ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
"ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಪಡೆದ ಎಲ್ಲ ಮಕ್ಕಳಿಗೂ ಶುಭ ಹಾರೈಸುತ್ತೇನೆ. ತೇರ್ಗಡೆಯಾಗಿರುವ ಮಕ್ಕಳಿಗೆ ಅಭಿನಂದನೆಗಳು. ಸ್ವಲ್ಪ ಹಿನ್ನಡೆಯಾಗಿದ್ದಲ್ಲಿ ಧೈರ್ಯ ವಿಶ್ವಾಸ ಕಳೆದುಕೊಳ್ಳದೆ, ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ,ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ತಂದೆ ತಾಯಿಗಳಿಗೆ ಹೆಮ್ಮೆ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ" ಎಂದು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಇಂದು ದ್ವಿತೀಯ ಪಿಯುಸಿ ಫಲಿತಾಂಶಗಳನ್ನು ಪಡೆದ ಎಲ್ಲ ಮಕ್ಕಳಿಗೂ ಶುಭ ಹಾರೈಸುತ್ತೇನೆ. ತೇರ್ಗಡೆಯಾಗಿರುವ ಮಕ್ಕಳಿಗೆ ಅಭಿನಂದನೆಗಳು. ಸ್ವಲ್ಪ ಹಿನ್ನಡೆಯಾಗಿದ್ದಲ್ಲಿ ಧೈರ್ಯ ವಿಶ್ವಾಸ ಕಳೆದುಕೊಳ್ಳದೆ, ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ,ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ತಂದೆ ತಾಯಿಗಳಿಗೆ ಹೆಮ್ಮೆ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ.
— B.S. Yediyurappa (@BSYBJP) July 14, 2020
ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಶೇಕಡಾ 69.20ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ವರ್ಷ ಒಟ್ಟು 5,56,267 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 3,84,947 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ.0.7ರಷ್ಟು ಫಲಿತಾಂಶ ಹೆಚ್ಚಾಗಿದ್ದು ಕಳೆದ ವರ್ಷ ಶೇ.61.73ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.55.29ರಷ್ಟು ಫಲಿತಾಂಶ ಗಳಿಸಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ ಮತ್ತು ಹುಡುಗರು ಶೇ.54.77ರಷ್ಟು ಫಲಿತಾಂಶವನ್ನ ಪಡೆದಿದ್ದಾರೆ.
ಶೇ.90.71 ಫಲಿತಾಂಶ ಪಡೆಯುವುದರೊಂದಿಗೆ ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳು ಮೊದಲ ಸ್ಥಾನದಲ್ಲಿ, ಶೇ. 81.53 ಫಲಿತಾಂಶದೊಂದಿಗೆ ಕೊಡಗು ಜಿಲ್ಲೆ ದ್ವಿತೀಯ ಸ್ಥಾನದಲ್ಲಿ 56.08 ಶೇಕಡಾದೊಂದಿಗೆ ಚಿತ್ರದುರ್ಗ, ರಾಯಚೂರು ಶೇ.56.23 ಶೇಕಡಾದೊಂದಿಗೆ ಮತ್ತು ವಿಜಯಪುರ 54.22 ಶೇಕಡಾದೊಂದಿಗೆ ಕೊನೆಯ ಮೂರು ಸ್ಥಾನಗಳಿವೆ.