ಪೊಲೀಸ್ ಇಲಾಖೆಯಲ್ಲಿನ ಸಿವಿಲ್, ಕೆಎಸ್ಆರ್ಪಿ, ಸಿಎಆರ್/ಡಿಎಆರ್ ಘಟಕಗಳಿಗೆ ನಡೆಯುವ ಪ್ರತ್ಯೇಕ ನೇಮಕಾತಿ ವ್ಯವಸ್ಥೆ ಬದಲು ಏಕರೂಪ ನೇಮಕಾತಿ ನಡೆಸಲು ಇಲಾಖೆ ಮುಂದಾಗಿದೆ.
ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ನಡುವೆ ಸಮಾನ ಭಾವನೆ ಮೂಡಿಸುವ ಉದ್ದೇಶದಿಂದ ರಾಜ್ಯದಲ್ಲಿ 'ಏಕಗವಾಕ್ಷಿ' ನೇಮಕಾತಿ ವ್ಯವಸ್ಥೆ ಜಾರಿಗೆ ತರಲು ಗಂಭೀರ ಚಿಂತನೆ ನಡೆದಿದೆ.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಇಡೀ ಪೊಲೀಸ್ ಇಲಾಖೆಗೆ ಏಕಗವಾಕ್ಷಿ ವ್ಯವಸ್ಥೆಯಡಿಯಲ್ಲೇ ನೇಮಕಾತಿ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇನ್ನು ಹಳೆಯ ಪದ್ದತಿಯನ್ನೇ ಮುಂದುವರಿಸಲಾಗಿದೆ. ರಾಷ್ಟ್ರೀಯ ಪೊಲೀಸ್ ಆಯೋಗ 1977ರ ಶಿಫಾರಸಿನಂತೆ ನೇಮಕಾತಿ ನಿಯಮ ತಿದ್ದುಪಡಿಗೆ ನಿರ್ಧರಿಸಲಾಗಿದೆ. ಈ ಕುರಿತು ಸಾಧಕ -ಬಾಧಕಗಳನ್ನು ಪರಿಶೀಲಿಸಿ ವರದಿ ನೀಡಲು ಈ ಹಿಂದಿನ ಡಿಜಿಪಿ ಓಂಪ್ರಕಾಶ್ ಅವರು ರಚಿಸಿದ್ದ ಸಮಿತಿ ವರದಿ ಸಿದ್ಧಪಡಿಸಿ ಸಲ್ಲಿಸಿದೆ.
ಏಕಗವಾಕ್ಷಿಯ ಅನುಕೂಲ
ಹಣ, ಸಮಯದ ಉಳಿತಾಯ. ಎಲ್ಲರಿಗೂ ಒಂದೇ ರೀತಿಯ ತರಬೇತಿ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಉದ್ಭವಿಸಲ್ಲ.
ತಾರತಮ್ಯ ಮನೋಭಾವ ದೂರಾಗುತ್ತೆ. ಎಲ್ಲರಿಗೂ ಸಮಾನ ಗೌರವ, ಸಮಾನ ವೇತನ ಕರ್ತವ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ
ಜೇಷ್ಠತೆ ಆಧಾರದ ಮೇಲೆ ವರ್ಗಾವಣೆ ಸಾಧ್ಯ.
ನೆರೆ ರಾಜ್ಯಗಳಲ್ಲಿನ ನೇಮಕಾತಿ ವಿಧಾನ
ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್ಟೆಬಲ್ ಎಂದು ನೇಮಕ ಮಾಡಲಾಗುತ್ತದೆ. ತರಬೇತಿ ಕೊಟ್ಟು ಮೊದಲಿಗೆ ಆರ್ಪಿಗೆ ನಿಯುಕ್ತಿ ಗೊಳಿಸಲಾಗುತ್ತದೆ. ನಂತರ ಜಿಲ್ಲಾ ಮೀಸಲು ಪಡೆಗೆ ವರ್ಗಾವಣೆ ಮಾಡಲಾಗುತ್ತದೆ. ಪೊಲೀಸ್ ಠಾಣೆಗಳಲ್ಲಿ ಹುದ್ದೆ ಖಾಲಿಯಾದರೆ ಅಲ್ಲಿಗೆ ಜಿಲ್ಲಾ ಮೀಸಲು ಪಡೆಯಲ್ಲಿರುವ ಸಿಬ್ಬಂದಿಯನ್ನು ಜೇಷ್ಠತೆ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ. ಎಲ್ಲರಿಗೂ ಒಂದೇ ರೀತಿಯ ತರಬೇತಿ ನೀಡುವುದರಿಂದ ಸಿಬ್ಬಂದಿ ಕೊರತೆ ಸಮಸ್ಯೆ ಕೂಡ ಉದ್ಭವಿಸುವುದಿಲ್ಲ.
ಅಧಿಕಾರಿಗಳ ಮಾತು
ಸಿವಿಲ್ ಪೊಲೀಸ್, ಕೆಎಸ್ಸಾರ್ಪಿ, ಸಿಎಆರ್/ಡಿಎಆರ್ ಘಟಕಗಳಲ್ಲಿ ಇಲಾಖೆಯ ಒಟ್ಟು ಶೇ.98 ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ. ಉಳಿದ ಶೇ.2 ತಾಂತ್ರಿಕ ಘಟಕಗಳಾದ ಬೆರಳಚ್ಚು ಹಾಗೂ ವೈರ್ಲೆಸ್ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಪ್ರತಿ ವಿಭಾಗಕ್ಕೂ ಪ್ರತ್ಯೇಕ ನೇಮಕಾತಿ ನಡೆಯುವ ಹಿನ್ನೆಲೆಯಲ್ಲಿ ಸೇವಾ ಜೇಷ್ಠತೆ ಬೇರೆ ಬೇರೆಯಾಗಿದೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಆಂತರಿಕ ವರ್ಗಾವಣೆ ಇಲ್ಲ. ಕರ್ತವ್ಯ ನಿರ್ವಹಣೆ ಜವಾಬ್ದಾರಿಯೂ ವಿಭಿನ್ನವಾಗಿರುವುದರಿಂದ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಸಹಜವಾಗಿಯೇ ಭೇದಭಾವ ಮೂಡುತ್ತದೆ.
ಒಂದೇ ರೀತಿಯ ನೇಮಕಾತಿ ವ್ಯವಸ್ಥೆ ಜಾರಿಯಾದರೆ ಘಟಕದಿಂದ ಘಟಕಕ್ಕೂ ವರ್ಗಾವಣೆ ಸಾಧ್ಯವಾಗುತ್ತದೆ. ಸರ್ಕಾರದಿಂದ ಅನುಮತಿ ದೊರೆತ ನಂತರ ನಿಯಮ ತಿದ್ದುಪಡಿ ಕಾರ್ಯ ಶುರುವಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.