ಭಾರತವು 75 ನೇ ಸ್ವಾತಂತ್ರ್ಯ ದಿನವನ್ನು ನಾಳೆ ಆಚರಿಸಲಿದೆ. ಪ್ರಧಾನಿ ಪ್ರತಿ ವರ್ಷ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನವಾದ ಇಂದು ಇನ್ನು ಮುಂದೆ ಆಗಸ್ಟ್ 14 ಅನ್ನು 'ವಿಭಜನೆಯ ಭಯಾನಕ ನೆನಪಿನ ದಿನ' (Partition Horrors Remembrance Day)ವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು ವಿಭಜನೆಯ ನೋವನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ವಿಭಜನೆಯ ವೇಳೆ ದೇಶದ ಜನತೆ ಅನುಭವಿಸಿದ ಕಷ್ಟ ಮತ್ತು ತ್ಯಾಗಗಳನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ವಿಭಜನೆಯ ವೇಳೆ ಲಕ್ಷಾಂತರ ಮಂದಿ ಸಹೋದರ ಸಹೋದರಿಯರು ಸ್ಥಳಾಂತರಗೊಂಡಿದ್ದಾರೆ. ದ್ವೇಷದ ಕಾರಣಕ್ಕೆ, ಹಿಂಸೆಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ನಾವೆಲ್ಲರೂ ಸಾಮಾಜಿಕ ವಿಭಜನೆ ಮತ್ತು ದ್ವೇಷದ ವಿಷವನ್ನು ತೆಗೆದುಹಾಕೋಣ, ಏಕತೆಯ ಸ್ಫೂರ್ತಿಯನ್ನು ಬಲಿಷ್ಠಗೊಳಿಸೋಣ ಎಂದು ಟ್ವೀಟ್ ನಲ್ಲಿ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ.
ಏನಿದು ವಿಭಜನೆ ದಿನ ಮತ್ತು ಇದರ ಮಹತ್ವವೇನು ?
ಪಾಕಿಸ್ತಾನವನ್ನು 14 ಆಗಸ್ಟ್ 1947 ರಂದು ಮತ್ತು ಭಾರತವನ್ನು 15 ಆಗಸ್ಟ್ 1947 ರಂದು ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಲಾಯಿತು. ಈ ವಿಭಜನೆಯ ಮೂಲಕ ಭಾರತವನ್ನು ಎರಡು ಭಾಗಗಳಾಗಿ ವಿಂಗಡಿಸುವುದರ ಜೊತೆಗೆ ಬಂಗಾಳವನ್ನು ಕೂಡ ವಿಭಜಿಸಲಾಯಿತು ಮತ್ತು ಬಂಗಾಳದ ಪೂರ್ವ ಭಾಗವನ್ನು ಭಾರತದಿಂದ ಬೇರ್ಪಡಿಸಿ ಪೂರ್ವ ಪಾಕಿಸ್ತಾನವನ್ನು ರೂಪಿಸಲಾಯಿತು. 1971 ರ ಯುದ್ಧದ ನಂತರ ಅದು ಬಾಂಗ್ಲಾದೇಶವಾಯಿತು.
ದೇಶದಲ್ಲಿ ಸಾಮರಸ್ಯವಿಲ್ಲದಿದ್ದರೆ ಆಗುವ ಅಪಾಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಒಗ್ಗಟ್ಟು, ಸಾಮಾಜಿಕ ಸಾಮರಸ್ಯ, ಮಾನವ ಸಬಲೀಕರಣದ ಬಗ್ಗೆ ನಮ್ಮಲ್ಲಿ ಅರಿವು ಮೂಡಬೇಕು. ಇದೆಲ್ಲದಕ್ಕೂ ದೇಶ ವಿಭಜನೆಯ ದುರಂತ ನೆನಪಿನ ದಿನ ಸಾಕ್ಷಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.


Click it and Unblock the Notifications