ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಶಾಲೆ ತೊರೆದ ಬಾಲಕಿಯರ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರದ 'ಹದಿಹರೆಯದ ಹೆಣ್ಣು ಮಕ್ಕಳ ಯೋಜನೆ-ಎಸ್ಎಜಿ' ಗೆ ರಾಜ್ಯದ 12 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ.
ಶಾಲೆ ತೊರೆದ, 11-14 ವರ್ಷದ ಬಾಲಕಿಯರ ಅಭಿವೃದ್ಧಿ ಮತ್ತು ಸಬಲೀಕರಣ ಯೋಜನೆಗೆ ದೇಶದ 30 ರಾಜ್ಯಗಳ ಒಟ್ಟು 303 ಜಿಲ್ಲೆಗಳು ಆಯ್ಕೆಯಾಗಿವೆ. 2010ರಿಂದ ಈವರೆಗೆ ದೇಶದ ಹಲವು ರಾಜ್ಯಗಳ 205 ಜಿಲ್ಲೆಗಳಲ್ಲಿ ಯೋಜನೆಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿತ್ತು. ಈಗ ಮತ್ತಷ್ಟು ಜಿಲ್ಲೆಗಳಿಗೆ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಯೋಜನೆಗೆ ಆಯ್ಕೆಯಾಗಿರುವ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ, ಫಲಾನುಭವಿಗಳನ್ನು ಗುರುತಿಸಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸೂಚನೆ ನೀಡಿದೆ.
ಶಾಲೆ ತೊರೆದ ಬಾಲಕಿಯರಲ್ಲಿ ವೈಯಕ್ತಿಕ ಸ್ವಚ್ಛತೆ ಮತ್ತು ಸ್ಯಾನಿಟರಿ ಪ್ಯಾಡ್ ನ ಬಳಕೆ ಬಗ್ಗೆ ಅರಿವು ಮೂಡಿಸುವುದು, ಅವರಲ್ಲಿನ ಅಪೌಷ್ಟಿಕತೆ ನಿವಾರಣೆ ಈ ಯೋಜನೆಯ ಮೂಲ ಉದ್ದೇಶವಾಗಿದೆ. ಇದರ ಜತೆಯಲ್ಲೇ ಅವರಿಗೆ ಔಪಚಾರಿಕ ಅಥವಾ ಅನೌಪಚಾರಿಕ ಶಿಕ್ಷಣ ನೀಡುವುದು ಈ ಯೋಜನೆಯ ಮತ್ತೊಂದು ಗುರಿ.
ಆಯ್ಕೆಯಾದ ಜಿಲ್ಲೆಗಳು
ಕೊಪ್ಪಳ, ಯಾದಗಿರಿ, ಬಾಗಲಕೋಟೆ, ರಾಯಚೂರು, ಕಲಬುರ್ಗಿ, ಬೀದರ್, ಹಾವೇರಿ, ಚಿಕ್ಕಬಳ್ಳಾಪುರ, ಗದಗ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ
ಆಯ್ಕೆಯಾಗಿರುವ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆ ನಡೆಸಬೇಕಾಗುತ್ತದೆ. ಸಮೀಕ್ಷೆ ನಡೆಸಲು ಅಗತ್ಯವಿರುವ ವಿದ್ಯಾರ್ಹತೆಯನ್ನು ಕಾರ್ಯಕರ್ತೆಯರು ಹೊಂದಿಲ್ಲದಿದ್ದರೆ, ಸರ್ಕಾರವೇ ಪ್ರತಿನಿಧಿಗಳನ್ನು ನೇಮಿಸಿ ಸಮೀಕ್ಷೆ ನಡೆಸಬೇಕಾಗುತ್ತದೆ.
ಇದು ಒಂದು ಬಾರಿ ಮಾತ್ರ ನಡೆಯುವ ಸಮೀಕ್ಷೆಯಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರದ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಪ್ರತಿ ಮನೆಗೂ ತೆರಳಿ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸಲಿದ್ದಾರೆ.
ಯೋಜನೆ ಅಡಿ ಆಯ್ಕೆಯಾಗಿರುವ ಜಿಲ್ಲೆಗಳಲ್ಲಿ ಶಾಲೆ ತೊರೆದಿರುವ, ಅದೇ ಜಿಲ್ಲೆಗಳಲ್ಲಿ ಆರು ತಿಂಗಳಿಂದ ನೆಲೆಸಿರುವ ಮತ್ತು ಮುಂದೆಯೂ ನೆಲೆಸಲಿರುವ ಬಾಲಕಿಯರ ಮಾಹಿತಿಯನ್ನಷ್ಟೇ ಸಂಗ್ರಹಿಸಲಾಗುತ್ತದೆ
ಬಾಲಕಿಯರ ವಯಸ್ಸು, ಆಧಾರ್ ವಿವರ, ಶೈಕ್ಷಣಿಕ ವಿವರ, ಶಾಲೆ ತೊರೆಯಲು ಕಾರಣಗಳನ್ನು ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುತ್ತದೆ, ಅಂಗನವಾಡಿ ಕಾರ್ಯಕರ್ತೆಯರು ಕಲೆಹಾಕಿದ ಮಾಹಿತಿಯನ್ನು ಪರಿಶೀಲಿಸಿ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ


Click it and Unblock the Notifications











