ಎಸ್ಎಸ್ಎಲ್ಸಿ ಪರೀಕ್ಷೆಗಳು ಆರಂಭವಾದಾಗಿನಿಂದ ದಿನಕ್ಕೊಂದು ಹೊಸ ಸುದ್ದಿ ಬರುತ್ತಲೇ ಇದೆ. ಪರೀಕ್ಷೆಯಲ್ಲಿ ನಕಲು, ವಿದ್ಯಾರ್ಥಿಗಳ ಡಿಬಾರ್ ಹೊರತುಪಡಿಸಿ ಹಲವು ಕುತೂಹಲ ಘಟನೆಗಳು ನಡೆದಿವೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಏನಾದರು ಒಂದು ವಿಶೇಷ ಘಟನೆಗಳು ಜರುಗುತ್ತಲೇ ಇರುತ್ತವೆ, ಈ ಬಾರಿ ಅಂತಹ ಕೆಲವು ಘಟನೆಗಳು ನಡೆದಿದ್ದು ಕುತೂಹಲವನ್ನು ಮೂಡಿಸಿವೆ.
ಮಗಳ ಜೊತೆ ಪರೀಕ್ಷೆ ಬರೆದ ಪುರಸಭೆ ಅಧ್ಯಕ್ಷೆ
ಚಿಕ್ಕೋಡಿಯಲ್ಲಿ ತಾಯಿ ಮತ್ತು ಮಗಳು ಇಬ್ಬರು ಹತ್ತನೇ ತರಗತಿಯ ಪರೀಕ್ಷೆ ಬರೆದಿದ್ದಾರೆ. ತಾಯಿ ಆರತಿ ಮತ್ತು ಮಗಳು ನೀತಾ ಈ ಬಾರಿ ಒಟ್ಟಿಗೆ ಪರೀಕ್ಷೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ತಾಯಿ ಪುರಸಭೆಯ ಅಧ್ಯಕ್ಷೆಯಾಗಿರುವುದು ಮತ್ತೊಂದು ವಿಶೇಷ.
ಆರತಿಯವರಿಗೆ 40 ವರ್ಷ ವಯಸ್ಸಾಗಿದ್ದು, ಮೂರು ಮಕ್ಕಳ ತಾಯಿಯಾಗಿ ಸಂಸಾರಿಕ ಕೆಲಸ ಕಾರ್ಯಗಳ ಜೊತೆಗೆ ಪುರಸಭೆ ಅಧ್ಯಕ್ಷಗಿರಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ತಮ್ಮ ಮಗಳ ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆ ತಯಾರಿ ನಡೆಸಿದ್ದ ಆರತಿಯವರು ಇತರರಂತೆ ಪರೀಕ್ಷೆ ಬರೆದಿದ್ದಾರೆ.
ಇನ್ನು ಆರತಿ ಅವರು ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಪ್ರೌಢ ಶಾಲೆಯಲ್ಲಿ 1993ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು. ಅಂದು ಅವರು ಎರಡು ವಿಷಯದಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಜೀವನದಲ್ಲಿ ತಾವು ಉನ್ನತವಾದ ಶಿಕ್ಷಣ ಪಡೆಯಬೇಕೆಂಬ ಹಠದಿಂದಾಗಿ ಅವರು ಇದೀಗ ಮತ್ತೆ ತಮ್ಮ ಶಿಕ್ಷಣ ಮುಂದುವರೆಸಿದ್ದಾರೆ. ಇವರ ಈ ಆಸೆಗೆ ಮಕ್ಕಳು ಹಾಗೂ ಪತಿ ಚಂದ್ರಶೇಖರ್ ಪ್ರೋತ್ಸಾಹ ನೀಡಿದ್ದಾರೆ.
ತಮ್ಮ ಕುಟುಂಬ ಸುಶಿಕ್ಷಿತವಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಆರತಿ-ಚಂದ್ರಶೇಖರ ದಂಪತಿ ತಮ್ಮ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸುತ್ತಿದ್ದಾರೆ. ಅಲ್ಲದೇ ಮಗ ಉನ್ನತ ಶಿಕ್ಷಣ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾನೆ. ಆರತಿಯವರ ಪುತ್ರಿ ನೀತಾ ಮುಂಡೆ ದಿನವೂ ತನ್ನ ತಾಯಿಗೆ ಪಠ್ಯ ವಿಷಯಗಳನ್ನು ಹೇಳಿಕೊಡುವ ಮೂಲಕ ಪರೀಕ್ಷೆಗೆ ತಾಯಿಯನ್ನು ಸಿದ್ಧಗೊಳಿಸಿದ್ದಳು.
ಕಳೆದ ವರ್ಷ ಮುಂಬೈನಲ್ಲಿ ಇಂತದ್ದೇ ಘಟನೆ ನಡೆದಿದ್ದನ್ನು ಈ ವರದಿ ನೆನಪಿಸಿದೆ.
ಕನ್ನಡ ಬದಲು ಇಂಗ್ಲಿಷ್ ಪರೀಕ್ಷೆ ಬರೆದ ವಿದ್ಯಾರ್ಥಿ
ಇದು ನಂಬಲಾಸಾಧ್ಯವಾದರು ನಂಬಲೇಬೇಕು. ಕನ್ನಡದ ಪರೀಕ್ಷೆ ಬದಲು ಇಂಗ್ಲಿಷ್ ಬರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರೀಕ್ಷೆ ಮುಗಿಸಿ ಮನೆಗೆ ತೆರಳಿದ ಮೇಲೆ ಯಾವ ಪರೀಕ್ಷೆ ಬರೆದಿದ್ದೇನೆ ಎಂದು ಅರಿವಾಗಿರುವುದು ಮತ್ತಷ್ಟು ಆಶ್ಚರ್ಯವನ್ನುಂಟು ಮಾಡಿದೆ.
ಹೆಬ್ಬಾಳದ ಪ್ರಿಯದರ್ಶಿನಿ ಹೈಸ್ಕೂಲ್ ನ ವಿದ್ಯಾರ್ಥಿಯ ಮೊದಲ ಭಾಷಾ ಅಧ್ಯಯನ ಕನ್ನಡವಾಗಿದ್ದು, ಪರೀಕ್ಷೆ ದಿನ ಕನ್ನಡ ಬರೆಯುವ ಬದಲು ಇಂಗ್ಲಿಷ್ ಬರೆದಿದ್ದಾನೆ. ಕನ್ನಡ ಭಾಷಾ ಪರೀಕ್ಷೆ ಹೇಗೆ ಮಾಡಿದೆ ಎಂದು ಮನೆಗೆ ಬಂದಾಗ ಪೋಷಕರು ಕೇಳಿದಾಗಲೇ ತಾನು ಮಾಡಿರುವ ತಪ್ಪು ಆತನಿಗೆ ಅರಿವಾಗಿದೆ.
ವಿಶೇಷ ಪ್ರಕರಣಕ್ಕೆ ಮನವಿ
ಕನ್ನಡಕ್ಕೆ ಬದಲಾಗಿ ಇಂಗ್ಲಿಷ್ ಬರೆದಿದ್ದಾನೆ ಎಂದು ಗೊತ್ತಾದಾಗ ಪೋಷಕರು ಶಾಲೆಯ ಮುಖ್ಯಸ್ಥರಿಗೆ ಹೋಗಿ ತಿಳಿಸಿದ್ದಾರೆ. ಕೂಡಲೇ ಕರ್ನಾಟಕ ಪ್ರೌಢಶಿಕ್ಷಣ ಮತ್ತು ಪರೀಕ್ಷಾ ಮಂಡಳಿಗೆ ಶಾಲೆಯ ಮುಖ್ಯಸ್ಥರು ಪತ್ರ ಬರೆದು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ತಪ್ಪಿಗೆ ಪರಿಹಾರ
ವಿದ್ಯಾರ್ಥಿಗೆ ಉಳಿದಿರುವುದು ಇನ್ನೊಂದೇ ಮಾರ್ಗ ಅದು ಜೂನ್ ನಲ್ಲಿ ನಡೆಯುವ ಪೂರಕ ಪರೀಕ್ಷೆ ಬರೆಯುವುದು ಎಂದು ಎಸ್ಎಸ್ಎಲ್ ಸಿ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿ ಮತ್ತು ಸಂವೀಕ್ಷಕರು ಇಬ್ಬರದ್ದು ಇಲ್ಲಿ ತಪ್ಪಿದ, ಯಾವ ವಿಷಯ ಎಂದು ವಿದ್ಯಾರ್ಥಿಗೆ ಗೊತ್ತಿರಬೇಕಿತ್ತು ಅಲ್ಲದೇ ವಿದ್ಯಾರ್ಥಿಯ ಮೊದಲ ಭಾಷೆ ಯಾವುದು ಎಂದು ಕೊಠಡಿಯ ಸಂವೀಕ್ಷಕರು ಪ್ರಶ್ನೆ ಪತ್ರಿಕೆ ನೀಡುವ ಮುನ್ನ ಹಾಲ್ ಟಿಕೆಟ್ ನಲ್ಲಿ ನೋಡಬೇಕಿತ್ತು ಆದರೆ ಇಲ್ಲಿ ಇಬ್ಬರೂ ಎಡವಿದ್ದು ಈಗ ವಿದ್ಯಾರ್ಥಿ ಜೂನ್ ತಿಂಗಳಲ್ಲಿ ಪರೀಕ್ಷೆ ಬರೆಯುವಂತಾಗಿದೆ.