ಕನ್ನಡ ಶಾಲೆಗಳಲ್ಲಿ ಅಥವಾ ಕನ್ನಡ ಮಾಧಮಗಳಲ್ಲಿ ಶಿಕ್ಷಣ ಪಡೆದರೆ ಕೆಲಸ ಸಿಗುವುದಿಲ್ಲ ಎನ್ನುವ ಚಿಂತೆಯನ್ನು ದೂರ ಮಾಡಲು ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ.
ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ನಿರ್ಮಿಸಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದ್ದು, ಈಗಾಗಲೇ ಈ ವ್ಯವಸ್ಥೆಯಿಂದ ಸುಮಾರು 125ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡುವಲ್ಲಿ ಸಫಲವಾಗಿದೆ.
ಕಸಾಪ ಸಂಪರ್ಕ ಸೇತುವೆ
ಕನ್ನಡ ಸಾಹಿತ್ಯ ಪರಿಷತ್ತು ಇನ್ನುಮುಂದೆ ಕನ್ನಡಿಗರಿಗೆ ಉದ್ಯೋಗ ನೀಡಲು ಉದ್ಯೋಗದಾತ ಸಂಸ್ಥೆಗಳಿಗೂ ನಡುವೆ ಕಸಾಪ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ.
ಕಸಾಪ ಉದ್ಯೋಗ ಅರ್ಜಿ
ಕಸಾಪ ವೆಬ್ ಸೈಟ್ ನಲ್ಲಿ ಇದಕ್ಕಾಗಿ ಒಂದು ಅರ್ಜಿ ನಮೂನೆ ನೀಡಲಾಗಿದೆ. ಉದ್ಯೋಗಾಕಾಂಕ್ಷಿಗಳು ವೆಬ್ ಸೈಟ್ ನ ಬಲಗಡೆಯಲ್ಲಿ 'ಉದ್ಯೋಗ ಅರ್ಜಿ' ಎಂಬ ವಿಭಾಗದಲ್ಲಿ ಕ್ಲಿಕ್ ಮಾಡಿ ಅರ್ಜಿ ತುಂಬಿ, ಸ್ವವಿವರವನ್ನು ಸಲ್ಲಿಸಬಹುದಾಗಿದೆ. ಆಕಾಂಕ್ಷಿಗಳು ಸಲ್ಲಿಸಿದ ವಿವರಗಳನ್ನು ಸೂಕ್ತವಾದ ಸಂಸ್ಥೆಗಳಿಗೆ ಕಳಿಸಲಾಗುವುದು. ನಂತರ ನೇರ ಸಂದರ್ಶನದ ಮೂಲಕ ಉದ್ಯೋಗ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
'ಸಿ' ಮತ್ತು 'ಡಿ' ವಿಭಾಗದ ಉದ್ಯೋಗಗಳ ಆಕಾಂಕ್ಷಿ ಕನ್ನಡಿಗರಿಂದ ವಿವರಗಳನ್ನು ಪಡೆದು ಆ ವಿವರಗಳನ್ನು ಕನ್ನಡ ನಾಡಿನಲ್ಲಿರುವ ಎಲ್ಲಾ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ತಲುಪಿಸುವ ವ್ಯವಸ್ಥೆಗೆ ಈ ತಾಣದಲ್ಲಿ ಚಾಲನೆಯನ್ನು ನೀಡಲಾಗಿದೆ. ದುಬೈನಲ್ಲಿರುವ ತಿರು ಶ್ರೀಧರ್ ಎಂಬುವರು ಈ ವ್ಯವಸ್ಥೆಯ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ರಾಜ್ಯದ ಗ್ರೂಪ್ 'ಸಿ' ಹಾಗೂ 'ಡಿ' ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂಬ ನಿಯಮವಿದೆ. ಇನ್ನೂ ಅನೇಕ ಕಡೆ ಉದ್ಯೋಗ ಮೀಸಲಾತಿ ಇದ್ದರೂ ಕನ್ನಡಿಗರಿಗೆ ಮಾಹಿತಿ ಕೊರತೆ ಉಂಟಾಗಿದೆ ಎಂದು ಡಾ. ಮನು ಬಳಿಗಾರ್ ಹೇಳಿದ್ದಾರೆ.
ಅಧ್ಯಕ್ಷರ ಕನಸು
ಡಾ. ಮನು ಬಳಿಗಾರ್ ಅವರು ಕಸಾಪ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಾಗ ಹೀಗೊಂದು ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದ್ದರು. ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸಿಕೊಡಬೇಕು ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಮಹತ್ವದ ಯೋಜನೆಗಳಲ್ಲೊಂದಾಗಿದೆ.
'ಕನ್ನಡವು ಅನ್ನದ ಭಾಷೆಯಾಗಬೇಕು' ಎಂಬ ನಾಡಿನ ಹಿರಿಯರ ಆಶಯದಂತೆ ರೂಪಿಸಲಾಗಿರುವ ಈ ಯೋಜನೆಯನ್ನು, ಉದ್ಯೋಗಾಂಕ್ಷಿ ಕನ್ನಡ ಯುವಜನತೆ ಸದುಪಯೋಗಪಡಿಸಿಕೊಳ್ಳುತ್ತಾರೆಂಬ ಆಶಯ ನಮ್ಮದು. -ಮನು ಬಳಿಗಾರ್