2021-22ನೇ ಸಾಲಿನ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳಿಗೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕವನ್ನು ಜೂನ್ 9ರ ವರೆಗೆ ವಿಸ್ತರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಸಚಿವರು ಅಧಿಕೃತ ಪ್ರಕಟಣೆಯನ್ನು ಬಿಡುಗಡೆ ಮಾಡಿರುತ್ತಾರೆ. ಪ್ರಸಕ್ತ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಹಾಗೂ ಹಿಂದಿನ ಸಾಲುಗಳಲ್ಲಿ ಅನುತ್ತೀರ್ಣರಾದ ಎಲ್ಲಾ ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಗೆ ಜೂನ್ 2022ರಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಅಭ್ಯರ್ಥಿಗಳ ಮಾಹಿತಿಯನ್ನು ಆನ್ಲೈನ್ ಮುಖಾಂತರ ನೊಂದಾಯಿಸಲು, ಪರೀಕ್ಷಾ ಶುಲ್ಕ ಪಾವತಿ ಹಾಗೂ ಪ್ರಸ್ತಾವನೆ ಸಲ್ಲಿಕೆಗೆ ದಿನಾಂಕಗಳನ್ನು ವಿಸ್ತರಿಸಲಾಗಿತ್ತು. ಇದೀಗ ವಿದ್ಯಾರ್ಥಿಗಳು ಮತ್ತು ಪೋಷಕರ ಮನವಿಯ ಮೇರೆಗೆ ಅಂತಿಮ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಈ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗುವುದಿಲ್ಲ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಪ್ರಮುಖ ದಿನಾಂಕಗಳು :
ಮಂಡಳಿ ಜಾಲತಾಣದ ಶಾಲಾಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್ಲೋಡ್ ಮಾಡಲು ನಿಗದಿಪಡಿಸಿದ ಅಂತಿಮ ದಿನಾಂಕ : ಜೂನ್ 9,2022
ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಈ ಹಿಂದಿನ ಸಾಲಿನಂತೆ ಭೌತಿಕವಾಗಿ ಮಂಡಳಿಯ ನೆಫ್ಟ್ ಮೂಲಕ ಬ್ಯಾಂಕ್ ಗೆ ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : ಜೂನ್ 10,2022
ಜೂನ್ 8,2022 ಮತ್ತು ಜೂನ್ 9,2022ರಂದು ನೊಂದಾಯಿಸಿದ ವಿದ್ಯಾರ್ಥಿಗಳ ಮಾಹಿತಿಯ ನಾಮಿನಲ್ರೋಲ್, ಎಂಎಸ್ಎ ಮತ್ತು ಬ್ಯಾಂಕ್ ಚಲನ್ನೊಂದಿಗೆ ಭೌತಿಕವಾಗಿ ಮಂಡಳಿಗೆ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ : ಜೂನ್ 14,2022
2021-22ನೇ ಸಾಲಿನ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಲು ಕೊನೆ ದಿನಾಂಕವನ್ನು ಜೂನ್ 9ರ ವರೆಗೆ ವಿಸ್ತರಿಸಲಾಗಿದೆ.@BSBommai pic.twitter.com/LKsQnhg7yz
— B.C Nagesh (@BCNagesh_bjp) June 7, 2022
2002-03 ರಿಂದ 2021-22ರ ಎಸ್ಎಸ್ಎಲ್ಸಿ ಮುಖ್ಯ್ ಪರೀಕ್ಷೆವರೆಗೆ ಅನುತ್ತೀರ್ಣರಾದ ಅರ್ಹ ಅಭ್ಯರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಯರು ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗುವ ಮೂಲಕ ನೊಂದಣಿ ಮಾಡಬಹುದು.
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (KSEEB) ಮಾರ್ಚ್ 28 ರಿಂದ ಏಪ್ರಿಲ್ 11 ರ ವರೆಗೆ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯನ್ನು ಕರ್ನಾಟಕದೆಲ್ಲೆಡೆ ಒಟ್ಟು 3,440 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿತ್ತು. ಪರೀಕ್ಷೆಗೆ ಒಟ್ಟು 8.73 ಲಕ್ಷ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು, ಈ ಪೈಕಿ 4.21 ಲಕ್ಷ ವಿದ್ಯಾರ್ಥಿನಿಯರು ಮತ್ತು 4.52 ಲಕ್ಷ ವಿದ್ಯಾರ್ಥಿಗಳಿದ್ದರು. ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಮೇ 19ರಂದು ಪ್ರಕಟ ಮಾಡಲಾಗಿತ್ತು.