ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಗುರುವಾರ ಪ್ರೌಢಶಿಕ್ಷಣ ಮಂಡಳಿಯು ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಇಂದು ಎಲ್ಲಾ ಶಾಲೆಗಳಲ್ಲಿ ಫಲಿತಾಂಶಗಳು ಲಭ್ಯವಿದೆ.
ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಶೇ 50.81 ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಆರು ವರ್ಷಗಳಲ್ಲಿಯೇ ಅತ್ಯಧಿಕ ಫಲಿತಾಂಶವಾಗಿದ್ದು ಒಟ್ಟು 1,23,443 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ವಿಜಯಪುರ (ಶೇ76.23) ಪ್ರಥಮ, ಚಿಕ್ಕೋಡಿ (ಶೇ 74.68) ದ್ವಿತೀಯ, ಬೆಳಗಾವಿ (ಶೇ 73.19) ತೃತೀಯ ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ (ಶೇ 27.61) ಕೊನೆ ಸ್ಥಾನ ಪಡೆದಿದೆ.
ಫಲಿತಾಂಶದ ವಿವರ
ಪರೀಕ್ಷೆಗೆ ಹಾಜರಾದವರು : 242951
ತೇರ್ಗಡೆಯಾದವರು: 123442
ತೇರ್ಗಡೆಯಾದ ಬಾಲಕರು: 73865
ತೇರ್ಗಡೆಯಾದ ಬಾಲಕಿಯರು: 49578
ಗ್ರಾಮೀಣ ವಿದ್ಯಾರ್ಥಿಗಳು: 68393
ನಗರ ವಿದ್ಯಾರ್ಥಿಗಳು: 55050
ಸಚಿವರ ಮಾತು
ಫಲಿತಾಂಶದ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ 'ಈ ಬಾರಿ ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಯಾವುದೇ ಅಕ್ರಮಗಳಿಗೂ ಅವಕಾಶ ಇರಲಿಲ್ಲ. ಓದಿದರೆ ಮಾತ್ರ ಪರೀಕ್ಷೆಯಲ್ಲಿ ಪಾಸಾಗಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಮನವರಿಕೆ ಮಾಡಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ' ಎಂದು ಹೇಳಿದ್ದಾರೆ.
ಫಲಿತಾಂಶದ ಬಗ್ಗೆ ಆಕ್ಷೇಪಣೆಗಳಿದ್ದರೆ ನಕಲು ಪ್ರತಿ ಮತ್ತು ಮರು ಎಣಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಉತ್ತರ ಪತ್ರಿಕೆಯ ನಕಲು ಪ್ರತಿ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: 24-07-2017
ನಕಲು ಪ್ರತಿಗೆ ಒಂದು ವಿಷಯಕ್ಕೆ ರೂ.300/- ಮತ್ತು ಮರು ಎಣಿಕೆಗೆ ರೂ.150/- ಶುಲ್ಕ ನಿಗದಿ ಪಡಿಸಲಾಗಿದೆ.
ಮರು ಮೌಲ್ಯಮಾಪನ
ಮರು ಮೌಲ್ಯಮಾಪನಕ್ಕೆ ಫಲಿತಾಂಶ ಪ್ರಕಟವಾದ 7 ದಿನದೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ವಿಷಯಕ್ಕೆ ರೂ.700/- ನಿಗದಿ ಮಾಡಲಾಗಿದೆ. ಮೊಬೈಲ್ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಪೂರಕ ಪರೀಕ್ಷೆಯಲ್ಲೂ ಫೇಲಾದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಪುನಃ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿದಲ್ಲಿ ಹತ್ತನೇ ತರಗತಿಗೆ ಮರು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪಿಯುಸಿ ಪ್ರವೇಶ
ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾದ ಏಳು ದಿನದೊಳಗೆ ಯಾವುದೇ ದಂಡ ಶುಲ್ಕ ಇಲ್ಲದೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿ ತರಗತಿಗಳಿಗೆ ಪ್ರವೇಶ ಪಡೆಯಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.