ಮುಂದಿನ ಮೂರು ವರ್ಷಗಳಲ್ಲಿ 1.75 ಲಕ್ಷದಿಂದ 2 ಲಕ್ಷ ಐ.ಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಹೆಡ್ ಹಂಟರ್ಸ್ ಇಂಡಿಯಾ ಸಂಸ್ಥೆ ಹೇಳಿಕೆಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರು ತಳ್ಳಿ ಹಾಕಿದ್ದಾರೆ.
ಇತ್ತೀಚಗೆ ಭಾರತದ ಸಾಫ್ಟ್ವೇರ್ ರಂಗದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎನ್ನುವ ವರದಿಗಳು ಪ್ರಕಟವಾಗಿ ದೇಶಾದ್ಯಂತ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾಫ್ಟ್ವೇರ್ ದೈತ್ಯ ಸಂಸ್ಥೆಗಳಾದ ವಿಪ್ರೊ, ಇನ್ಫೊಸಿಸ್, ಕಾಗ್ನಿಜಂಟ್, ಟೆಕ್ ಮಹೀಂದ್ರಾ ಸಂಸ್ಥೆಗಳು ಕಳಪೆ ಸಾಧನೆ ಹೊಂದಿದ ಮತ್ತು ನಿರೀಕ್ಷಿತ ಮಟ್ಟದ ಕಾರ್ಯದಕ್ಷತೆ ತೋರದ ಸಿಬ್ಬಂದಿಯನ್ನು ಮನೆಗೆ ಕಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂಬ ವರದಿಗಳಿಂದ ಜನರು ಹೆದರಿದ್ದರು.
ದೇಶಿ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಯು ಮುಂದಿನ ನಾಲ್ಕೈದು ವರ್ಷಗಳಲ್ಲಿ 20 ರಿಂದ 25 ಲಕ್ಷದಷ್ಟು ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. ದೇಶಿ ಐ.ಟಿ ಉದ್ದಿಮೆ ಸದೃಢವಾಗಿದ್ದು, ಡಿಜಿಟಲ್ ಆರ್ಥಿಕತೆಯಲ್ಲಿ ಈ ಉದ್ದಿಮೆಯು ಅಪಾರ ಬೆಳವಣಿಗೆ ದಾಖಲಿಸಲಿದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ದೇಶಿ ಐ.ಟಿ ಸಂಸ್ಥೆಗಳು 80 ದೇಶಗಳ 200 ನಗರಗಳಲ್ಲಿ ತಮ್ಮ ವಹಿವಾಟು ವಿಸ್ತರಿಸಿವೆ. 40 ಲಕ್ಷ ಜನರಿಗೆ ನೇರ ಮತ್ತು 1.3 ಕೋಟಿ ಜನರಿಗೆ ಪರೋಕ್ಷವಾಗಿ ಉದ್ಯೋಗ ಅವಕಾಶ ಕಲ್ಪಿಸಿವೆ. ದಿನೇ-ದಿನೇ ಉದ್ಯಮದ ವಹಿವಾಟು ವಿಸ್ತರಣೆಯಾಗುತ್ತಿದೆ. ಐದು ವರ್ಷಗಳಲ್ಲಿ 25 ಲಕ್ಷದವರೆಗೆ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವುದರ ಕುರಿತು ಸಾಫ್ಟ್ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಅಂದಾಜು ಮಾಡಿದೆ' ಎಂದು ತಿಳಿಸಿದ್ದಾರೆ.