ಐಐಟಿ-ಜೆಇಇ 2017ರ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ದೇಶದ ಎಲ್ಲಾ ಐಐಟಿಗಳಲ್ಲಿ, ಈ ಸಾಲಿನ ಕೋರ್ಸ್ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸುವುದು ಮತ್ತು ಪ್ರವೇಶ ಪ್ರಕ್ರಿಯೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಅಂಕಗಳ ವಿವಾದ ಬಗೆಹರಿಯುವ ವರೆಗೂ ಐಐಟಿ, ಐಐಐಟಿ ಮತ್ತು ಎನ್ಐಟಿ ಹಾಗೂ ಇತರ ತಾಂತ್ರಿಕ ಶಿಕ್ಷಣ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ನಡೆಸಬಾರದೆಂದು ಶುಕ್ರವಾರ ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ತಡೆ ಏಕೆ?
ಈ ಸಾಲಿನ ಜಂಟಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳಲ್ಲಿ ಕೆಲವು ತಪ್ಪಾಗಿದ್ದವು. ಅದಕ್ಕೆ ಪರಿಹಾರಾತ್ಮಕವಾಗಿ ಪರೀಕ್ಷೆ ಬರೆದ ಎಲ್ಲಾ ಪರೀಕ್ಷಾರ್ಥಿಗಳಿಗೂ ಹೆಚ್ಚುವರಿ ಅಂಕ ನೀಡಲಾಗಿತ್ತು. ಇದರ ವಿರುದ್ಧ ಕೆಲವು ಪರೀಕ್ಷಾರ್ಥಿಗಳು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎ.ಎಂ. ಖಾನ್ವಿಲ್ಕರ್ ಅವರಿದ್ದ ಪೀಠವು, 'ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶ ಬರುವವರೆಗೂ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆ ನಡೆಸಬೇಡಿ' ಎಂದು ಆದೇಶಿಸಿದೆ.
ಪ್ರವೇಶ ಪರೀಕ್ಷೆಯಲ್ಲಿ ಕೇಳಲಾದ ತಪ್ಪು ಪ್ರಶ್ನೆಗಳಿಗೆ ಐಐಟಿಗಳು ಎಲ್ಲ ವಿದ್ಯಾರ್ಥಿಗಳೂ ಬೋನಸ್; ಅಂಕ ನೀಡಿದ್ದವು. ಈಗಾಗಲೇ ಪ್ರವೇಶ ನೀಡಲಾದ 33,000 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಹೀಗಾಗಿ ಬೋನಸ್ ಅಂಕಗಳ ವಿಷಯ ಇತ್ಯರ್ಥವಾದ ಬಳಿಕವೇ ಪ್ರವೇಶ ಪ್ರಕ್ರಿಯೆ ಮುಂದುವರಿಸಬೇಕು' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
2005 ರಲ್ಲೂ ಇದೇ ಸಮಸ್ಯೆ
2005ರಲ್ಲೂ ಇಂತಹದೇ ಪರಿಸ್ಥಿತಿ ಉದ್ಭವಿಸಿದಾಗ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೇ ಆಧರಿಸಿ ಈ ಬಾರಿಯೂ ತೀರ್ಪು ನೀಡುವ ಸಾಧ್ಯತೆಯಿದೆ. ಆಗ ತಪ್ಪು ಪ್ರಶ್ನೆಗಳಿಗೆ ಉತ್ತರಿಸಿದವರಿಗೆ ಮಾತ್ರ ಬೋನಸ್ ಅಂಕ ನೀಡಬಹುದೆಂದು ಕೋರ್ಟ್ ತೀರ್ಪು ನೀಡಿತ್ತು.
ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದರೆ ಅದಕ್ಕೆ ಬಹಳ ಸಮಯ ಬೇಕಾಗುತ್ತಿದೆ ಎಂದು ಐಐಟಿಗಳ ವಕೀಲರು ಕೋರ್ಟಿಗೆ ತಿಳಿಸಿದರು. '2.5 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಪ್ರಾಯೋಗಿಕವಲ್ಲ. ಅದರ ಬದಲು ಬೋನಸ್ ಅಂಕಗಳನ್ನು ನೀಡುವುದೇ ಪ್ರಯೋಗಿಕ ಪರಿಹಾರ ಎಂದ ಐಐಟು ವಕೀಲರು ತಿಳಿಸಿದ್ದಾರೆ.