ಪರೀಕ್ಷೆಗಳ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಹಳೆ ಚಾಳಿಯನ್ನೆ ಮುಂದುವರೆಸಿದೆ.
ವಿಟಿಯುನಲ್ಲಿ ಉಂಟಾಗಿರುವ ಈ ಸಮಸ್ಯೆಗೆ ವಿದ್ಯಾರ್ಥಿಗಳು ಬೇಸರಗೊಂಡಿದ್ದು, ವಿದ್ಯಾರ್ಥಿ ಸಂಘಟನೆಗಳು ಹೋರಟಕ್ಕೆ ಮುಂದಾಗಿವೆ.
ವಿಟಿಯುನ ಮೌಲ್ಯಮಾಪನ ಹಾಗೂ ಮರು ಮೌಲ್ಯಮಾಪನದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಹಿಂದಿನ ಸೆಮಿಸ್ಟರ್ನ (3, 5, 6 ಸೆಮಿಸ್ಟರ್) ಫಲಿತಾಂಶ ಇನ್ನೂ ಪ್ರಕಟಗೊಂಡಿಲ್ಲ. ಮರು ಮೌಲ್ಯಮಾಪನ ಕಾರ್ಯವೂ ಸಮರ್ಪಕವಾಗಿ ನಡೆದಿಲ್ಲ. ಅನೇಕ ವಿದ್ಯಾರ್ಥಿಗಳು ನಿಖರವಾದ ಉತ್ತರ ಬರೆದಿದ್ದರೂ ಅದನ್ನು ತಪ್ಪು ಎಂದು ಪರಿಗಣಿಸಿ ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದರಿಂದ ಪ್ರತಿಭಾನ್ವಿತರು ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದಾರೆ. ಹಲವು ಪ್ರಶ್ನೆಗಳಿಗೆ ಮೌಲ್ಯಮಾಪನವನ್ನೇ ಮಾಡಿಲ್ಲ' ಎಂದು ಪ್ರತಿಭಟನಾಕಾರರು ವಿಟಿಯು ವಿರುದ್ಧ ದೂರಿದ್ದಾರೆ.
'ಆಗಿರುವ ಪರೀಕ್ಷಾ ಲೋಪಗಳನ್ನು ಶುಲ್ಕ ಪಡೆಯದೇ ವಾರದೊಳಗೆ ವಿಟಿಯು ಸರಿಪಡಿಸಬೇಕು. ಇಲ್ಲವಾದರೆ, ಬೃಹತ್ ಪ್ರತಿಭಟನೆ ನಡೆಸಿ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕುತ್ತೇವೆ' ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಎಚ್ಚರಿಸಿದ್ದಾರೆ.
ಇದೇ ವೇಳೆ ವಿಟಿಯು ಶುಲ್ಕ ಹೆಚ್ಚಳದ ಬಗ್ಗೆಯು ಪ್ರತಿಭಟನೆಯಲ್ಲಿ ಪ್ರಸ್ತಾಪಿಸಲಾಯಿತು. ವಿಟಿಯುನ ಎಲ್ಲ ಕೋರ್ಸ್ಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವ ಹಿನ್ನಲೆಯಲ್ಲಿ, ಅವೈಜ್ಞಾನಿಕವಾಗಿ ಶುಲ್ಕವನ್ನು ಏರಿಕೆ ಮಾಡಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿ ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ ಶುಲ್ಕ ವಿಧಿಸಬೇಕು' ಎಂದು ಒತ್ತಾಯಿಸಿದರು.