ದೇಶದೆಲ್ಲೆಡೆ ಕೋವಿಡ್ ಹಬ್ಬಿದಾಗಿನಿಂದಲೂ ಶೈಕ್ಷಣಿಕ ಅವಧಿಗಳೇ ತಲೆಕೆಳಗಾಗಿವೆ. ಹೀಗಿರುವಾಗ ವಿದ್ಯಾರ್ಥಿಗಳ ಭವಿಷ್ಯದ ಕತೆ ಏನು ಎನ್ನುವುದೇ ಈಗಿರುವ ಪ್ರಶ್ನೆ. ರಾಜ್ಯದಲ್ಲಿ ಈಗಾಗಲೇ 6ನೇ ತರಗತಿ ಇಂದ ಉನ್ನತ ಶಿಕ್ಷಣದವರೆಗೂ ಶಾಲಾ ಕಾಲೇಜುಗಳು ಆರಂಭವಾಗಿವೆ. 1 ರಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲೆಗಳ ಆರಂಭ ಯಾವಾಗ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಶಾಲೆ ಆರಂಭದ ಪ್ರಸ್ತಾಪ ನಮ್ಮ ಮುಂದೆ ಇಲ್ಲ :
ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭದ ಕುರಿತು ಮಾತನಾಡಿದ ಅವರು 1 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕವಾಗಿ ತರಗತಿ ಆರಂಭ ಮಾಡುವ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಈ ಕುರಿತು ತಜ್ಞರು ಯಾವುದೇ ಸಲಹೆಗಳನ್ನು ನೀಡಿಲ್ಲ ಹಾಗಾಗಿ ಈ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದಿದ್ದಾರೆ.
ಪರಿಸ್ಥಿತಿ ನೋಡಿಕೊಂಡು ನಿರ್ಧಾರ:
ಒಂದೂವರೆ ವರ್ಷಗಳಿಂದ ಶಾಲೆ ಕಾಲೇಜು ಪರೀಕ್ಷೆಗಳ ಲೆಕ್ಕಾಚಾರಗಳೇ ಬದಲಾಗಿವೆ. ಹೀಗಿರುವಾಗ ಒಂದರಿಂದ ಐದನೇ ತರಗತಿವರೆಗಿನ ಶಾಲೆ ಆರಂಭ ಯಾವಾಗ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಗಳು ಮೂರನೇ ಅಲೆಯ ಪರಿಸ್ಥಿತಿ ನೋಡಿಕೊಂಡು ಜೊತೆಗೆ ತಜ್ಞರ ಸಲಹೆಯಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಈಗಾಗಲೇ ಉನ್ನತ ಶಿಕ್ಷಣದವರೆಗೂ ತರಗತಿ ಆರಂಭ:
ರಾಜ್ಯದಲ್ಲಿ ಈಗಾಗಲೇ 6ನೇ ತರಗತಿಯಿಂದ ಮೇಲ್ಪಟ್ಟು ಉನ್ನತ ಶಿಕ್ಷಣದವರೆಗೆ ಎಲ್ಲಾ ತರಗತಿಗಳು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಆರಂಭವಾಗಿವೆ. ಆದರೆ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಷ್ಟೇ ಶಾಲೆ ಮೆಟ್ಟಿಲು ಹತ್ತಲು ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಮಾತ್ರವಲ್ಲದೇ, ಡೆಲ್ಟಾ, ಬ್ಲ್ಯಾಕ್ ಅಂಡ್ ವೈಟ್ ಫಂಗಸ್ ಹೀಗೆ ಹಲವು ರೋಗ / ವೈರಸ್ಗಳ ಭಯ ಪೋಷಕರಿಗೂ ಇದೆ. ಇದರ ಜೊತೆ ಜೊತೆಗೆ ಪೋಷಕರಿಗೆ ತಮ್ಮ ಮಕ್ಕಳ ಶಿಕ್ಷಣ ಭವಿಷ್ಯದ ಬಗ್ಗೆಯೂ ಚಿಂತೆ ಹೆಚ್ಚಾಗಿದೆ.