ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಮಯ ಬದಲಾವಣೆ ಕುರಿತು ನೂತನ ಸುತ್ತೋಲೆ ಗುರುವಾರ ಪ್ರಕಟಗೊಂಡಿದೆ.
ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿದ್ದ ಕಾಲೇಜುಗಳನ್ನು ಬೆಳಗ್ಗೆ 8 ಗಂಟೆಗೆ ಪ್ರಾರಂಭಸಿಲು ಸೂಚಿಸಲಾಗಿದೆ. ಅಲ್ಲದೇ ಕಾಲೇಜುಗಳಲ್ಲಿ ಗ್ರಂಥಾಲಯವನ್ನು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ತೆರೆದಿರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಆಡಳಿತಾತ್ಮಕ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಕಮಿಷನರ್ ಎಂ.ಎನ್. ಅಜಯ್ನಾಗಭೂಷಣ್ ಹೇಳಿದ್ದಾರೆ.
ಈ ಹಿಂದಿನ ವೇಳಾಪಟ್ಟಿಯಂತೆ ಕಾಲೇಜುಗಳು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯುತ್ತಿದ್ದವು, ಆದರ ಈಗ ಬೆಳಗ್ಗೆ 8 ಕ್ಕೆ ಆರಂಭವಾಗಿ ಮಧ್ಯಾಹ್ನ 2.30ಕ್ಕೆ ಮುಕ್ತಾಯಗೊಳ್ಳಲಿವೆ. ಇದರಿಂದ ವಿದ್ಯಾರ್ಥಿಗಳಿಗೆ ಮಿಕ್ಕ ಸಮಯವನ್ನು ಪಾರ್ಟ್ ಟೈಂ ಕೆಲಸಗಳಲ್ಲಿ,ಕಂಪ್ಯೂಟರ್ ಕೋರ್ಸ್, ಭಾಷಾ ಕಲಿಕೆ, ಕೌಶಲ ತರಬೇತಿ ಸೇರಿದಂತೆ ಇತರೆ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ, ಅಲ್ಲದೇ ಮನೆಯಲ್ಲೇ ಕೂತು ಓದುವವರಿಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿರುವ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 94 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಕೆಲವು ಕೋರ್ಸ್ಗಳಿಗೆ ಬೆಳಿಗ್ಗೆ, ಇನ್ನೂ ಕೆಲವು ಕೋರ್ಸ್ಗಳಿಗೆ ಮಧ್ಯಾಹ್ನ ತರಗತಿ ನಡೆಸಲಾಗುತ್ತದೆ. ಅಂತಹ ಕಾಲೇಜುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಮಯ ಬದಲಾವಣೆಗೆ ವಿರೋಧ
ಬೆಳಗ್ಗೆ 8 ಗಂಟೆಗೆ ತರಗತಿಗಳನ್ನು ಪ್ರಾರಂಭಿಸಬೇಕೆಂಬ ನಿರ್ಧಾರಕ್ಕೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಇದು ಹೆಚ್ಚಿನ ಪರಿಣಾಮ ಬೀರಲಿದೆ.
ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಿಂದ ಬರುತ್ತಿದ್ದು ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದಕಾಲೇಜು ಹಾಜರಾತಿ ಕಡಿಮೆಯಾಗಲಿದೆ. ಬೋಧಕರ ಜೊತೆ ಚರ್ಚಿಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸುತ್ತೋಲೆಯನ್ನು ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುವುದಾಗಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಪ್ರೊ.ಪ್ರಕಾಶ್ ಹೇಳಿದ್ದಾರೆ.