2020-21ನೇ ಸಾಲಿನ ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿ ಸೈನ್ಸ್ (ಬಿಎನ್ವೈಎಸ್), ಕೃಷಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಔಷಧಾಲಯ ವಿಭಾಗಗಳಲ್ಲಿ ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಸಿಬಿಎಸ್ಇ ವಿದ್ಯಾರ್ಥಿ ಮೇಘನ್ ಎಚ್ಕೆ ಅಗ್ರ ಶ್ರೇಣಿಯನ್ನು ಪಡೆದಿದ್ದಾರೆ. ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ಸ್ಟ್ರೀಮ್ಗಳಲ್ಲಿ ಏಕೈಕ ವಿದ್ಯಾರ್ಥಿಯು ಅಗ್ರಸ್ಥಾನ ಪಡೆಯುತ್ತಿರುವುದು ಇದೇ ಮೊದಲು.

ಸಿಇಟಿ 2021 ಫಲಿತಾಂಶ ಪ್ರಕಟವಾದ ಬಳಿಕ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ ನಾರಾಯಣ್ ಅವರು "ಇದು ಒಂದು ದಾಖಲೆ" ಎಂದು ಹೇಳಿದ್ದಾರೆ. ಸಿಇಟಿ ಟಾಪರ್ ಮೇಘನ್ ಹೆಚ್ಕೆ ಮಾಧ್ಯಮದೊಂದಿಗೆ ಮಾತನಾಡಿ "ನಾನು ಟಾಪ್ 10 ರಲ್ಲಿ ಬರುವ ಭರವಸೆ ಹೊಂದಿದ್ದೆ, ಆದರೆ ನಾನು ಮೊದಲು ಬರುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ಇದು ಎರಡೂವರೆ ವರ್ಷದ ಮ್ಯಾರಥಾನ್ ಆಗಿತ್ತು. ಆದರೆ ಸರಿಯಾದ ಯೋಜನೆ ಮತ್ತು ಸಾಪ್ತಾಹಿಕ ಗುರಿಗಳು ಇದನ್ನು ಸಾಧಿಸಲು ನನಗೆ ಸಹಾಯ ಮಾಡಿದೆ" ಎಂದು ತಿಳಿಸಿದ್ದಾರೆ.
ನನ್ನ ಈ ಸಾಧನೆಗೆ ಬೆನ್ನೆಲುಬಾಗಿದ್ದ ನನ್ನ ಹೆತ್ತವರಿಗೆ ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಇಬ್ಬರು ಶಿಕ್ಷಕರಿಗೆ ಋಣಿಯಾಗಿರುತ್ತೇನೆ. "ನನ್ನ ಹೆತ್ತವರು ನನಗೆ ಯಾವುದು ಉತ್ತಮ ಎಂದು ತಿಳಿದಿದ್ದರು ಮತ್ತು ಮನೆಯಲ್ಲಿ ಉತ್ತಮ ಕಲಿಕೆಯ ವಾತಾವರಣವನ್ನು ಸೃಷ್ಟಿಸಿದ್ದರು. ಅಧ್ಯಯನಕ್ಕೆ ಯಾವುದೇ ನಿಗದಿತ ಸಮಯಗಳನ್ನು ಅನುಸರಿಸದಿದ್ದರೂ ನಾನು ದಿನಕ್ಕೆ 10 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದೆ" ಎಂದು ಅವರು ಹೇಳಿದ್ದಾರೆ.
ಆಂಕೊಲಾಜಿಸ್ಟ್ ಆಗುವ ಬಯಕೆ :
ಸಾಂಕ್ರಾಮಿಕ ರೋಗದಿಂದಾಗಿ ಆರಂಭವಾದ ಆನ್ಲೈನ್ ತರಗತಿಗಳು ಆರಂಭದಲ್ಲಿ ಕಠಿಣವಾಗಿದ್ದರೂ ಶಿಕ್ಷಕರು ನನಗೆ ಸಾಕಷ್ಟು ಸಹಾಯ ಮಾಡಿದರು ಮತ್ತು ನನ್ನ ಪೋಷಕರು ನನಗೆ ಮಾರ್ಗದರ್ಶನ ನೀಡಿದರು. ನಾನು ಮುಂದೆ ವೈದ್ಯನಾಗಲು ಬಯಸುತ್ತೇನೆ ಅದರಲ್ಲೂ ವಿಶೇಷವಾಗಿ ಆಂಕೊಲಾಜಿಸ್ಟ್ ಆಗುವ ಇಚ್ಚೆಯನ್ನು ಹೊಂದಿದ್ದೇನೆ. ಹೀಗಾಗಿ ನೀಟ್ ಪರೀಕ್ಷೆಯಲ್ಲಿ ಅಗ್ರ -50 ಶ್ರೇಯಾಂಕವನ್ನು ಪಡೆಯುವ ಭರವಸೆ ನನಗಿದೆ ಎಂದು ಮೇಘನ್ ತಿಳಿಸಿದ್ದಾರೆ.
ಸಿಇಟಿ ಟಾಪರ್ ಮೇಘನ್ ಹೆಚ್ಕೆ ಅವರ ತಂದೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು, ತಾಯಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಸಿಇಟಿ ಫಲಿತಾಂಶ ನಿನ್ನೆ ಪ್ರಕಟ:
2020-21ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಿಇಟಿ ಪರೀಕ್ಷೆಯ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಮೈಸೂರಿನ ವಿದ್ಯಾರ್ಥಿ ಮೇಘನ್ ಹೆಚ್ ಕೆ ಮೊದಲ ಸ್ಥಾನ ಪಡೆದಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ನಿನ್ನೆ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಿದ್ದು, ಎಂಜಿನಿಯರಿಂಗ್, ಬಿಫಾರ್ಮ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್ ಹೆಚ್ ಕೆ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಪ್ರೇಮಂಕುರ್ ಎರಡನೇ ಸ್ಥಾನ ಪಡೆದಿದ್ದಾರೆ, ಬಿಎಸ್ ಅನಿರುಧ್ ಮೂರನೇ ಸ್ಥಾನ ಪಡೆಯುವ ಮೂಲಕ ಸಿಇಟಿ ಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದ್ದರು.
ಸಿಇಟಿ ಟಾಪರ್ಸ್ ವಿವರ ಹೀಗಿದೆ :
ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಅಗ್ರಿಕಲ್ಚರ್ ವಿಭಾಗದಲ್ಲಿ ಮೇಘನ್ ಹೆಚ್.ಕೆ- ಮೊದಲ ಸ್ಥಾನ ಪಡೆದರೆ, ರೀತಂ .ಬಿ- ದ್ವಿತೀಯ ಸ್ಥಾನ, ಅದಿತ್ಯ ಪ್ರಭಾಶ್ ಮೂರನೇ ಸ್ಥಾನ ಪಡೆದಿದ್ದಾರೆ. ವೆಟರ್ನರಿ ಸೈನ್ಸ್ ವಿಭಾಗದಲ್ಲಿ ಮೇಘನ್ ಹೆಚ್.ಕೆ ಮೊದಲ ಸ್ಥಾನ, ವರುಣ್ ಆದಿತ್ಯ ಎರಡನೇ ಸ್ಥಾನ ಮತ್ತು ರೀತಂ .ಬಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ. ಬಿ.ಫಾರ್ಮ್ ವಿಭಾಗದಲ್ಲಿ ಮೇಘನ್ ಹೆಚ್.ಕೆ ಮೊದಲ ಸ್ಥಾನ, ಪ್ರೇಮಾಂಕರ್ ಎರಡನೇ ಸ್ಥಾನ, ಬಿ.ಎಸ್.ಅನಿರುದ್ ಮೂರನೇ ಸ್ಥಾನವನ್ನು ಗಳಿಸಿದ್ದಾರೆ. ನ್ಯಾಚರೋಪತಿ ವಿಭಾಗದಲ್ಲಿ ಮೇಘನ್ ಹೆಚ್.ಕೆ ಮೊದಲ ಸ್ಥಾನ, ವರುಣ್ ಆದಿತ್ಯ ಎರಡನೇ ಸ್ಥಾನ ಹಾಗೂ ರೀತಂ ಬಿ ಅವರು ಮೂರನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ ನಲ್ಲಿ ನಡೆದ ಸಿಇಟಿ ಪರೀಕ್ಷೆ 2021:
ಈ ಭಾರಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 28, 29, 30ರಂದು ನಡೆಸಲಾಗಿತ್ತು. ಪರೀಕ್ಷೆಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದರು. 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದರು. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ, 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದರು. 530 ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.
ಈ ವರ್ಷ ಸಿಇಟಿ ಅಂಕಗಳೇ ಮೈನ್:
ಸಿಇಟಿ ಫಲಿತಾಂಶ ಪ್ರಕಟಿಸಲು ಪ್ರತಿ ವರ್ಷ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ನ ಎರಡನೇ ಅಲೆಯ ಭಯದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಮಾತ್ರ ಶ್ರೇಣಿಗಳನ್ನು ನೀಡಲು ಕೆಇಎ ನಿರ್ಧರಿಸಿತ್ತು. ಅದರ ಅನ್ವಯ ಇಂದು ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ.


Click it and Unblock the Notifications











