ರಾಮನಗರ ಜಿಲ್ಲೆಯ 4 ತಾಲ್ಲೂಕುಗಳ 5 ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 17 ಮುಖ್ಯ ಅಂಗನವಾಡಿ ಕಾರ್ಯಕರ್ತೆ, 27 ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು 109 ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಒಟ್ಟು 153 ಹುದ್ದೆಗಳನ್ನು ನೇಮಕ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ಹುದ್ದೆಗಳು ರಾಮನಗರ ಜಿಲ್ಲೆಯಲ್ಲಿ ಖಾಲಿ ಇದ್ದು ಅಲ್ಲಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಡಿಸೆಂಬರ್ 24,2020ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕನಿಷ್ಠ 4ನೇ ತರಗತಿ ಮತ್ತು ಗರಿಷ್ಟ 9ನೇ ತರಗತಿ ತೇರ್ಗಡೆಯಾಗಿರಬೇಕು.
ವಯೋಮಿತಿ:
ಅಭ್ಯರ್ಥಿಯು ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆಯ ಆದ್ಯತೆ:
ಈ ಕೆಳಕಂಡಂತೆ ಆದ್ಯತೆ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆ ಹೊಂದಿದ್ದು ವಯೋಮಿತಿ ಹಾಗೂ ಸ್ಥಳೀಯರಾಗಿರುವುದು ಕಡ್ಡಾಯ.
ಆಸಿಡ್ ದಾಳಿಗೊಳಗಾದವರ ಆಯ್ಕೆ:
ಆಸಿಡ್ ದಾಳಿಗೆ ಒಳಗಾದ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಲ್ಲಿ, ಇತರ ಎಲ್ಲಾ ಸ್ವೀಕೃತ ಅರ್ಜಿಗಳನ್ನು ಪರಿಗಣಿಸದೆ ಮೊದಲ ಅದ್ಯತೆ ಮೇರೆಗೆ ನೇರವಾಗಿ ಅವರನ್ನೇ ಆಯ್ಕೆ ಮಾಡತಕ್ಕದ್ದು.
ಇಲಾಖೆಯ ಸಂಸ್ಥೆಗಳ ನಿವಾಸಿಗಳ ಆದ್ಯತೆ:
ಬಾಲ ನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ / ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದ ಹಾಲಿ /ಮಾಜಿ ನಿವಾಸಿಗಳಿಗೆ ಎರಡನೇ ಆದ್ಯತೆ.
ವಿಧವೆಯರ ಆದ್ಯತೆ:
ವಿಧವೆಯರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಇತರೆ ವಿಧವೆಯರನ್ನು ಪರಿಗಣಿಸಲಾಗುವುದು. ಅರ್ಜಿ ಸಲ್ಲಿಸಿದ ನಂತರ ವಿಧವೆಯರಾದಲ್ಲಿ ಪರಿಗಣಿಸಲಾಗುವುದಿಲ್ಲ. ವಿಧವೆಯರು ತಾವು ಎಲ್ಲಿ ವಾಸವಾಗಿರುವುದಾಗಿ ವಾಸಸ್ಥಳ ಧೃಡೀಕರಣ ಸಲ್ಲಿಸುತ್ತಾರೋ ಆ ಸ್ಥಳವನ್ನೇ ಅವರ ವಾಸಸ್ಥಳ ಎಂದು ಪರಿಗಣಿಸಲಾಗುವುದು. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ವಿಧವೆಯರು ಅರ್ಜಿ ಸಲ್ಲಿಸಿದ್ದಲ್ಲಿ ಗರಿಷ್ಟ ಅಂಕ ಪಡೆದವರನ್ನು ಆಯ್ಕೆ ಮಾಡಲಾಗುವುದು.
ಅಂಗವಿಕಲ ಅಭ್ಯರ್ಥಿಗಳಿಗೆ ಆದ್ಯತೆ:
ಅಂಗನವಾಡಿ ಕಾರ್ಯಕರ್ತೆಯು 3 ರಿಂದ 6 ವರ್ಷದ ಮಕ್ಕಳಿಗೆ ಆಟ ಮತ್ತು ಅಭಿನಯ ಗೀತೆಗಳ ಮೂಲಕ ಶಾಲಾ ಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದ್ದು, ಚಟುವಟಿಕೆ ವೇಳೆಯಲ್ಲಿ ಮಕ್ಕಳನ್ನು ಹಿಡಿದೆತ್ತಿ ನಿಲ್ಲಿಸಲು ಹಾಗೂ ಅಭಿನಯ ಮಾಡಿ ತೋರಿಸಬೇಕಾಗುತ್ತದೆ. ವೃತ್ತ ಸಭೆ, ತಾಯಂದಿರ ಸಭೆ ಮತ್ತು ಮನೆ ಭೇಟಿ ನಿರ್ವಹಿಸಬೇಕಾಗುತ್ತದೆ. ಆದ ಕಾರಣ ಕಿವುಡರು, ಮೂಕರು, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು, ಕಾರ್ಯಕರ್ತೆ ಹುದ್ದೆಗೆ ಅರ್ಹರಿರುವುದಿಲ್ಲ. ಇತರೆ ದೈಹಿಕ ಅಂಗವಿಕಲ್ ಶೇ.60% ಮೀರದಂತೆ ಇರುವವರು ಮತ್ತು ಶಾಲಾಪೂರ್ವ ಶಿಕ್ಷಣ ನಡೆಸಲು ಸಮರ್ಥವಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸುವುದು. ಈ ಕುರಿತು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಅಂಗವಿಕಲರು ಪ್ರಸ್ತುತ ತಾವು ಎಲ್ಲಿ ವಾಸವಿರುವುದಾಗಿ ವಾಸಸ್ಥಳ ಧೃಡೀಕರಣ ಸಲ್ಲಿಸುತ್ತಾರೋ ಆ ಸ್ಥಳವನ್ನೇ ಅವರ ವಾಸಸ್ಥಳ ಎಂದು ಪರಿಗಣಿಸಲಾಗುವುದು. ಅಂಗವಿಕಲ ಅಭ್ಯರ್ಥಿಗಳ ಅಂಗವಿಕಲತೆ ಪ್ರಮಾಣದ ಬಗ್ಗೆ ಸಂಶಯ ಉಂಟಾದಲ್ಲಿ ಪುನರ್ ಪರಿಶೀಲಿಸುವ ಅಧಿಕಾರವನ್ನು ಆಯ್ಕೆ ಸಮಿತಿ ಹೊಂದಿರುತ್ತದೆ. ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅಂಗವಿಕಲರು ಅರ್ಜಿ ಸಲ್ಲಿಸಿದ್ದಲ್ಲಿ ಗರಿಷ್ಟ ಅಂಕ ಪಡೆದವರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ:
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅಧಿಕೃತ ವೆಬ್ಸೈಟ್ https://anganwadirecruit.kar.nic.in/ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಂಡು ನಂತರ ಹುದ್ದೆಗಳಿಗೆ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಡಿಸೆಂಬರ್ 24,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹಾಗೇನಾದರೂ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











