ಪಂಡಿತ್ ಜವಾಹರ ಲಾಲ್ ನೆಹರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ನಂತರ ಈ ದೇಶದ ಚುಕ್ಕಾಣಿ ಹಿಡಿದ ನೆಹರುರವರು ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.
ಮಕ್ಕಳ ದಿನಾಚರಣೆ: ಇತಿಹಾಸ ಮತ್ತು ಆಚರಣೆ
ನವೆಂಬರ್ 14, 1889ರಂದು ಅಲಹಾಬಾದ್ನಲ್ಲಿ ಜನಿಸಿದ ನೆಹರು ತಮ್ಮ ಆರಂಭಿಕ ಶಿಕ್ಷಣವನ್ನು ಮನೆಯಲ್ಲೇ ಖಾಸಗಿ ಶಿಕ್ಷಕರಿಂದ ಪಡೆದರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಅವರು ಇಂಗ್ಲೆಂಡಿಗೆ ತೆರಳಿದರು. ಎರಡು ವರ್ಷಗಳ ಬಳಿಕ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಸೇರಿದರು. ಅಲ್ಲಿ ಅವರು ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. ಇದರ ಜೊತೆಯಲ್ಲಿ ನೆಹರುರವರು ರಾಜಕೀಯ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯವನ್ನು ಕೂಡ ಅಧ್ಯಯನ ಮಾಡಿದರು.
1912ರಲ್ಲಿ ಭಾರತಕ್ಕೆ ಮರಳಿದ ಅವರು ಅಲಹಾಬಾದ್ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಅಭ್ಯಾಸ ಪ್ರಾರಂಭಿಸಿದರು. ಆನಂತರ ನೇರವಾಗಿ ರಾಜಕೀಯಕ್ಕೆ ಧುಮುಕಿದರು.
ಬರ್ನಾರ್ಡ್ ಷಾ, ಎಚ್.ಜಿ.ವೆಲ್ಸ್, ಜೆ.ಎಂ. ಕೀನ್ಸ್, ಬರ್ಟ್ರಾಂಡ್ ರಸ್ಸೆಲ್, ಡಿಕಿನ್ಸನ್ ಮತ್ತು ಟೌನ್ಸೆಂಡ್ ಅವರ ಬರಹಗಳು ನೆಹರುರವರ ಮೇಲೆ ರಾಜಕೀಯ ಮತ್ತು ಆರ್ಥಿಕ ಚಿಂತನೆಯ ಪ್ರಭಾವ ಬೀರಿದ್ದವು.
ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು.
ನೆಹರು ಪುಸ್ತಕಗಳು
ಪುಸ್ತಕಗಳ ಬಗ್ಗೆ ಅಪಾರ ಒಲವಿದ್ದ ನೆಹರು ರವರು ಅನೇಕ ಪುಸ್ತಕಗಳನ್ನು ಬರೆದಿದ್ದರೆ. ಡಿಸ್ಕವರಿ ಆಫ್ ಇಂಡಿಯಾ, ಗ್ಲಿಮ್ಪ್ಸ್ ಆಫ್ ವರ್ಲ್ಡ್ ಹಿಸ್ಟರಿ, ಟುವಾರ್ಡ್ ಫ್ರೀಡಂ ಜಗತ್ಪ್ರಸಿದ್ಧಿಯಾಗಿರುವ ಅವರ ಮೂರು ಪ್ರಮುಖ ಪುಸ್ತಕಗಳು.
ನೆಹರು ಅವರು ತಮ್ಮ ಮಗಳು ಇಂದಿರಾ ಗಾಂಧಿಯವರಿಗೆ ಬರೆದ ಪತ್ರಗಳನ್ನು ಸಂಗ್ರಹಿಸಿ 'ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್' ಎಂದು ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದೆ. ಒಟ್ಟು 30 ಪತ್ರಗಳನ್ನು ಈ ಪುಸ್ತಕ ಒಳಗೊಂಡಿದೆ. ಇನ್ನೊಂದು ಪ್ರಮುಖ ವಿಚಾರವೆಂದರೆ ನೆಹರು ಇಂದಿರಾಗೆ ಬರೆದ ಪತ್ರಗಳಲ್ಲಿ ಭಾರತದ ಇತಿಹಾಸ ಮತ್ತು ನಾಗರಿಕತೆಯ ವಿಷಯಗಳ ಬಗ್ಗೆ ಬರೆಯುತ್ತಿದ್ದರು.
ಅನೇಕ ಜನಪ್ರಿಯ ಪುಸ್ತಕಗಳನ್ನ ಬರೆದಿರುವ ನೆಹರು ಪತ್ರಿಕೋದ್ಯಮಿಯು ಆಗಿದ್ದರು. ಪ್ರಧಾನಿ ಹುದ್ದೆ ಅಲಂಕರಿಸುವುದಕ್ಕೂ ಮೊದಲು ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸಂಪಾದಕರಾಗಿದ್ದರು.