ರಾಜ್ಯದೆಲ್ಲೆಡೆ ಪ್ರಥಮ ಪಿಯು ಫಲಿತಾಂಶ ಇಂದು ಪ್ರಕಟಗೊಂಡಿದೆ. ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಪ್ರಥಮ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದೆ.
ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅಥವಾ ಪೋಷಕರು ಫಲಿತಾಂಶ ತಿಳಿಯಲು ಕಾಲೇಜುಗಳಿಗೆ ಆಗಮಿಸುವುದನ್ನು ನಿಷೇಧಿಸಲಾಗಿದ್ದು, ಕಾಲೇಜುಗಳ ಸೂಚನಾ ಫಲಕಗಳಲ್ಲಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಈಗಾಗಲೇ ತಿಳಿಸಲಾಗಿತ್ತು ಆದ ಕಾರಣ ವಿದ್ಯಾರ್ಥಿಗಳ ಮೊಬೈಲ್ಗೆ ಅಥವಾ ಇಮೇಲ್ಗೆ ಫಲಿತಾಂಶದ ವಿವರ ತಲುಪಿಸಿದೆ.
ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ನಿರ್ದೇಶನದಂತೆ ಮುಂದಿನ ತರಗತಿಗಳ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಫಲಿತಾಂಶವನ್ನು ಪ್ರಕಟಿಸಲು ಇಲಾಖೆ ಮುಂದಾಗಿದೆ. ಒಟ್ಟು 6.53 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 2 ಲಕ್ಷ ಕಲಾ ವಿಭಾಗ, 2.48 ವಾಣಿಜ್ಯ, 2.4 ಲಕ್ಷ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು.
ಕಳೆದ ವಾರವಷ್ಟೇ ಕಾಲೇಜುಗಳು ಮೇ 5ನೇ ತಾರೀಕಿನಂದು ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಬೇಕು ಎಂದು ಸುತ್ತೋಲೆ ಹೊರಡಿಸಿದ್ದ ಪೂರ್ವ ಶಿಕ್ಷಣ ಇಲಾಖೆ ಇದರಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಕಾಲೇಜುಮಟ್ಟದಲ್ಲಿಯೇ ನಿರ್ವಹಿಸಲು ಮಾನದಂಡಗಳನ್ನು ಸದ್ಯದಲ್ಲೇ ತಿಳಿಸಲಿದ್ದೇವೆ ಎಂದು ಸ್ಪಷ್ಟಪಡಿಸಲಾಗಿತ್ತು.
ಖಾಸಗಿ ಪಿಯು ಕಾಲೇಜುಗಳು ಇಂತಹ ಸಾಮಾಜಿಕ ಸಂಕಷ್ಟದ ಸಂದರ್ಭಲ್ಲಿ ಅಸಹಾಯಕ ಪೋಷಕರಿಂದ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಒತ್ತಾಯಿಸಬಾರದ ಎಂದೂ ಕೂಡ ತಿಳಿಸಲಾಗಿತ್ತು. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪೋಷಕರು ಕಂತುಗಳ ಮೂಲಕ ಕಾಲೇಜು ಶುಲ್ಕ ಪಾವತಿಸಲು ಶಿಕ್ಷಣ ಸಂಸ್ಥೆಗಳು ಸಹಕರಿಸಬೇಕು. 2020-21 ನೇ ಈ ಸಾಲಿಗೆ ಯಾವುದೇ ಕಾರಣಕ್ಕೂ ಬೋಧನ ಶುಲ್ಕವನ್ನು ಹೆಚ್ಚಿಸಬಾರದೆಂದು ಇಲಾಖೆಯು ನಿರ್ದೇಶನ ನೀಡಿದೆ. ಒಂದು ವೇಳೆ ಈ ಬಗ್ಗೆ ದೂರುಗಳು ಬಂದಲ್ಲಿ, ಕಾಲೇಜುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪದವಿಪೂರ್ವ ಶಿಕ್ಷಣ ನಿರ್ದೇಶಕರು ಈ ಹಿಂದೆ ತಮ್ಮ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದರು.