ಕೊರೋನಾ ದೇಶದ ಒಳಹೊಕ್ಕಾಗಿನಿಂದಲೂ ಶಾಲಾ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಇದೀಗ ವರ್ಷಗಳ ಬಳಿಕ ಕೊರೋನ ಮೂರನೆ ಅಲೆಯ ಆತಂಕದ ನಡುವೆಯೂ ನಾಳೆಯಿಂದ ಶಾಲಾ ಕಾಲೇಜುಗಳನ್ನು ಪುನಃ ತೆರೆಯಲಾಗುತ್ತಿದೆ. ನಾಳೆಯಿಂದ 9 ರಿಂದ 12ನೇ ತರಗತಿವರೆಗಿನ ಶಾಲೆಗಳು ಪ್ರಾರಂಭವಾಗಲಿದೆ. ಕರ್ನಾಟಕ ಸರ್ಕಾರವು ಶಾಲೆ ಆರಂಭಕ್ಕೆ ಮಾರ್ಗಸೂಚಿಯನ್ನು ಪ್ರಕಟ ಮಾಡಿದ್ದು, ಈ ಐದು ಜಿಲ್ಲೆಗಳಲ್ಲಿ ಶಾಲೆ ಆರಂಭವಾಗುವುದಿಲ್ಲ ಎಂದೂ ಮಾಹಿತಿ ನೀಡಲಾಗಿದೆ. ಮಾರ್ಗಸೂಚಿಯಲ್ಲಿ ಏನಿದೆ ಮತ್ತು ಯಾವೆಲ್ಲಾ ಜಿಲ್ಲೆಗಳಲ್ಲಿ ಸದ್ಯಕ್ಕೆ ಶಾಲೆ ಆರಂಭವಿಲ್ಲ ಎನ್ನುವುದನ್ನು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಹಾಗೂ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆಗಸ್ಟ್ 23ರಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ಮೊದಲ ಹಂತದಲ್ಲಿ 9, 10, 12ನೇ ತರಗತಿಗಳು ಆರಂಭವಾಗಲಿವೆ. ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ಆಗಸ್ಟ್ ತಿಂಗಳಾಂತ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ತರಗತಿಗಳ ಶಾಲೆ ಆರಂಭದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅದ್ಯಾಗ್ಯೂ ಶಾಲೆ ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಏನೆಲ್ಲಾ ಅಂಶಗಳಿವೆ ಮುಂದೆ ನೋಡೋಣ.
ಸರ್ಕಾರ ಘೋಷಿಸಿರುವಂತೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1:30ವರೆಗೆ ತರಗತಿಗಳು ನಡೆಯಲಿವೆ. ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12:50ರವರೆಗೆ ತರಗತಿಗಳು ನಡೆಯಲಿದೆ.
ಶಾಲೆಯ ಆರಂಭಕ್ಕೆ ಬಿಡುಗಡೆ ಮಾಡಲಾಗಿರುವ ಮಾರ್ಗಸೂಚಿ ಇಲ್ಲಿದೆ.
ಶಾಲಾ ಆರಂಭಕ್ಕೆ ಮಾರ್ಗಸೂಚಿ :
* ಕೋವಿಡ್ -19 ಪಾಸಿಟಿವ್ ದರವು ಶೇಕಡಾ 2 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ದೈಹಿಕ ತರಗತಿಗಳಿಗೆ ಮಾತ್ರ ಶಾಲೆಗಳು ಮತ್ತೆ ತೆರೆಯಲಿವೆ.
* ಜಿಲ್ಲೆಗಳಲ್ಲಿ ತರಗತಿಗಳು ಆರಂಭಗೊಂಡ ನಂತರ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾದರೆ ಅಂತಹ ಸಂದರ್ಭದಲ್ಲಿ ಶಾಲೆಗಳನ್ನು ಮತ್ತೊಮ್ಮೆ ಮುಚ್ಚಲಾಗುವುದು.
* ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್ಡೌನ್ ಮಾಡಲಾಗುವುದು.
* ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು.
* ವಿದ್ಯಾರ್ಥಿಯಲ್ಲಿ ಕೊರೊನಾ ಲಕ್ಷಣ ಕಂಡು ಬಂದರೆ ಶಾಲೆಗೆ ಪ್ರವೇಶ ನೀಡಲಾಗುವುದಿಲ್ಲ.
* ಶಾಲಾ ಕೊಠಡಿಯಲ್ಲಿ ೨೦ ವಿದ್ಯಾರ್ಥಿಗಳಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿದೆ.
* ಶಾಲಾ ಆವರಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ.
* ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಕಟ್ಟುನಿಟ್ಟಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಈಜುಕೊಳಗಳು ಮತ್ತು ಅಸೆಂಬ್ಲಿ ಹಾಲ್ಗಳಂತಹ ಎಲ್ಲಾ ಸಾಮಾನ್ಯ ಪ್ರದೇಶಗಳು ಸದ್ಯಕ್ಕೆ ಮುಚ್ಚಲ್ಪಡುತ್ತವೆ.
* ಶಾಲೆಗೆ ಭೇಟಿ ನೀಡುವ ಪೋಷಕರಿಗೆ ಮತ್ತು ಶಾಲೆಯಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೆ ಲಸಿಕೆ ಹಾಕುವುದು ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
* ಲಸಿಕೆ ಹಾಕದ ಸಿಬ್ಬಂದಿ ಮತ್ತು ಪೋಷಕರನ್ನು ಶಾಲಾ ಆವರಣಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ.
* 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳು ಮನೆಯಿಂದಲೇ ಅಗತ್ಯವಾದ ನೀರು, ಉಪಹಾರವನ್ನು ತರುವಂತೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಅವಶ್ಯಕತೆಗೆ ಅನುಸಾರ ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯಲು ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು.
* ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ, ಆನ್ಲೈನ್ ಅಥವಾ ಪರ್ಯಾಯ ವಿಧಾನದಲ್ಲಿ ಹಾಜರಾಗಬಹುದು. ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳು ಈಗ ಅನುಸರಿಸುತ್ತಿರುವ ಆನ್ಲೈನ್/ ಇತರೆ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬಹುದು.
* ಮಧ್ಯಾಹ್ನ ಊಟದ ವಿರಾಮದ ನಂತರ ಪ್ರೌಢ ಶಾಲೆ ಶಿಕ್ಷಕರು 8ನೇ ತರಗತಿ ವಿದ್ಯಾರ್ಥಿಗಳಿಗೆ ಪರ್ಯಾಯ ವಿಧಾನದಲ್ಲಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳನ್ನು ನಡೆಸಬೇಕು.
ಈ ಜಿಲ್ಲೆಗಳಲ್ಲಿ ಶಾಲೆ ಸದ್ಯಕ್ಕೆ ಶಾಲೆ ಓಪನ್ ಇಲ್ಲ :
ಕೋವಿಡ್ ಪಾಸಿಟಿವ್ ದರವು ಶೇಕಡಾ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ತೆರೆಯಲು ಅನುಮತಿ ನೀಡಲಾಗಿದ್ದು, ಶೇಕಡಾ 2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭದ ಭಾಗ್ಯ ಸದ್ಯಕ್ಕೆ ಇಲ್ಲ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಸೋಮವಾರದಿಂದ ಶಾಲೆ ಆರಂಭ ಇರುವುದಿಲ್ಲ. ಕೇರಳ ಭಾಗದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗಿರುವುದರಿಂದ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕೊವಿಡ್ ಕೇಸ್ಗಳ ಸಂಖ್ಯೆ ಇಳಿಕೆಯಾಗಿಲ್ಲ. ಹೀಗಾಗಿ ಈ ಐದು ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿಕೊಂಡು ಶಾಲೆಯನ್ನು ಆರಂಭಿಸಲಾಗುತ್ತದೆ.