ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಮುಚ್ಚಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆಯ ಮೇರೆಗೆ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸಲು ನಿರ್ಧಾರ ಕೈಗೊಂಡಿದೆ.
ಜಿಲ್ಲೆಗಳಲ್ಲಿ ಮತ್ತು ಗಡಿ ಭಾಗಗಳಲ್ಲಿ ಕೋವಿಡ್ ಸೋಂಕಿನ ಸಂಖ್ಯೆಗಳನ್ನು ಅವಲೋಕಿಸಿ ಬಳಿಕ ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಸಮಿತಿ ಅನುಮತಿ ನೀಡಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಹಾಜರಾತಿ ಕಡ್ಡಾಯವಿಲ್ಲ:
ದಸರಾ ಬಳಿಕ ಶಾಲೆ ಆರಂಭಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದೆವು ಅದರಂತೆ ಶಾಲೆ ಆರಂಭ ಆಗಲಿದೆ. ತರಗತಿಯಲ್ಲಿ ಶೇ.೫೦ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುವುದು. ಶಾಲೆಗೆ ಹಾಜರಾಗಲು ಮಕ್ಕಳಿಗೆ ಒತ್ತಾಯ ಇರುವುದಿಲ್ಲ. ತರಗತಿ ಹಾಜರಾಗುವ ವಿದ್ಯಾರ್ಥಿಗಳ ಪೋಷಕರ ಅನುಮತಿ ಕಡ್ಡಾಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸದ್ಯಕ್ಕಿಲ್ಲ LKG, UKG ತರಗತಿ ಆರಂಭ :
ಸದ್ಯಕ್ಕೆ ಎಲ್ಕೆಜಿ ಮತ್ತು ಯುಕೆಜಿ ತರಗತಿ ಆರಂಭ ಬಗ್ಗೆ ಇಲಾಖೆ ನಿರ್ಧಾರ ಮಾಡಿಲ್ಲ. ಅಕ್ಟೋಬರ್ 21 ಅಥವಾ 25ರಂದು ಶಾಲೆ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಫೀಸ್ ಬಗ್ಗೆ ಕೋರ್ಟ್ನಿಂದ ಆದೇಶ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಶಿಕ್ಷಕರಿಗೆ ಮಾಸ್ಕ್ ಮತ್ತು ವ್ಯಾಕ್ಸಿನ್ ಕಡ್ಡಾಯ :
ಪ್ರಾಥಮಿಕ ಶಾಲೆಗಳಲ್ಲಿ ತರಗತಿಗೆ ಹಾಜರಾಗುವ ಶಿಕ್ಷಕರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿರಬೇಕು ಮತ್ತು ತರಗತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆಯನ್ನು ನೀಡಲಾಗಿದೆ.
ದಸರಾ ಬಳಿಕ ನಿರ್ಧಾರ:
1 ರಿಂದ 5ನೇ ತರಗತಿಯವರೆಗೆ ಶಾಲೆಗಳನ್ನು ಮತ್ತೆ ತೆರೆಯುವ ಕುರಿತು ದಸರಾ ಹಬ್ಬದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದರು. ಅದರಂತೆಯೇ ಇದೀಗ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಂಡಿದೆ.
ಈಗಾಗಲೇ ಉನ್ನತ ಶಿಕ್ಷಣದವರೆಗೂ ತರಗತಿ ಆರಂಭ:
ರಾಜ್ಯದಲ್ಲಿ ಈಗಾಗಲೇ 6ನೇ ತರಗತಿಯಿಂದ ಮೇಲ್ಪಟ್ಟು ಉನ್ನತ ಶಿಕ್ಷಣದವರೆಗೆ ಎಲ್ಲಾ ತರಗತಿಗಳು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಆರಂಭವಾಗಿ ಸುಸೂತ್ರವಾಗಿ ನಡೆಯುತ್ತಿವೆ. ಇದೀಗ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಷ್ಟೇ ಶಾಲೆ ಮೆಟ್ಟಿಲು ಹತ್ತುವುದು ಬಾಕಿ ಇದೆ.