ರಾಜ್ಯದ ವಿವಿಗಳಲ್ಲಿ ನೇಮಕಾತಿಯ ಸಂಬಂಧ ವಿವಾದಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗೆ ರಾಜ್ಯ ಸರ್ಕಾರ ವಿವಿಗಳಲ್ಲಿ ನೇಮಕಾತಿಗೆ ತಡೆ ನೀಡಿತ್ತು. ಈಗ ದಾವಣಗೆರೆ ವಿವಿಯಲ್ಲಿ ನೇಮಕಾತಿಗೆ ವೇದಿಕೆ ಸಜ್ಜಾಗಿದ್ದು ವಿವಾದ ಸೃಷ್ಟಿಯಾಗಿದೆ.
ನಿವೃತ್ತಿಯ ಅಂಚಿನಲ್ಲಿರುವ ದಾವಣಗೆರೆಯ ಉಪಕುಲಪತಿ ಡಾ.ಬಿ.ಬಿ. ಕಲಿವಾಳ ಅವರು ನಿಯಮ ಮೀರಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ
'ಯಾವುದೇ ವಿಶ್ವವಿದ್ಯಾಲಯದಲ್ಲಿ ನಿವೃತ್ತಿಯ ಅಂಚಿನಲ್ಲಿರುವ ಉಪ ಕುಲಪತಿಗಳು ಅಧಿಕಾರಾವಧಿ ಮುಗಿಯಲು 6 ತಿಂಗಳು ಬಾಕಿ ಇರುವಾಗ ಯಾವುದೇ ನೇಮಕಾತಿ ಮಾಡಬಾರದು' ಎಂದು ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ಆದೇಶ ನೀಡಿದ್ದರು.

ಇದೇ ವರ್ಷ ಡಿಸೆಂಬರ್ 31ರಂದು ಕಲಿವಾಳ ನಿವೃತ್ತಿಯಾಗಲಿರುವುದರಿಂದ ರಾಜ್ಯಪಾಲರ ಆದೇಶ ಅವರಿಗೂ ಅನ್ವಯವಾಗುತ್ತದೆ. ಆದರೆ, ರಾಜ್ಯಪಾಲರ ಈ ಆದೇಶವನ್ನು ಗಾಳಿಗೆ ತೂರಿರುವ ಅವರು, ತಮ್ಮಿಚ್ಛೆಯಂತೆ ನೇಮಕಾತಿಗಳನ್ನು ನಡೆಸುತ್ತಿದ್ದು, 111 ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿಗೆ ಚಾಲನೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಸಿಬ್ಬಂದಿ ಕೊರೆತೆಯ ಕಾರಣ ನೀಡಿ 18 ಬೋಧಕ, 7 ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಒಪ್ಪಿಗೆ ಕೇಳಿ ಕಲಿವಾಳ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಇದನ್ನು ವಿಶೇಷ ಮನವಿ ಎಂದು ಪರಿಗಣಿಸಿದ ರಾಜ್ಯಪಾಲರು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮನವಿಗೆ ಒಪ್ಪಿಗೆ ನೀಡಿದ್ದರು. ಇದನ್ನೇ ಉಪಯೋಗಿಸಿಕೊಂಡು, ಈ ಸಿಬ್ಬಂದಿಗಳ ಜತೆಗೆ, 10 ಪ್ರಾಧ್ಯಾಪಕರು, 30 ಸಹ ಪ್ರಾಧ್ಯಾಪಕರು, 71 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಕುಲಪತಿಗಳ ಸಮರ್ಥನೆ
ವಿಶ್ವವಿದ್ಯಾಲಯದಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಮೂರು ವರ್ಷಗಳಿಂದ ತಯಾರಿ ಮಾಡಲಾಗುತ್ತಿದೆ. ಶೇ 80ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಈಗ ಅಂತಿಮ ಪ್ರಕ್ರಿಯೆ ಬಾಕಿ ಇದೆ' ಎಂದು ಕುಲಪತಿ ಡಾ. ಕಲಿವಾಳ ಹೇಳಿದ್ದಾರೆ. ಅಲ್ಲದೆ ನಿವೃತ್ತಿಯ ಆರು ತಿಂಗಳ ಮುಂಚಿತವಾಗಿ ಹೊಸ ಯೋಜನೆ ಕೈಗೆತ್ತಿಕೊಳ್ಳಬಾರದು ಎಂದಷ್ಟೇ ರಾಜ್ಯಪಾಲರು ಹೇಳಿದ್ದಾರೆ. ನೇಮಕಾತಿ ಮಾಡಬಾರದು ಎಂದು ಹೇಳಿಲ್ಲ. ಅಲ್ಲದೆ, ಖಾಲಿ ಹುದ್ದೆಗಳಿಗೆ ನೇಮಕಾತಿ ಪೂರ್ಣಗೊಳಿಸಿ ಎಂದು ಉನ್ನತ ಶಿಕ್ಷಣ ಸಚಿವರೇ ಸೂಚಿಸಿದ್ದಾರೆ' ಎಂದು ಅವರು ಹೇಳಿದ್ದಾರೆ.


Click it and Unblock the Notifications











