೂ ಮುಂಬೈನ ಎಸ್ಎನ್ಡಿಟಿ ವಿವಿಯ ಉಪಕುಲಪತಿ ವಸುಧಾ ಕಾಮತ್ ಸಹ ಕಾರ್ಯನಿರ್ವಹಿಸಲಿದ್ದಾರೆ.
ಭಾರತೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆಗಳನ್ನು ತರುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಿಕ್ಷಣದ ವಿವಿಧ ಕ್ಷೇತ್ರಗಳಲ್ಲಿನ ಪ್ರಾವೀಣ್ಯತೆ ಮತ್ತು ವೈವಿಧ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ಸಮಿತಿಯನ್ನು ನೇಮಿಸಲಾಗಿದೆ. ಸಮಿತಿಯಲ್ಲಿರುವ ಸದಸ್ಯರನ್ನು ರಾಷ್ಟ್ರದ ವಿವಿಧ ಭಾಗಗಳಿಂದ ಆರಿಸಲಾಗಿದೆ. ಅವರು ದೇಶದ ವೈವಿಧ್ಯತೆಯನ್ನು ಪ್ರತಿನಿಧಿಸಲಿದ್ದು, ಇದರಿಂದಾಗಿ ಅನುಭವ ಆಧಾರಿತ, ಕೌಶಲ್ಯಪೂರಕ ಮತ್ತು ಜಾಗತಿಕ ಮಾನ್ಯತೆ ಗಳಿಸಬಲ್ಲ ಶಿಕ್ಷಣ ನೀತಿಯನ್ನು ರೂಪಿಸಲು ಸಹಾಯಕವಾಗಲಿದೆ ಎಂದು ಎಚ್ಆರ್ಡಿಯ ಉನ್ನತಾಧಿಕಾರಿಗಳು ಹೇಳಿದ್ದಾರೆ
ಕಳೆದ 30 ತಿಂಗಳಿನಿಂದ ಶಿಕ್ಷಣ ನೀತಿ ಬಗ್ಗೆ ಯೋಜನೆ ರೂಪಿಸಿದ್ದು, ಈಗಾಗಲೇ ದೇಶದ ಶಿಕ್ಷಣ ತಜ್ಞರುಗಳು, ವಿದ್ವಾಂಸರು, ವಿಜ್ಞಾನಿಗಳು ಸೇರಿದಂತೆ ಹಲವು ಹಿರಿಯರಿಂದ ಸಲಹೆ ಪಡೆಯಲಾಗಿದೆ. ಅಲ್ಲದೇ ಸಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿ ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗಿದೆ.
2015ರಲ್ಲಿ ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಶಿಕ್ಷಣ ನೀತಿ ಬದಲಾಯಿಸಲು ಚಾಲನೆ ನೀಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.