ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮುಗಿದಿದ್ದು ಶಿಕ್ಷಣ ಇಲಾಖೆ ಒಂದು ಹಂತದ ಪರೀಕ್ಷಾ ಕಾರ್ಯವನ್ನು ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ಮುಗಿಸಿದೆ. ಈಗ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇಲಾಖೆಯು ಸಜ್ಜಾಗಿದ್ದು ಇದೇ ತಿಂಗಳ 20 ರಿಂದ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿವೆ.
ಏಪ್ರಿಲ್ 20 ರಿಂದ ರಾಜ್ಯಾದ್ಯಂತ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಲಿದ್ದು 8.70 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಭವಿಷ್ಯವನ್ನು ಸುಮಾರು 68 ಸಾವಿರ ಶಿಕ್ಷಕರು ಬರೆಯಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮೌಲ್ಯಮಾಪನಕ್ಕೆ ಹೆಚ್ಚು ಶಿಕ್ಷಕರು ಮತ್ತು ಹೆಚ್ಚಿನ ಕೇಂದ್ರಗಳನ್ನು ನಿಯೋಜಿಸಲಾಗಿದೆ.
225 ಮೌಲ್ಯಮಾಪನ ಕೇಂದ್ರಗಳು
ಈ ಬಾರಿಯ ಎಸ್ ಎಸ್ ಎಲ್ ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ರಾಜ್ಯದ 225 ಕಡೆ ಮೌಲ್ಯಮಾಪನ ಕೇಂದ್ರಗಳನ್ನು ಗುರುತಿಸಲಾಗಿದ್ದು, 33 ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರತಿ ವಿಷಯಕ್ಕೆ ಒಂದು ಮೌಲ್ಯಮಾಪನ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಇರುವ ಕಡೆ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗಿದ್ದು ಫಲಿತಾಂಶವನ್ನು ಬೇಗ ನೀಡುವ ಉದ್ದೇಶದಿಂದ ಹೆಚ್ಚಿನ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಮೌಲ್ಯಮಾಪನಕ್ಕೆ 68,567 ಶಿಕ್ಷಕರು
ಮೌಲ್ಯಮಾಪನ ಕಾರ್ಯಕ್ಕಾಗಿ 68,567 ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ಅವರಿಗೆ ಸೂಚನಾ ಪತ್ರ ಕಳುಹಿಸಲಾಗಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ 2,770 ಕೇಂದ್ರಗಳಲ್ಲಿ ನಡೆದಿದ್ದು, 72 ಸೂಕ್ಷ್ಮ ಮತ್ತು 17 ಅತೀ ಸೂಕ್ಷ್ಮ ಕೇಂದ್ರಗಳಲ್ಲಿ ಒಟ್ಟು 8,70 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 31 ರಿಂದ ಏಪ್ರಿಲ್ 12 ರವರೆಗೂ ಪರೀಕ್ಷೆಗಳು ನಡೆದಿವೆ.
ಪರೀಕ್ಷೆ ನಡೆದ 30 ದಿನಗಳಲ್ಲಿ ಫಲಿತಾಂಶ ಹೊರ ಹಾಕುವ ಅಲಿಖಿತ ನಿಯಮವನ್ನು ಹಾಕಿಕೊಳ್ಳಲಾಗಿದೆ. ಮೌಲ್ಯ ಮಾಪಕರ ಸಹಕಾರದಿಂದ ಆದಷ್ಟು ಬೇಗ ಫಲಿತಾಂಶ ನೀಡಲು ಮಂಡಳಿ ಸಿದ್ಧತೆ ನಡೆಸಿದೆ. ವೆಬ್ ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಜೊತೆಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ಸೂಕ್ತ ಸಮಯಕ್ಕೆ ಸಿಗುವಂತೆ ವ್ಯವಸ್ಥೆ ಮಾಡಲು ಎಲ್ಲಾ ತಯಾರಿ ಮಾಡಲಾಗಿದೆ.