2020-21ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಿಇಟಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಮೈಸೂರಿನ ವಿದ್ಯಾರ್ಥಿ ಮೇಘನ್ ಹೆಚ್ ಕೆ ಮೊದಲ ಸ್ಥಾನ ಪಡೆದಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಇಂದು ಸುದ್ದಿಗೋಷ್ಟಿ ನಡೆಸಿ ಕರ್ನಾಟಕ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಿದ್ದು, ಎಂಜಿನಿಯರಿಂಗ್, ಬಿಫಾರ್ಮ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್ ಹೆಚ್ ಕೆ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನ ಪ್ರೇಮಂಕುರ್ ಎರಡನೇ ಸ್ಥಾನ ಪಡೆದಿದ್ದಾರೆ, ಬಿಎಸ್ ಅನಿರುಧ್ ಮೂರನೇ ಸ್ಥಾನ ಪಡೆಯುವ ಮೂಲಕ ಸಿಇಟಿ ಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಇಟಿ ಟಾಪರ್ಸ್ ವಿವರ:
ಕರ್ನಾಟಕ ಸಿಇಟಿ ಫಲಿತಾಂಶದಲ್ಲಿ ಅಗ್ರಿಕಲ್ಚರ್ ವಿಭಾಗದಲ್ಲಿ ಮೇಘನ್ ಹೆಚ್.ಕೆ- ಮೊದಲ ಸ್ಥಾನ ಪಡೆದರೆ, ರೀತಂ .ಬಿ- ದ್ವಿತೀಯ ಸ್ಥಾನ, ಅದಿತ್ಯ ಪ್ರಭಾಶ್ ಮೂರನೇ ಸ್ಥಾನ ಪಡೆದಿದ್ದಾರೆ.
ವೆಟರ್ನರಿ ಸೈನ್ಸ್ ವಿಭಾಗದಲ್ಲಿ ಮೇಘನ್ ಹೆಚ್.ಕೆ ಮೊದಲ ಸ್ಥಾನ, ವರುಣ್ ಆದಿತ್ಯ ಎರಡನೇ ಸ್ಥಾನ ಮತ್ತು ರೀತಂ .ಬಿ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಬಿ.ಫಾರ್ಮ್ ವಿಭಾಗದಲ್ಲಿ ಮೇಘನ್ ಹೆಚ್.ಕೆ ಮೊದಲ ಸ್ಥಾನ, ಪ್ರೇಮಾಂಕರ್ ಎರಡನೇ ಸ್ಥಾನ, ಬಿ.ಎಸ್.ಅನಿರುದ್ ಮೂರನೇ ಸ್ಥಾನವನ್ನು ಗಳಿಸಿದ್ದಾರೆ.
ನ್ಯಾಚರೋಪತಿ ವಿಭಾಗದಲ್ಲಿ ಮೇಘನ್ ಹೆಚ್.ಕೆ ಮೊದಲ ಸ್ಥಾನ, ವರುಣ್ ಆದಿತ್ಯ ಎರಡನೇ ಸ್ಥಾನ ಹಾಗೂ ರೀತಂ ಬಿ ಅವರು ಮೂರನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಗಸ್ಟ್ ನಲ್ಲಿ ನಡೆದ ಸಿಇಟಿ ಪರೀಕ್ಷೆ:
ಈ ಭಾರಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 28, 29, 30ರಂದು ನಡೆಸಲಾಗಿತ್ತು. ಪರೀಕ್ಷೆಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದರು. 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದರು. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ, 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದರು. 530 ಕೇಂದ್ರಗಳ ಪೈಕಿ 86 ಕೇಂದ್ರಗಳು ಬೆಂಗಳೂರಿನಲ್ಲಿದ್ದವು. ಉಳಿದ ಜಿಲ್ಲೆಗಳಲ್ಲಿ ಒಟ್ಟು 444 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು.
ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ವಿವಿಧ ಪದವಿಪೂರ್ವ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸಿಇಟಿ ಅರ್ಹತೆ ಪರೀಕ್ಷೆಯ ಮೂಲಕ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಇತರ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ನಿಮ್ಮ ಆಸಕ್ತಿಯ ಕೋರ್ಸ್ ಗಳಿಗೆ ಸೇರಲು ದ್ಯಾರ್ಥಿಗಳು ಯುಜಿಸಿಇಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆ 2021 ರ ಅಡಿಯಲ್ಲಿ ನಡೆಸುವ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳಿಗೆ ಹಾಜರಾಗಬೇಕಿರುತ್ತದೆ.
ಸಿಇಟಿ ಅಂಕ ನೀಡುವ ಪ್ರಕ್ರಿಯೆ:
ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ (ಬಿಇ / ಬಿ.ಟೆಕ್): ಕರ್ನಾಟಕ ಸಿಇಟಿ 2021ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆದಿದೆ.
B.Tech (Agril. Eng), ಬಿ.ಟೆಕ್ (ಆಹಾರ ತಂತ್ರಜ್ಞಾನ) ಬಿ.ಟೆಕ್ (ಡೈರಿ ತಂತ್ರಜ್ಞಾನ) : 2021ರ ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅರ್ಹತೆ ಪಡೆಯಲಿದ್ದಾರೆ.
ಪಿಯುಸಿ ಪರೀಕ್ಷೆ ರದ್ದು, ಸಿಇಟಿ ಅಂಕಗಳೇ ಮೈನ್:
ಸಿಇಟಿ ಫಲಿತಾಂಶ ಪ್ರಕಟಿಸಲು ಪ್ರತಿ ವರ್ಷ ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ನ ಎರಡನೇ ಅಲೆಯ ಭಯದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಮಾತ್ರ ಶ್ರೇಣಿಗಳನ್ನು ನೀಡಲು ಕೆಇಎ ನಿರ್ಧರಿಸಿತ್ತು. ಅದರ ಅನ್ವಯ ಇಂದು ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ.
ಫಲಿತಾಂಶ ವೀಕ್ಷಿಸಲು ಇಲ್ಲಿದೆ ಸ್ಟೆಪ್ಸ್ :
ಸ್ಟೆಪ್ 1: ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ kea.kar.nic.in ಅಥವಾ cetonline.karnataka.gov.in ಗೆ ಭೇಟಿ ನೀಡಿ.
ಸ್ಟೆಪ್ 2 :ಅಭ್ಯರ್ಥಿಗಳು ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಇತರೆ ಮಾಹಿತಿಯನ್ನು ಭರ್ತಿ ಮಾಡಿ
ಸ್ಟೆಪ್ 3: ಫಲಿತಾಂಶ ಸ್ಕ್ರೀನ್ ಮೇಲೆ ಮೂಡುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ.
ಸುದ್ದಿಗೋಷ್ಠಿ ನಡೆಸಿ ಸಿಇಟಿ ಫಲಿತಾಂಶ ಪ್ರಕಟಿಸಿದ ಬಳಿಕ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ನೀಟ್ ಫಲಿತಾಂಶ ಬಂದ ಬಳಿ ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಕೋರ್ಸ್ ಗಳಿಗೆ ಪ್ರವೇಶ ಆರಂಭವಾಗಲಿದೆ. ಈ ಬಾರಿ ಪರೀಕ್ಷೆಯಲ್ಲಿ 6 ಗ್ರೇಸ್ ಅಂಕ ನೀಡಲಾಗಿದ್ದು, ಭೌತಶಾಸ್ತ್ರದಲ್ಲಿ ಮೂರು ಮತ್ತು ಗಣಿತದಲ್ಲಿ ಮೂರು ಗ್ರೇಸ್ ಮಾರ್ಕ್ಸ್ ಅನ್ನು ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, 54 ಸಾವಿರ ಸೀಟ್ ಗಳನ್ನು ಸಿಇಟಿ ಮೂಲಕ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಮಾತನಾಡಿದ್ದಾರೆ.
ಇದೇ ವೇಳೆ ಎಂಜಿನಿಯರಿಂಗ್ ಸೀಟ್ ಶುಲ್ಕ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ತಿಂಗಳಾಂತ್ಯದೊಳಗೆ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಫಲಿತಾಂಶದಲ್ಲಿ 7 ಸಾವಿರ ವಿದ್ಯಾರ್ಥಿಗಳ ರ್ಯಂಕ್ ಅನ್ನು ತಡೆಹಿಡಿಯಲಾಗಿದೆ. 3,500 ವಿದ್ಯಾರ್ಥಿಗಳು ಸರಿಯಾದ ಮಾರ್ಕ್ಸ್ಕಾರ್ಡ್ ಕೊಟ್ಟಿಲ್ಲ ಹಾಗಾಗಿ ಮಾರ್ಕ್ಸ್ಕಾರ್ಡ್ ಸಲ್ಲಿಕೆ ಮಾಡದ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ ಮಾಡಿಲ್ಲ ಎಂದು ತಿಳಿಸಿದರು.
ಇನ್ನು ಪ್ರವೇಶಾತಿ ಸಂಬಂಧಿಸಿದಂತೆ ಪದವಿ ಕಾಲೇಜುಗಳಿಗೆ ಅಕ್ಟೋಬರ್ 1ರವರೆಗೂ ದಾಖಲಾಗಲು ಅವಕಾಶ ನೀಡಲಾಗಿದೆ. ಪದವಿ ಕಾಲೇಜುಗಳಿಗೆ ಶುಲ್ಕ ನಿಗದಿ ಮಾಡಲು ಸರಕಾರದ ಮಟ್ಟದಲ್ಲಿ ಸಮಿತಿ ಇಲ್ಲ. ಹೀಗಾಗಿ ಕೆಲ ಕಾಲೇಜುಗಳು ಇದನ್ನೇ ದುರುಪಯೋಗ ಮಾಡಿಕೊಳ್ಳುತ್ತಿವೆ. ಸಮಿತಿ ಇಲ್ಲ ಎಂದ ಮಾತ್ರಕ್ಕೆ ದುಬಾರಿ ಶುಲ್ಕ ವಿಧಿಸುವ ಹಾಗಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











