ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್ಒಯು) ಪ್ರಸಕ್ತ ಶೈಕ್ಷಣಿಕ ಸಾಲಿನ ತಾಂತ್ರಿಕೇತರ ಕೋರ್ಸ್ ಗಳಿಗೆ ಮಾನ್ಯತೆ ನೀಡುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ಹೈಕೋರ್ಟ್ ನೀಡಿದ್ದ ಆದೇಶದ ಗಡುವು ಪೂರ್ಣಗೊಂಡಿದೆ.
ಕೆಎಸ್ಒಯು: 96000 ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಶಿಫಾರಸು
ಮಂಗಳವಾರಕ್ಕೆ ಈ ಗಡುವು ಮುಕ್ತಾಯವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಈ ಕುರಿತು ಯುಜಿಸಿಯಿಂದ ಆದೇಶ ಬರುವ ನಿರೀಕ್ಷೆ ಇದೆ.
ಕೆಎಸ್ಒಯುನ 2017-18 ನೇ ಸಾಲಿನ ತಾಂತ್ರಿಕೇತರ ಕೋರ್ಸ್ ಗಳಿಗೆ ಎರಡು ವಾರಗಳಲ್ಲಿ ಮಾನ್ಯತೆ ನೀಡುವಂತೆ ಯುಜಿಸಿಗೆ ಹೈಕೋರ್ಟ್ ಡಿ.12 ರಂದು ನಿರ್ದೇಶಿಸಿತ್ತು.
ಯುಜಿಸಿಗೆ ಹೈಕೋರ್ಟ್ ನೀಡಿದ್ದ ಎರಡು ವಾರದ ಗಡುವು ಮಂಗಳವಾರ ಪೂರ್ಣಗೊಂಡಿದೆ. ಆದರೆ, ಈವರೆಗೆ ಮಾನ್ಯತೆ ನೀಡುವ ಕುರಿತು ಯುಜಿಸಿಯಿಂದ ಇನ್ನು ಯಾವುದೇ ಮಾಹಿತಿ ಬಂದಿಲ್ಲ ಎಂದು ಮುಕ್ತ ವಿವಿಯ ಆಡಳಿತ ಕುಲಸಚಿವರಾದಡಾ.ಕೆ.ಜಿ ಚಂದ್ರಶೇಖರ್ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶ ಪತ್ರವನ್ನು ಯುಜಿಸಿಗೆ ರವಾನಿಸಲಾಗಿದ್ದು, ಮುಕ್ತ ವಿವಿಯ ಆಡಳಿತ ಕುಲಸಚಿವರಾದ ಡಾ.ಚಂದ್ರಶೇಖರ್ ದೆಹಲಿಯ ಯುಜಿಸಿ ಕಛೇರಿಗೆ ಭೇಟಿ ನೀಡಿ ಈ ಬಗ್ಗೆ ಸಮಾಲೋಜಿಸಿದ್ದಾರೆ.
ಇನ್ನು 2-3 ದಿನಗಳಲ್ಲಿ ಯುಜಿಸಿ ಯಿಂದ ಏನಾದರು ಪ್ರತಿಕ್ರಿಯೆ ಬರಬಹುದೆಂಬ ನಿರೀಕ್ಷೆ ಇದ್ದು, ವಿವಿ ಯ ಅಧಿಕಾರಿಗಳು ಯುಜಿಸಿ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
ಒಂದು ವೇಳೆ ಯುಜಿಸಿಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದೆರೆ ಮತ್ತೆ ಹೈಕೋರ್ಟ್ ಮೆಟ್ಟಿಲೇರಲು ವಿವಿಯು ಚಿಂತಿಸಿದೆ. ಸದ್ಯ ಜನವರಿ 2 ರವರೆಗೂ ಹೈಕೋರ್ಟ್ ರಜೆ ಇದ್ದು, ಅಷ್ಟರೊಳಗೆ ಯುಜಿಸಿಯಿಂದ ಪತ್ರ ಬರಬಹುದೆಂಬ ನಿರೀಕ್ಷೆ ಇದೆ.
ಯುಜಿಸಿ ನಿಯಮ ಉಲ್ಲಂಘನೆಯಿಂದ ಮುಕ್ತ ವಿವಿಯ ಮಾನ್ಯತೆ ರದ್ದಾಗಿದ್ದು, ಈ ಕುರಿತು 2015ರ ಜೂನ್ 16ರಂದು ಯುಜಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿತ್ತು. ಯುಜಿಸಿ 2013ನೇ ಸಾಲಿನಿಂದ ರದ್ದುಪಡಿಸಿತ್ತು. ಅಲ್ಲಿಂದ ಇಲ್ಲಿವರೆಗೂ ವಿ.ವಿಗೆ ಮಾನ್ಯತೆ ಸಿಕ್ಕಿಲ್ಲ.