ಟೈಮ್ಸ್ ಹೈಯರ್ ಎಜುಕೇಶನ್ ಸಮೀಕ್ಷೆ ವರದಿಯಂತೆ ಟಾಟಾ ಇನ್ಸ್ಟಿಟ್ಯೂಟ್ ಎಂದೇ ಖ್ಯಾತವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಜಗತ್ತಿನ ಅತ್ಯುತ್ತಮ ಸಣ್ಣ ವಿಶ್ವವಿದ್ಯಾಲಯ'ಗಳ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿದೆ.
ವಿಶ್ವದಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಅಳೆಯಲು ಇರುವ ಟೈಮ್ಸ್ ಹೈಯರ್ ಎಜುಕೇಶನ್ ಸಮೀಕ್ಷೆಯ 2017 ರ ಸಮೀಕ್ಷೆಯಲ್ಲಿ ಈ ಮಾಹಿತಿ ಪ್ರಕಟವಾಗಿದೆ, 'ಐಐಎಸ್ಸಿ ಯು 201ರಿಂದ 250ರ ಪಟ್ಟಿಯಲ್ಲಿ ಸ್ಥಾನ ಗಳಿಸುವ ಮೂಲಕ ಜಗತ್ತಿನ 200 ದೊಡ್ಡ, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯ ಸನಿಹಕ್ಕೆ ಬಂದಿದೆ' ತಿಳಿಸಲಾಗಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಮೊದಲ ಸ್ಥಾನ ಪಡೆದಿದ್ದು, ಐದು ಬಾರಿ ಮೊದಲ ಸ್ಥಾನ ಗಳಿಸಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು 2ನೇ ಸ್ಥಾನ ಪಡೆದಿದೆ. ಭಾರತದಶಿಕ್ಷಣ ಸಂಸ್ಥೆಯೊಂದು ಜಗತ್ತಿನ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ.
1909ರಲ್ಲಿ ಆರಂಭವಾಗಿರುವ ಐಐಎಸ್ಸಿಯು 2011ರಲ್ಲಿ ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ 91ರಿಂದ 100ನೇ ಸ್ಥಾನ ಗಳಿಸಿತ್ತು. ಅಲ್ಲದೇ 2015ರ ಸಮೀಕ್ಷೆಯಲ್ಲಿ 99 ನೇ ಸ್ಥಾನಗಳಿಸಿ ಟೈಮ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.

ಟೈಮ್ಸ್ ಹೈಯರ್ ಎಜುಕೇಶನ್
ಲಂಡನ್ ಮೂಲದ ಟೈಮ್ಸ್ ಹೈಯರ್ ಎಜುಕೇಶನ್ ಸಂಸ್ಥೆಯು ನಿಯತಕಾಲಿಕ ಪತ್ರಿಕೆಯಾಗಿದೆ. ವಿಶ್ವವಿದ್ಯಾಲಯಗಳ ಸಮೀಕ್ಷೆ ನಡೆಸಿ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪ್ರಸಿದ್ಧಿ ಹೊಂದಿದೆ. ಕಳೆದ ನಲವತ್ತು ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಬಗ್ಗೆ ವರದಿ ಮಾಡುತ್ತಿದ್ದು 2004 ರಿಂದ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ.
ಐಐಎಸ್ಸಿ/ಟಾಟಾ ಇನ್ಸ್ಟಿಟ್ಯೂಟ್
ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿದೆ. ಜಮ್ಷೆಡ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ 1909 ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ 371 ಎಕರೆ ಭೂಮಿ ದಾನ ಮಾಡಿದರು. ಹಾಗೇ ಜಮ್ಷೆಡ್ಜಿ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ "ಟಾಟಾ ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ.
ಐಐಎಸ್ಸಿ ಶಿಕ್ಷಣ ಸಂಸ್ಥೆಯಲ್ಲಿ 4000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, 2600 ಕ್ಕೂ ಹೆಚ್ಚು ಸಂಶೋಧಕ ವಿದ್ಯಾರ್ಥಿಗಳು ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಅಲ್ಲದೇ 74 ಐಎನ್ಎಸ್ಎ ಫೆಲೋಗಳು, 97 ಐಎಎಸ್ಸಿ ಫೆಲೋಗಳು, 57 ಎನ್ಎಎಸ್ಐ ಫೆಲೋಗಳು 50 ಐಎನ್ಎಇ ಫೆಲೋಗಳು ಮತ್ತು 56 ಜೆ.ಸಿ.ಬೋಸ್ ಫೆಲೋಗಳು ಸೇರಿದಂತೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದಿರುವ 51 ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಟಾ ಇನ್ಸ್ಟಿಟ್ಯೂಟ್ ಗೆ ಸ್ವಾಮಿ ವಿವೇಕಾನಂದರ ಕೊಡುಗೆ
ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಅಸ್ತಿತ್ವಕ್ಕೆ ಬರುವಲ್ಲಿ ವಿವೇಕಾನಂದರ ಕೊಡುಗೆಯೂ ಇದೆ. 1893ರಲ್ಲಿ ಸ್ವಾಮಿ ವಿವೇಕಾನಂದರು ಮೊದಲ ಬಾರಿಗೆ ಸರ್ ಜಮ್ಷೆಡ್ಜಿ ಟಾಟಾ ಅವರನ್ನು ಭೇಟಿ ಮಾಡಿದ್ದರು. ಟಾಟಾ ಅವರನ್ನು ಆಶಿರ್ವದಿಸಿದ ವಿವೇಕಾನಂದರು ಪಶ್ಚಿಮದ ವೈಜ್ಞಾನಿಕ, ತಾಂತ್ರಿಕ ಸಾಧನೆಗಳನ್ನು ಭಾರತದ ಸಂನ್ಯಾಸ ತತ್ವ ಮತ್ತು ಮಾನವೀಯತೆಯ ಜೊತೆ ಮಿಳಿತ ಮಾಡಿದರೆ ಎಷ್ಟು ಅದ್ಭುತವಾಗಿರುತ್ತದೆ ಎಂದು ಹೇಳಿದರು
ಆಗ ಅವರಿಬ್ಬರ ನಡುವೆ ನಡೆದ ಮಾತುಕತೆಯ ಫಲವೇ ಮುಂದೆ ಭಾರತೀಯ ವಿಜ್ಞಾನ ಸಂಸ್ಥೆಯಾಯಿತು.
ಐಐಎಸ್ಸಿ ಬಗ್ಗೆ ಮತ್ತಷ್ಟು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ http://www.iisc.ac.in/


Click it and Unblock the Notifications











