ಪುರಾಣಗಳ ಪ್ರಕಾರ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ಜನಿಸಿದನು. ಆತನನ್ನು ಪೌರಾಣಿಕ ಕಥೆಗಳಲ್ಲಿ ದೇವರ-ಮಗು, ಕುಚೇಷ್ಟೆ, ಆದರ್ಶ ಪ್ರೇಮಿ ಮತ್ತು ದೈವಿಕ ನಾಯಕನನ್ನಾಗಿ ಚಿತ್ರಿಸಲಾಗಿದೆ. ಮಹಾಭಾರತವನ್ನು ಓದಿದ ಯಾರಿಗಾದರೂ ಶ್ರೀಕೃಷ್ಣನ ವ್ಯಕ್ತಿತ್ವ ಎಂತಹದ್ದು ಎಂದು ಅರಿವಾಗದೇ ಇರದು. ನಾವಿಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೃಷ್ಣನ ಬದುಕಿನ ಸಾರದಿಂದ ವಿದ್ಯಾರ್ಥಿಗಳು ಕಲಿಯಲೇಬೇಕಾದ ಪಾಠಗಳನ್ನು ಇಲ್ಲಿ ನೀಡಿದ್ದೇವೆ. ವಿದ್ಯಾರ್ಥಿಗಳು ಈ ಅಂಶಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಕೃಷ್ಣನಂತೆ ಒಬ್ಬ ಮಹಾನ್ ವ್ಯಕ್ತಿಯಾಗಿ ಪರಿಣಮಿಸಬಹುದು ಅಥವಾ ನಿಮ್ಮ ಜೀವನದಲ್ಲೂ ಅನೇಕ ಬದಲಾವಣೆಗಳನ್ನು ಕಾಣಬಹುದು.
ಉದಾರವಾದ ಮನೋಭಾವ ಇರಲಿ :
ಶ್ರೀಕೃಷ್ಣನ ಆಪ್ತ ಗೆಳೆಯ ಸುದಾಮನು ಕಡುಬಡತನದಿಂದ ಬಂದವನು ಆತ ತನ್ನ ಸ್ನೇಹಿತನಿಗೆ ಒಂದು ಹಿಡಿಯಷ್ಟು ಅಕ್ಕಿ ನೀಡಿದನು. ಆಗ ಕೃಷ್ಣ ಯಾವುದೇ ತಾತ್ಸಾರ ಮನೋಭಾವವಿಲ್ಲದೆ ಅದನ್ನು ಉಡುಗೊರೆಯಾಗಿ ಸ್ವೀಕರಿಸಿದನು. ಅಂದು ಸುದಾಮನು ತನ್ನ ಮನೆಗೆ ಹಿಂದಿರುಗಿದಾಗ ಮನೆ ತುಂಬೆಲ್ಲಾ ಚಿನ್ನ ಮತ್ತು ಇತರೆ ಅಮೂಲ್ಯ ವಸ್ತುಗಳಿಂದ ತುಂಬಿ ಹೋಗಿತ್ತು, ಅದನ್ನು ಕಂಡು ಸುದಾಮನು ಆಶ್ಚರ್ಯಚಕಿತನಾದನು. ಇದರಿಂದ ನೀವು ತಿಳಿಯಬೇಕಾದುದ್ದೇನೆಂದರೆ ಕೃಷ್ಣನು ಹೃದಯದಿಂದ ಎಷ್ಟು ಶ್ರೀಮಂತನಾಗಿದ್ದನು ಮತ್ತು ಆತನ ಉದಾರ ಮನೋಭಾವ ಎಂತಹದ್ದು ಎಂದು. ಈ ರೀತಿಯಾಗಿ ಕೃಷ್ಣನು ಸುದಾಮನಿಗೆ ಧನ್ಯವಾದ ತಿಳಿಸಿದ್ದನು.
ಎಲ್ಲರನ್ನೂ ಸಮಾನವಾಗಿ ನೋಡಿ :
ಕೃಷ್ಣ ಹುಟ್ಟಿದ್ದು ಒಂದು ಹಳ್ಳಿಯಲ್ಲಿ, ಅಲ್ಲಿ ವಿವಿಧ ಹಿನ್ನೆಲೆಯ ಅನೇಕ ಸ್ನೇಹಿತರನ್ನು ಆತ ಹೊಂದಿದ್ದನು. ಕೃಷ್ಣ ಎಂದಿಗೂ ಯಾರೊಂದಿಗೂ ಯಾವುದೇ ರೀತಿಯ ತಾರತಮ್ಯ ಮಾಡಲಿಲ್ಲ ಹಾಗಾಗಿ ಎಲ್ಲರೂ ಅವನನ್ನು ಸದಾ ದೇವರ ಒಂದು ಸೃಷ್ಟಿ ಎಂಬಂತೆ ಕಾಣುತ್ತಿದ್ದರು. ಕೃಷ್ಣ ಮನುಷ್ಯರೊಂದಿಗೆ ಮಾತ್ರವಲ್ಲ ಪ್ರಾಣಿಗಳನ್ನು ಕೂಡ ಅತ್ಯಂತ ಕಾಳಜಿಯಿಂದ ನೋಡುತ್ತಿದ್ದನು.
ವಿದ್ಯಾರ್ಥಿಗಳು ಕೂಡ ತಮ್ಮ ಬದುಕಿನಲ್ಲಿ ಯಾರೊಂದಿಗೂ ತಾರತಾಮ್ಯ ಮಾಡುವುದು ಬೇಡ. ಬದುಕಿನುದ್ದಕ್ಕೂ ಪ್ರೀತಿ ಹಂಚಿ ಜೊತೆಗೆ ಎಲ್ಲರನ್ನು ಸಮಾನವಾಗಿ ನೋಡುವುದನ್ನು ಕಲಿಯಿರಿ.
ಶಾಂತ ಸ್ವಭಾವದಿಂದ ವರ್ತಿಸಿ :
ಶ್ರೀ ಕೃಷ್ಣ ಯಾವಾಗಲೂ ಎಲ್ಲರೊಂದಿಗೂ ಬೆರೆಯುವ ವ್ಯಕ್ತಿ, ಸದಾ ಸ್ನೇಹಿತರೊಂದಿಗೆ ಕಾಲಕಳೆಯುತ್ತಾ ಹಾಸ್ಯ ಮಾಡುತ್ತಾ ತುಂಬಾನೆ ಸಂತೋಷದಿಂದಿರುತ್ತಿದ್ದನು. ಆತ ಎಲ್ಲಿ ಹೇಗಿರಬೇಕು ಮತ್ತು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತಿದ್ದನು. ಎಂತಹ ಸಂದರ್ಭದಲ್ಲಿಯೂ ಕೋಪವನ್ನು ಮಾಡಿಕೊಳ್ಳದೇ ಶಾಂತ ಸ್ವಭಾವದಿಂದ ವರ್ತಿಸುತ್ತಿದ್ದನು.
ನಾವು ಜೀವನದಲ್ಲಿ ಎಂತಹ ಸಂದರ್ಭದಲ್ಲಿಯೂ ತಟಸ್ಥವಾಗಿ ಬದುಕಬೇಕೆಂದು ಕೃಷ್ಣ ಹೇಳುತ್ತಾನೆ. ಏನಾದರೂ ಅವಘಡ ಸಂಭವಿಸಿದಲ್ಲಿ ಆತ್ಮಸ್ಥೈರ್ಯ ಕಳೆದುಕೊಂಡರೆ ಯಾವುದೇ ಪ್ರಯೋಜನವಿಲ್ಲ ಬದಲಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳವುದು ಉತ್ತಮ.ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಶ್ರೀಮಂತನಾಗಿರುವವನ ಪರಿಸ್ಥಿತಿ ನಾಳೆ ಬದಲಾಗಬಹುದು. ಎಲ್ಲವನ್ನೂ ದೇವರ ಕೊಡುಗೆಯಾಗಿ ಸ್ವೀಕರಿಸಲು ಕಲಿಯಬೇಕು. ಎಂತಹ ಸಂದರ್ಭದಲ್ಲಿಯೂ ಶಾಂತರಾಗಿರಬೇಕು ಎನ್ನುವುದನ್ನು ವಿದ್ಯಾರ್ಥಿಗಳು ತಿಳಿಯಬೇಕು.
ಕರ್ತವ್ಯಗಳನ್ನು ಸಮರ್ಪಣೆಯಿಂದ ನಿರ್ವಹಿಸಿ :
ಪ್ರಪಂಚದ ಶ್ರೇಷ್ಠ ನಾಯಕನಾಗಿದ್ದ ಕೃಷ್ಣ, ಅಸಂಖ್ಯಾತ ಕಷ್ಟಗಳ ನಡುವೆಯೂ ಯಾವಾಗಲೂ ತನ್ನ ಕರ್ತವ್ಯಗಳನ್ನು ಸಮರ್ಪಣೆಯಿಂದ ನಿರ್ವಹಿಸುತ್ತಿದ್ದ. ವ್ಯಕ್ತಿಯ ಜೀವನದಲ್ಲಿರುವ ಕರ್ಮದ ಮಹತ್ವವನ್ನು ತಿಳಿಯಲು ಆತನು ನಮಗೆ ಈ ರೀತಿ ಹೇಳಿದ್ದಾನೆ. ಕೌರವರು ಮತ್ತು ಪಾಂಡವರ ನಡುವಿನ ಮಹಾನ್ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ಹೋರಾಡಲು ನಿರಾಕರಿಸಿದನು. ಯುದ್ಧದ ಇನ್ನೊಂದು ಬದಿಯಲ್ಲಿ ತನ್ನ ಸಂಬಂಧಿಕರನ್ನು ನೋಡಿ ನಂತರ ಅವನು ಕರ್ಮದ ಮಹತ್ವವನ್ನು ಉಲ್ಲೇಖಿಸಿ ಭಾಷಣ ಮಾಡಿದನು. "ನಾನು ಈ ಬ್ರಹ್ಮಾಂಡದ ಏಕೈಕ ಸೃಷ್ಟಿಕರ್ತ. ನಾನು ಬಯಸಿದಲ್ಲಿ 'ಸುದರ್ಶನ ಚಕ್ರ'ದಿಂದ ಕ್ಷಣಾರ್ಧದಲ್ಲಿ ಶತ್ರುಗಳನ್ನು ಕೊಲ್ಲಬಹುದು. ಆದರೆ ನಾನು ಮುಂದಿನ ಪೀಳಿಗೆಗೆ ಕರ್ಮದ ಮಹತ್ವವನ್ನು ಕಲಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ. ಮತ್ತು "ನಿಮ್ಮ ಕರ್ತವ್ಯವನ್ನು ಮಾಡಿ ಮತ್ತು ಅದರ ಫಲಿತಾಂಶದಿಂದ ದೂರವಿರಿ, ಫಲಿತಾಂಶದಿಂದ ಪ್ರೇರೇಪಣೆಗೆ ಒಳಾಗಬೇಡಿ, ಆ ಹಂತಕ್ಕೆ ತಲುಪುವ ಪ್ರಯಾಣವನ್ನು ಆನಂದಿಸಿ" ಎಂದು ಹೇಳಿದ್ದಾನೆ.
ನಾವು ನಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಜೀವನದಲ್ಲಿ ಕಾರ್ಯಗಳಿಗೆ ಆದ್ಯತೆ ನೀಡಲು ಕಲಿಯಬೇಕು. ಒಂದು ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅದು ನಿಮ್ಮನ್ನು ಪರಿಣಾಮಕಾರಿಯಾಗಿ ಕೆಲಸ ಮಾಡಿಸುತ್ತದೆ.
ಎಂದಿಗೂ ಇಷ್ಟಪಟ್ಟಿದ್ದನ್ನು ಬಿಟ್ಟುಕೊಡಬೇಡಿ :
ಕೃಷ್ಣನು ಕೊಳಲು ನುಡಿಸಲು ಇಷ್ಟಪಡುತ್ತಿದ್ದನು, ತನ್ನ ಕೊಳಲ ನಾದದಿಂದ ಸುತ್ತಮುತ್ತಲಿನವರನ್ನು ಉತ್ಸಾಹಭರಿತ ರಾಗಗಳಿಂದ ಮಂತ್ರಮುಗ್ಧಗೊಳಿಸುತ್ತಿದ್ದನು. ಆತ ತನ್ನ ಬದ್ಧತೆಗಳನ್ನು ಹೊಂದಿದ್ದರೂ ಎಂದಿಗೂ ತನ್ನ ಉತ್ಸಾಹವನ್ನು ಕಳೆದುಕೊಳ್ಳಲಿಲ್ಲ. ತನ್ನ ಜೀವನದಲ್ಲಿ ತಾನು ಪ್ರೀತಿಸಿದ ಸಂಗೀತವನ್ನು ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾದನು. ಯುದ್ಧದ ಸಮಯದಲ್ಲೂ ಕೂಡ ಅವನ ಕೊಳಲು ಅವನ ಪಕ್ಕದಲ್ಲಿತ್ತು.
ನಾವು ನಮ್ಮ ಹವ್ಯಾಸಗಳನ್ನು ಕಳೆದುಕೊಳ್ಳುತ್ತೇವೆ ಏಕೆಂದರೆ ನಾವು ನಮ್ಮ ಬದ್ಧತೆಗಳಿಂದ ಪ್ರಭಾವಿತರಾಗುತ್ತೇವೆ. ನೀವು ಎಷ್ಟೇ ಕಾರ್ಯನಿರತರಾಗಿದ್ದರೂ ನಿಮ್ಮ ಹವ್ಯಾಸಗಳನ್ನು ಬಿಡಬೇಡಿ. ಅಲ್ಲದೆ ನಾವು ಇಷ್ಟಪಡುವುದನ್ನು ಮಾಡುವುದು ನಮ್ಮ ಮನಸ್ಸಿಗೆ ಹೆಚ್ಚು ಮುದ ನೀಡುತ್ತದೆ ಹಾಗಾಗಿ ಯಾವುದೇ ಸಂದರ್ಭದಲ್ಲಿಯೂ ನೀವು ಇಷ್ಟಪಡುವುದನ್ನು ಬಿಟ್ಟುಕೊಡಬೇಡಿ.