ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಇನ್ನೇನು ಪ್ರಾರಂಭವಾಗಲಿವೆ. ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಲೆಂದು ಶಿಕ್ಷಕರು ಮತ್ತು ಪೋಷಕರು ಇನ್ನಿಲ್ಲದಂತೆ ಶ್ರಮ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರಿನ ಸರ್ಕಾರಿ ಶಾಲೆಯೊಂದು ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಲು ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಆಕಾಶದಲ್ಲಿ ಹಾರಾಡಬಹುದು, ಅರೇ ಇದೇನಪ್ಪ ಅಂತ ಯೋಚಿಸ್ತಿದ್ದೀರಾ, ಖಂಡಿತವಾಗಿ ಇದು ನಿಜ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗಾಗಿ ಈ ವೈಮಾನಿಕ ಭಾಗ್ಯ ದೊರೆಯಲಿದೆ.
ಮಂಗಳೂರಿನಿಂದ ಬೆಂಗಳೂರಿಗೆ ವಿಮಾನ ಯಾನ ಮಾಡುವ ಅವಕಾಶವನ್ನು ಎಸ್ ಎಸ್ ಎಲ್ ಸಿ ಟಾಪರ್ಸ್ಗೆ ಮಂಗಳೂರಿನ ಸರ್ಕಾರಿ ಶಾಲೆಯಲ್ಲಿ ನೀಡಲಾಗುತ್ತಿದೆ. ಮಂಗಳೂರಿನ ಕಾರ್ ಸ್ಟ್ರೀಟ್ ಸರ್ಕಾರಿ ಶಾಲೆಯ ಮುಖ್ಯೋಪಧ್ಯಾಯರು ಈ ವಿಚಾರವನ್ನು ಹೊರಹಾಕಿದ್ದಾರೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಮಾತಾನಾಡಿದಾಗ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾಗಿ ಖುಷಿಯಿಂದ ಸಂಭ್ರಮಿಸಿದ್ದಾರೆ. ಅಲ್ಲದೇ ಶೇ.90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಉತ್ಸಾಹ ತೋರಿದ್ದಾರೆ.
ವಿದ್ಯಾರ್ಥಿಗಳನ್ನು ಹೆಚ್ಚು ಓದುವಂತೆ ಪ್ರೆರೇಪಿಸಲು ಈ ರೀತಿಯ ಯೋಜನೆ ರೂಪಿಸಲಾಗಿದೆ. ವಿಮಾನ ಹಾರಾಟಕ್ಕೆ ತಗುಲುವ ವೆಚ್ಚವನ್ನು ಶಾಲೆಯೇ ಭರಿಸಲಿದೆ.ಮೂರು ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ್ದೇ ಆದಲ್ಲಿ ಬೆಂಗಳೂರಿಗೆ ವಿಮಾನದ ಮೂಲಕ ವಿದ್ಯಾರ್ಥಿಗಳು ಹಾರಾಡಲಿದ್ದಾರೆ.
ಹಣದ ಕೊರತೆ
ವಿದ್ಯಾರ್ಥಿಗಳಿಗೆ ವಿಮಾನ ಯಾನ ಮಾಡಿಸಲು ಶಾಲೆಯಲ್ಲಿ ಸಾಕಷ್ಟು ಹಣವಿಲ್ಲವಾದರೂ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ. ಡೋನೇಷನ್ ಸಂಗ್ರಹಿಸಿ ಮಕ್ಕಳಿಗೆ ವಿಮಾನ ಯಾನದ ಅವಕಾಶ ಕಲ್ಪಿಸಲಗುವುದು ಎಂದು ಮುಖ್ಯೋಪಧ್ಯಾಯರು ತಿಳಿಸಿದ್ದಾರೆ.
ಕಳೆದ ವರ್ಷ ಇದೇ ರೀತಿಯ ಯೋಜನೆ ರೂಪಿಸಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪ್ರವಾಸ ಕೈಗೊಳ್ಳಲಾಗಿತ್ತು. ಆ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಲಾಗಿತ್ತು. ಈ ಬಾರಿ ಕೂಡ ಅಂತಹದ್ದೇ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಈ ಶಾಲೆಯಿಂದ ಒಟ್ಟು 26 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದು ಬಹುತೇಕ ವಿದ್ಯಾರ್ಥಿಗಳು ಬಡತನದ ಹಿನ್ನೆಲೆಯುಳ್ಳವರಾಗಿದ್ದಾರೆ. ಕೂಲಿಕಾರ್ಮಿಕರ ಮಕ್ಕಳೆ ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಅವರಲ್ಲಿ ಓದಿನ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಿ ಹೆಚ್ಚು ಅಂಕಗಳಿಸುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ.
ವಿದ್ಯಾರ್ಥಿಗಳಿಗಾಗಿ ಸೋಲಾರ್ ದೀಪ
ವಿದ್ಯಾರ್ಥಿಗಳ ಮನೆಯಲ್ಲಿ ಅಭ್ಯಾಸ ಮಾಡಲು ಸೂಕ್ತ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ್ದ ಮುಖ್ಯೋಪಧ್ಯಾಯರು ಅವರಿಗೆ ಕಲಿಯಲು ಅನುಕೂಲವಾಗುವಂತೆ ಸೋಲಾರ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಇದರಿಂದ ವಿದ್ಯಾರ್ಥಿಗಳು ರಾತ್ರಿಯ ವೇಳೆಯಲ್ಲಿ ಕೂಡ ಅಭ್ಯಾಸ ಮಾಡುವಂತಾಯಿತು. ಒಟ್ಟಿನಲ್ಲಿ ಮಂಗಳೂರಿನ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಏಳಿಗೆಗಾಗಿ ಅಲ್ಲಿನ ಸಿಬ್ಬಂದಿ ವರ್ಗ ಸಾಕಷ್ಟು ಶ್ರಮ ವಹಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.
ಇದನ್ನು ಗಮನಿಸಿ:ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳಾಪಟ್ಟಿ