ಹಗರಗಳಿಂದ ಹೈರಾಣಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅವುಗಳಿಂದ ಮುಕ್ತಿ ಪಡೆಯಲು ವಾಸ್ತುಶಾಸ್ತ್ರದ ಮೊರೆ ಹೋಗಿದೆ.
ಕೆಎಸ್ಒಯು ಮಾನ್ಯತೆ ಕಳೆದುಕೊಳ್ಳಲು ಹೊಸ ಕಟ್ಟಡದ ವಾಸ್ತು ದೋಷ ಕಾರಣ ಎಂದು ಹಿರಿಯ ಅಧಿಕಾರಿಗಳು ಕಚೇರಿ ಅದಲು ಬದಲು ಮಾಡಿ ಇದೀಗ ಅಪಹಾಸ್ಯಕ್ಕೀಡಾಗಿರುವ ಘಟನೆ ನಡೆದಿದೆ.

ಕೋಟ್ಯಾಂತರ ರೂ ಖರ್ಚು ಮಾಡಿ ಕಟ್ಟಡಗಳನ್ನ ಕಟ್ಟಿಸಲಾಗಿದ್ದು, ಇದೀಗ ವಿವಿಯ ಹಿರಿಯ ಅಧಿಕಾರಿಗಳು ವಾಸ್ತು ದೋಷ ಎಂದು ಕಚೇರಿಯನ್ನ ಬದಲಿಸಿದ್ದಾರೆ.
ವಾಸ್ತು ಮೊರೆ ಹೋದ ಕುಲಪತಿ ಪ್ರೊ.ಶಿವಲಿಂಗಯ್ಯ,ಕುಲಸಚಿವ ಡಾ.ಚಂದ್ರಶೇಖರ್ ಕಚೇರಿ ಅದಲು ಬದಲು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಮಾನ್ಯತೆ ನೀಡಲು ಮೀನಾಮೇಷ ಎಣಿಸುತ್ತಿರುವ ಯುಜಿಸಿ ವಿರುದ್ದ ಕೆಎಸ್ಒಯು ಅಧಿಕಾರಿಗಳು ಸಿಡಿದೆದ್ದಿದ್ದಾರೆ. ಮಾತಿಗೆ ಬಗ್ಗದ ಯುಜಿಸಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿರುವ ಕೆಎಸ್ಒಯು ಅಧಿಕಾರಿಗಳು, ಹೈಕೋರ್ಟ್ ಅಲ್ಲಿ ಯುಜಿಸಿ ವಿರುದ್ದ ದಾವೆ ಹೂಡಿದ್ದಾರೆ.
ಕಳೆದ ಫೆಬ್ರವರಿಯಲ್ಲೇ ಮಾನ್ಯತೆಗೆ ಅರ್ಜಿ ಸಲ್ಲಿಸಿದ್ದರೂ ಯಾಕೆ ಮಾನ್ಯತೆ ನೀಡ್ತಿಲ್ಲ ಎಂದು ಪ್ರಶ್ನಿಸಿ ದಾವೆ ಹೂಡಿದ್ದಾರೆ. ರಿಟ್ ಆಫ್ ಮ್ಯಾಂಡಮಸ್ ಮೂಲಕ ಅರ್ಜಿ ಸಲ್ಲಿಕೆಯಾಗಿದ್ದು, ಮಂಗಳವಾರ ಈ ಅರ್ಜಿ ವಿಚಾರಣೆಗೆ ಬರಲಿದೆ.
ಕಳೆದ ಮೂರು ವರ್ಷಗಳಿಂದ ಕೆಎಸ್ಒಯು ಮಾನ್ಯತೆ ಕಳೆದುಕೊಂಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಈ ವರ್ಷವಾದರೂ ಮಾನ್ಯತೆ ಪಡೆಯಲು ಕೆಎಸ್ಒಯು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ.


Click it and Unblock the Notifications











