ಹೊಸದಾಗಿ ಆಯುಷ್ ವೈದ್ಯರ ನೇಮಕಾತಿಯಿಂದ ಕಾರ್ಯನಿರ್ವಹಿಸುತ್ತಿರುವ ಹಳೆಯ ವೈದ್ಯರುಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ರಾಜ್ಯದ ಪ್ರಾಥಮಿಕ , ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ಹೊಸದಾಗಿ 565 ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ಸರ್ಕಾರ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ಸೇವೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ನೇಮಕಾತಿ ವಿಧಾನದಲ್ಲಿ ರೋಸ್ಟರ್ ಪ್ರಕಾರ ಮೀಸಲು ಬದಲಾದರೆ ಅಥವಾ ಆಯುಷ್ ಕೋರ್ಸ್ ಮುಗಿಸಿರುವ ಹೆಚ್ಚು ಅಂಕಗಳನ್ನು ಪಡೆದಿರುವವರು ಮೆರಿಟ್ ಆಧಾರದಲ್ಲಿ ನೇಮಕಗೊಂಡರೆ ಈಗ ಸೇವೆಯಲ್ಲಿರುವವರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ.
ಇನ್ನು ರಾಜ್ಯ ಸರ್ಕಾರದ ಕೃಪಾಂಕ ನೀತಿಯು ಕೆಲಸಕ್ಕೆ ಮಾರಕವಾಗಿದ್ದು, ಇದರಿಂದಲೂ ಕೆಲ ವೈದ್ಯರುಗಳು ಕೆಲಸ ಕಳೆದುಕೊಳ್ಳವ ಪರಿಸ್ಥಿತಿ ಬಂದಿದೆ.
ನೇಮಕ ಪ್ರಕ್ರಿಯೆ ಅಧಿಸೂಚನೆ
ರಾಷ್ಟ್ರೀಯ ಆರೋಗ್ಯ ಅಭಿಯಾದನಡಿ ಜಿಲ್ಲಾವಾರು ಖಾಲಿಯಿರುವ ಆಯುಷ್ ವೈದ್ಯರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಆಗಸ್ಟ್ 03 ರಂದು ಆಯಾ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಸೊಸೈಟಿ ಅಧಿಸೂಚನೆ ಹೊರಡಿಸಲಿದೆ.
ಆಗಸ್ಟ್ 10 ರಂದು ಅಭ್ಯರ್ಥಿಗಳ ನೇರ ಸಂದರ್ಶನ ನಡೆಯಲಿದೆ.
ಆಗಸ್ಟ್ 17 ರಂದು ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಆಗಸ್ಟ್ 21 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಆಗಸ್ಟ್ 31 ರಂದು ಅಂತಿಮ ಆಯ್ಕೆಪಟ್ಟಿ ಪ್ರಕಟ
ಸೆಪ್ಟೆಂಬರ್ 02 ರಂದು ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ನೇಮಕ ಆದೇಶ ನೀಡಲಾಗುವುದು.
ಆಯುಷ್ ವೈದ್ಯರುಗಳ ನೇಮಕಾತಿ ವಿವಾದ ನಿನ್ನೆ ಮೊನ್ನೆಯದಲ್ಲ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭವಾದಾಗಿನಿಂದಲು ಈ ಸಮಸ್ಯೆ ಇದ್ದೇ ಇದೆ. 2007ರಲ್ಲಿ 650 ಆಯುಷ್ ವೈದ್ಯರುಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಯಿತು. ಗುತ್ತಿಗೆ ಮುಗಿದ ನಂತರ ನವೀಕರಿಸಿ ನೇಮಕ ಮಾಡುತ್ತ ಬರಲಾಗಿದೆ. ಅಲ್ಲದೇ ವೇತನ ವಿಚಾರವಾಗಿಯು ನೇಮಕಾತಿಗೆ ಕೆಎಟಿ ತಡೆಯಾಜ್ಞೆ ನೀಡಿತ್ತು.