ಭಾರತ ಕಂಡ ಶ್ರೇಷ್ಠ ಗಾಯಕರಲ್ಲಿ ಲತಾ ಮಂಗೇಶ್ಕರ್ ಕೂಡ ಒಬ್ಬರು. ಅವರು ತಮ್ಮ ಸುಮಧುರ ಕಂಠದಿಂದ ತಲೆಮಾರುಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. 35 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್ ಬಹಳ ಹಿಂದಿನಿಂದಲೂ ದೇಶಾದ್ಯಂತ ಮನೆಮಾತಾಗಿದ್ದಾರೆ.

ದಿ ನೈಟಿಂಗೇಲ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿ ಪಡೆದಿರುವ ಲತಾ ಮಂಗೇಶ್ಕರ್ ತಮ್ಮ 13ನೇ ವರ್ಷ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಬಾಲ್ಯದಿಂದ ಇಲ್ಲಿಯವರೆಗಿನ ಅವರ ವೃತ್ತಿಜೀವನದ ಪಥವು ಸಾಕಷ್ಟು ಸ್ಪೂರ್ತಿದಾಯಕವಾಗಿದೆ.
ಭಾರತೀಯ ಸಂಗೀತ ಉದ್ಯಮವು ಯುಗಗಳಿಂದಲೂ ಸಮೃದ್ಧ ಗಾಯಕರಿಗೆ ಜನ್ಮ ನೀಡಿದೆ ಆದರೆ ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಯಾವಾಗಲೂ ನಿತ್ಯಹರಿದ್ವರ್ಣವೆಂದು ಪರಿಗಣಿಸಲು ಒಂದು ಕಾರಣವಿದೆ. ಸೆಪ್ಟೆಂಬರ್ 28, 1929 ರಂದು ಜನಿಸಿದ ಲತಾ ಮಂಗೇಶ್ಕರ್ ಅವರು ವಿವಿಧ ಭಾಷೆಗಳಲ್ಲಿ ವ್ಯಾಪಿಸಿರುವ ಸಾವಿರಾರು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಅವರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಮತ್ತು ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತಾರೆ.
ಅವರು 1942 ರಲ್ಲಿ ಗಜಾಭಾವು ಎಂಬ ಮರಾಠಿ ಚಲನಚಿತ್ರದಲ್ಲಿ 'ಮಾತಾ ಏಕ್ ಸಪೂತ್ ಕಿ ದುನಿಯಾ ಬದಲ್ ದೇ ತು' ಹಾಡಿನ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರೂ ಕೂಡ ಅವರಿಗೆ ಬ್ರೇಕ್ ನೀಡಿದ್ದು ಮಜ್ಬೂರ್ ಚಲನಚಿತ್ರದ 'ದಿಲ್ ಮೇರಾ ತೋಡಾ, ಮುಜೆ ಕಹೀಂ ಕಾ ನಾ ಛೋರಾ' ಗೀತೆ. 1948ರಲ್ಲಿ ಅಲ್ಲಿಂದ ಲತಾ ಮತ್ತೆ ಹಿಂತಿರುಗಿ ನೋಡಬೇಕಾದ ಪ್ರಸಂಗ ಬರಲೇ ಇಲ್ಲ ಕಾರಣ ಅರ್ಧ ಶತಮಾನದೊಳಗೆ ಅವರು ಭಾರತದ ನೈಟಿಂಗೇಲ್ ಆದರು. ಈ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಅವರ ಬಗ್ಗೆ ಕೆಲವು ವಿಸ್ಮಯವಾದ ಮತ್ತು ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡಿದ್ದೇವೆ ಓದಿ ತಿಳಿಯಿರಿ.
ಲತಾ ಮಂಗೇಶ್ಕರ್ ಕುರಿತ ಆಸಕ್ತಿದಾಯಕ ಸಂಗತಿಗಳು :
* ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಮೊದಲು ಹೇಮಾ ಎಂದು ಹೆಸರಿಸಲಾಯಿತು ಆದರೆ ಆಕೆಯ ತಂದೆ ದೀನಾನಾಥ್ ಮಂಗೇಶ್ಕರ್ ಅವರ ನಾಟಕದ ಲತಿಕಾ ಪಾತ್ರವನ್ನು ಆಧರಿಸಿ ಲತಾ ಎಂದು ಬದಲಾಯಿಸಲಾಯಿತು.
* ಹೆಸರಾಂತ ನಿರ್ಮಾಪಕರಾದ ಶಶಿಧರ್ ಮುಖರ್ಜಿ ಅವರು ಈ ಹಿಂದೆ ಲತಾ ಮಂಗೇಶ್ಕರ್ ಅವರ ಧ್ವನಿಯನ್ನು 'ತುಂಬಾ ತೆಳ್ಳಗಿದೆ' ಎಂದು ತಿರಸ್ಕರಿಸಿದ್ದರು.
* ಲತಾ ಮಂಗೇಶ್ಕರ್ ಅವರು ಆರಂಭದಲ್ಲಿ ಆ ಕಾಲದ ಪ್ರಸಿದ್ಧ ಹಿನ್ನೆಲೆ ಗಾಯಕಿ ಮತ್ತು ನಟಿ ನೂರ್ ಜೆಹಾನ್ ಅವರ ಧ್ವನಿಯನ್ನು ಅನುಕರಿಸುತ್ತಿದ್ದರು.
* ಲತಾ ಮಂಗೇಶ್ಕರ್ ಅವರ ಪ್ರತಿಭಟನೆಯ ನಂತರ 1959 ರಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ವರ್ಗವನ್ನು ಪರಿಚಯಿಸಲಾಯಿತು.
* ಜನವರಿ 26,1963 ರಂದು ಲತಾ ಮಂಗೇಶ್ಕರ್ ಅವರು 'ಏ ಮೇರೆ ವತನ್ ಕೆ ಲೋಗೋ' ಹಾಡನ್ನು ಹಾಡಿದಾಗ ಅದನ್ನು ಕೇಳಿ ಪಂಡಿತ್ ಜವಾಹರಲಾಲ್ ನೆಹರು ಅವರು ಕಣ್ಣೀರು ಹಾಕಿದ್ದರು. ಈ ಹಾಡನ್ನು 1962ರ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರಿಗೆ ಅರ್ಪಿಸಲಾಯಿತು.
* ಏ ಮೇರೆ ವತನ್ ಕೆ ಲೋಗೋ ಹಾಡು ಮೂಲತಃ ಯುಗಳ ಗೀತೆಯಾಗಿರಬೇಕಿತ್ತು ಮತ್ತು ಇಲ್ಲಿ ಆಸಕ್ತಿದಾಯಕ ಭಾಗವೆಂದರೆ ಇದನ್ನು ಲತಾ ಮಂಗೇಶ್ಕರ್ ಮತ್ತು ಅವರ ಸಹೋದರಿ ಆಶಾ ಭೋಂಸ್ಲೆ ಹಾಡಬೇಕಿತ್ತು. ಆದರೆ ಅದನ್ನು ಏಕಾಂಗಿಯಾಗಿ ಧ್ವನಿಮುದ್ರಿಸಲು ಲತಾ ಅವರು ಒತ್ತಾಯಿಸಿದ ಕಾರಣಕ್ಕೆ ಅವರೊಬ್ಬರೇ ಗೀತೆಯನ್ನು ಹಾಡಿದರು.
* ಲತಾ ಮಂಗೇಶ್ಕರ್ ಅವರು ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ (1974) ಪ್ರದರ್ಶನ ನೀಡಿದ ಮೊದಲ ಭಾರತೀಯ ಗಾಯಕಿ.
* ರಾಜ್ ಕಪೂರ್ ಅವರ ಮೇರುಕೃತಿ ಸತ್ಯಂ ಶಿವಂ ಸುಂದರಂ (1978) ಲತಾ ಮಂಗೇಶ್ಕರ್ ಅವರ ಜೀವನದಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆಯೂ ಅವರಿಗಿತ್ತು.
* ಲತಾ ಮಂಗೇಶ್ಕರ್ ಅವರಿಗೆ ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಮಹಾರಾಷ್ಟ್ರ ಭೂಷಣ ಪ್ರಶಸ್ತಿ, NTR ರಾಷ್ಟ್ರೀಯ ಪ್ರಶಸ್ತಿ, ಭಾರತ ರತ್ನ, ANR ರಾಷ್ಟ್ರೀಯ ಪ್ರಶಸ್ತಿ ಮತ್ತು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಕೆಲವು ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.


Click it and Unblock the Notifications











