ನಗದು ರಹಿತ ಭಾರತಕ್ಕೆ ಚಾಲನೆ ದೊರೆತಾಗಿನಿಂದ ದೇಶದಲ್ಲಿ ಹಲವು ಬದಲಾವಣೆಗಳು ಆಗಿವೆ. ಈಗ ಕಾಲೇಜುಗಳ ಸರದಿ, ಶೈಕ್ಷಣಿಕ ವಲಯವನ್ನು ಸ್ವಚ್ಛಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಕಾಲೇಜು ಮತ್ತು ವಿವಿಗಳು ನಗದು ರಹಿತವಾಗಲಿವೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದೇಶದ ಎಲ್ಲ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ನಗದು ರೂಪದಲ್ಲಿ ಶುಲ್ಕವನ್ನು ಪಡೆಯದಂತೆ ನಿರ್ದೇಶನ ನೀಡುವಂತೆ ಕೇಂದ್ರೀಯ ಧನ ಸಹಾಯ ಆಯೋಗಕ್ಕೆ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದೆ.
ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮಾರಾಟಗಾರನ ಪಾವತಿಯ ವೇತನವನ್ನೂ ಡಿಜಿಟಲ್ ರೂಪದಲ್ಲಿ ಪಾವತಿಸಬೇಕು ಎಂದು ತಿಳಿಸಲಾಗಿದೆ.
ವಸತಿ ನಿಲಯಗಳಲ್ಲಿ ಸಿಗುವ ಎಲ್ಲ ಸೇವೆಗಳಿಗೆ ಡಿಜಿಟಲ್ ಮೂಲಕ ಹಣವನ್ನು ಪಾವತಿ ಮಾಡಬೇಕು. ಇದಕ್ಕಾಗಿ ಭೀಮ್ ಅಪ್ಲಿಕೇಶನ್ ಬಳಸಬೇಕು. ಅಷ್ಟೇ ಅಲ್ಲದೇ ಕ್ಯಾಂಪಸ್ ಬಳಿ ಇರುವ ವ್ಯಾಪಾರಿ ಸಂಸ್ಥೆಗಳು ಡಿಜಿಟಲ್ ರೂಪದಲ್ಲಿ ವ್ಯವಹಾರ ನಡೆಸಬೇಕು ಎಂದು ಹೇಳಿದೆ.
ಈ ವಿಚಾರದ ಬಗ್ಗೆ ವಿವಿಗಳಿಗೆ ಇನ್ನು ಯಾವ ಕಡೆಗಳಲ್ಲಿ ಡಿಜಿಟಲ್ ವ್ಯವಹಾರ ನಡೆಸಬಹುದು ಎನ್ನುವುದರ ಬಗ್ಗೆ ಸಲಹೆ ನೀಡಿ ಎಂದು ಯುಜಿಸಿ ತಿಳಿಸಿದೆ. ಇದರ ಜೊತೆ ಇದು ಹೇಗೆ ಜಾರಿಯಾಗಿದೆ ಎನ್ನುವುದನ್ನು ಯುಜಿಸಿಗೆ ತಿಳಿಸಲು ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸೂಚಿಸಿದೆ
ವಿಸಾಕ ಯೋಜನೆ
ಅಧಿಕ ಮುಖಬೆಲೆಯ ನೋಟುಗಳ ರದ್ದತಿ ನಂತರ ಡಿಜಿಟಲ್ ಪಾವತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ 'ವಿತ್ತೀಯ ಸಾಕ್ಷರತಾ ಅಭಿಯಾನಕ್ಕೆ'(ವಿಸಾಕ) ಡಿ.1ರಂದೇ ಚಾಲನೆ ನೀಡಲಾಗಿತ್ತು. ಇದರಲ್ಲಿ ನಗದುರಹಿತ ಕ್ಯಾಂಪಸ್ ಕೂಡ ಸೇರಿತ್ತು.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಶುಲ್ಕ ಪಾವತಿ ರೂಪ ಬದಲಾಗಬೇಕು ಎಂದು ಸೂಚಿಸಿದ್ದರು.
ವಿಸಾಕ ಅಭಿಯಾನದಲ್ಲಿ ವಿಶ್ವವಿದ್ಯಾಲಯ, ಕಾಲೇಜುಗಳ ವಿದ್ಯಾರ್ಥಿಗಳು ಎನ್ಎಸ್ಎಸ್, ಎಸ್ಸಿಸಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬಹುದು. ಅಭಿಯಾನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಕುಟುಂಬ, ಸುತ್ತಮುತ್ತಲ ಮನೆಗಳ ಸದಸ್ಯರಿಗೆ ಡಿಜಿಟಲ್ ಪಾವತಿ ವ್ಯವಹಾರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದೆ.