ಈಗಾಗಲೇ ನಿರ್ಧರಿಸಿರುವಂತೆ ಜನವರಿ 1 ನೇ ತಾರೀಖಿನಿಂದ ಶಾಲೆ ಮತ್ತು ಕಾಲೇಜುಗಳನ್ನು ತೆರೆಯಲಾಗುತ್ತದೆ. ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಭೆಯ ನಂತರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು " 3 ದಿನಗಳ ಹಿಂದೆ ಸಿಎಂ ಜೊತೆ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಶಾಲೆ, ಕಾಲೇಜು ಆರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭಿಸಲು ಸಮಿತಿ ಒಪ್ಪಿಗೆ ಸೂಚಿಸಿದೆ. ಹಾಗೂ ಶಾಲೆ ಮತ್ತು ಕಾಲೇಜು ತೆರೆಯಲು ಅನುಸರಿಸಬೇಕಾದ ಮಾರ್ಗಸೂಚಿಯನ್ನೂ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನದ ಅನ್ವಯ ಬಿಡುಗಡೆ ಮಾಡಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಇನ್ನು ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳಿಗೆ 'ವಿದ್ಯಾಗಮ' ಆರಂಭದ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲ ಶಿಕ್ಷಕರಿಗೂ ಕೂಡ ಆರ್ಟಿಪಿಸಿಆರ್ ಪರೀಕ್ಷೆಗೆ ಸೂಚನೆ ನೀಡಲಾಗಿದೆ. 14 ಜಿಲ್ಲೆಗಳ ಸಿಇಓಗಳು ಕೆಲವು ಸಲಹೆ, ಸಮಸ್ಯೆ, ಅಭಿಪ್ರಾಯಗಳನ್ನು ಹೇಳಿದರು. ಶಾಲೆ ಆರಂಭವನ್ನು ಯಶಸ್ವಿ ಮಾಡುವ ಇಂಗಿತ ನೀಡಿದ್ದಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ. ಇಲ್ಲದಿದ್ದರೆ ಶಾಲೆಗೆ ಪ್ರವೇಶ ಇಲ್ಲ. ಹಾಗೂ ಶಾಲೆಗೆ ಅವರ ಮಕ್ಕಳನ್ನು ಕಳುಹಿಸುವುದು ಅವರ ಆಯ್ಕೆಗೆ ಬಿಟ್ಟಿದ್ದು. 50 ವರ್ಷ ದಾಟಿದ ಶಿಕ್ಷಕರು ಮಾಸ್ಕ್ ಜತೆ ಫೇಸ್ ಶೀಲ್ಡ್ ಕೂಡ ಧರಿಸುವುದು ಕಡ್ಡಾಯ ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಯ ಸಿಇಓ, ಡಿಡಿಪಿಐ, ಡಿಡಿಪಿಯು, ಪ್ರಾಂಶುಪಾಲರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಬಹಳ ಯಶಸ್ವಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದ್ದೇವೆ. ಇದಕ್ಕೆ ಜಿಲ್ಲಾಡಳಿತ, ಎಲ್ಲಾ ಇಲಾಖೆಗಳ ಸಹಕಾರದಿಂದ ಮಾತ್ರ ಸಾಧ್ಯವಾಯಿತು ಎಂದು ಹೇಳಿದ್ದಾರೆ .
ಕೊರೋನಾ ವೈರಸ್ ರೂಪಾಂತರದ ನಡುವೆಯೂ ಶಾಲೆ ಆರಂಭಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಪುನರ್ ವಿಮರ್ಶೆ ಮಾಡುವ ಪ್ರಮೇಯ ಬಂದಿಲ್ಲ. ಅವರ ಮಾರ್ಗದರ್ಶನದಂತೆ ಮುನ್ನೆಡೆಯುತ್ತಿದ್ದೇವೆ. ಯಾವ ಪಾಲಕರಿಗೂ ನಾವು ಬಲವಂತ ಮಾಡ್ತಿಲ್ಲ. ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿಗಳು ಹೆಚ್ಚಾಗುತ್ತಿದೆ. ಹೀಗಾಗಿ ಶಾಲಾ ಆರಂಭ ಮಾಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.