ಶಾಲಾ ಮಕ್ಕಳಿಗೆ ಅಪಘಾತ ವಿಮೆ ಮಾಡಿಸಿಕೊಡಲು ತಮಿಳುನಾಡು ಸರಕಾರ ಮುಂದಾಗಿದೆ. ಈ ಯೋಜನೆ ದೇಶದಲ್ಲಿಯೇ ಪ್ರಪ್ರಥಮವಾಗಿದ್ದು, ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ತಮಿಳುನಾಡು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ಕೆ.ಎ.ಸೆಂಗೊಟ್ಟೈಯನ್ ತಿಳಿಸಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ರಸ್ತೆ ಅಪಘಾತಗಳು ತಮಿಳುನಾಡಿನಲ್ಲಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಘೋಷಿಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಎಡಪಾಡಿ ಕೆ ಪಳನಿಸ್ವಾಮಿ ಅವರ ಜತೆ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಯೋಜನೆಯನ್ನು ಜಾರಿಗೊಳಿಸುತ್ತೇವೆ' ಎಂದು ಸಚಿವರು ಭರವಸೆ ನೀಡಿದ್ದಾರೆ.

ಶಾಲಾ ಕಾಲೇಜುಗಳಂತಹ ಶೈಕ್ಷಣಿಕ ಸಂಸ್ಥೆಗಳು ಸಮೀಪದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ತಮಿಳುನಾಡು ಅಗ್ರ ಸ್ಥಾನದಲ್ಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತಿದೆ. 2016ರಲ್ಲಿ 5,010 ರಸ್ತೆ ಅಪಘಾತ ಪ್ರಕರಣಗಳು ನಡೆದಿದ್ದು, 1,207 ಸಾವು ಮತ್ತು 6,233 ಜನ ಗಾಯಗೊಂಡಿದ್ದರು.
ತಮಿಳುನಾಡಿನಲ್ಲಿ ಸುಮಾರು 1.4 ಕೋಟಿ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ನೂತನ ಯೋಜನೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆಯೋ ಅಥವಾ ಅನುದಾನಿತ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಅನ್ವಯಿಸುತ್ತದೆಯೋ ಎನ್ನುವುದರ ಕುರಿತು ಸಚಿವರು ಸ್ಪಷ್ಟಪಡಿಸಿಲ್ಲ.
ಒಂದು ವೇಳೆ ಈ ಯೋಜನೆ ಜಾರಿಯಾದರೆ ಬಹಳಷ್ಟು ಸಹಕಾರಿಯಾಗಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಅಲ್ಲದೆ ಇತರೆ ರಾಜ್ಯಗಳು ಕೂಡ ಇಂತಹ ಯೋಜನೆಗಳನ್ನು ಜಾರಿಗೊಳಿಸಲು ಪ್ರೇರಣೆಯಾಗಲಿದೆ.


Click it and Unblock the Notifications











