ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂರು ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯದ ಗಮನ ಸೆಳೆದಿದ್ದರು. ಆದರೆ ಈಗ ಮೂರರ ಸಂಖ್ಯೆ ನಾಲ್ಕಕ್ಕೇರಿದೆ. ಹೌದು 625 ಅಂಕಗಳಿಸುವುದರ ಮೂಲಕ ಪ್ರಥಮರ ಪಟ್ಟಿಯಲ್ಲಿ ಗೋಪಾಲಗೌಡ ಬಡಾವಣೆಯ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ಸುಭಾಷಿಣಿ ಸೇರಿದ್ದಾರೆ.
ಸುಭಾಷಿಣಿಗೆ ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಲಭಿಸಿವೆ. ಈ ಹಿಂದೆ ಪ್ರಕಟವಾಗಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅವರು 622 ಅಂಕ ಪಡೆದಿದ್ದರು. ಐದು ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದ ಸುಭಾಷಿಣಿ ಕನ್ನಡ ವಿಷಯದಲ್ಲಿ ಮಾತ್ರ 125 ಅಂಕಗಳಿಗೆ 122 ಅಂಕ ಪಡೆದಿದ್ದರು. ಮರು ಮೌಲ್ಯಮಾಪನದಲ್ಲಿ ಮತ್ತೆ 3 ಅಂಕಗಳು ಹೆಚ್ಚು ಬಂದಿವೆ.
ಸುಭಾಷಿಣಿ ಕೋಲಾರದ ಶಾಂತಿಪುರದ ಕೆ. ಶ್ರೀನಿವಾಸಲು ರೆಡ್ಡಿ-ಸುಜಾತಾ ದಂಪತಿ ಪುತ್ರಿ. ಏಳನೇ ತರಗತಿಯವರೆಗೂ ತೆಲುಗು ಮಾಧ್ಯಮದಲ್ಲಿ ಓದಿದ್ದರು. ಪ್ರೌಢ ಶಿಕ್ಷಣಕ್ಕಾಗಿ ರಾಮಕೃಷ್ಣ ವಿದ್ಯಾನಿಕೇತನಕ್ಕೆ ಸೇರಿದಾಗ ಕನ್ನಡ ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದರು. ಈಗ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ.
'ಕೊನೆಗೂ ನಾನು ನಿರೀಕ್ಷಿಸಿದಂತೆಯೇ ಫಲಿತಾಂಶ ಬಂದಿದೆ. ಮೌಲ್ಯಮಾಪನದಲ್ಲಿ ವ್ಯತ್ಯಾಸವಾಗಿದೆ ಎಂದು ಆಗಲೇ ಹೇಳಿದ್ದೆ. ಅದು ನಿಜವಾಗಿದೆ. ಮುಂದೆ ಚೆನ್ನಾಗಿ ಓದಿ ವೈದ್ಯೆಯಾಗುವೆ' ಎಂದು ಸುಭಾಷಿಣಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಮೊದಲೇ ಈ ಫಲಿತಾಂಶ ಸಿಕ್ಕಿದ್ದರೆ ತುಂಬಾ ಖುಷಿ ಪಡುತ್ತಿದ್ದಳು. ತಡವಾಗಿಯಾದರೂ ಅವಳ ಪ್ರತಿಭೆಗೆ ತಕ್ಕ ಫಲ ಸಿಕ್ಕಿದೆ' ಎಂದು ಪೋಷಕರು ಮತ್ತು ವಿದ್ಯಾನಿಕೇತನದ ಶಾಲಾ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ನಾರಾಯಣಗುರು ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯ ಕಲಿಯುತ್ತಿದ್ದಾರೆ.